ಇಂದು ನರಸಿಂಹರಾಜು ಅವರ 98 ನೇ ವರ್ಷದ ಹುಟ್ಟುಹಬ್ಬ. 24 ಜುಲೈ 1923 ರಲ್ಲಿ ಜನಿಸಿದ ನರಸಿಂಹರಾಜು ನಿಧನರಾಗಿದ್ದು 11 ಜುಲೈ 1979. ಹಾಸ್ಯ ಚಕ್ರವರ್ತಿಯ ಈ ವಿಶೇಷ ದಿನದಂದು ನಿಮಗಾಗಿ ಅವರ ಬಗ್ಗೆ ಕೆಲವೊಂದು ಆಸಕ್ತಿಕರ ವಿಚಾರಗಳು ಇಲ್ಲಿವೆ.
ಸಿನಿಮಾಗಳಲ್ಲಿ ಡಾ. ರಾಜ್ಕುಮಾರ್ ಹಾಗೂ ನರಸಿಂಹರಾಜು ಅವರ ಜೋಡಿ ಬಹಳ ಹಿಟ್ ಆಗಿತ್ತು. ರಾಜ್ಕುಮಾರ್ ಇದ್ದಲ್ಲಿ ನರಸಿಂಹರಾಜು ಇದ್ದೇ ಇರುತ್ತಾರೆ ಎನ್ನುವಂತಿತ್ತು ಆ ಜೋಡಿ. ಡಾ. ರಾಜ್ಕುಮಾರ್, ನರಸಿಂಹರಾಜು ಜೊತೆ ಬಾಲಕೃಷ್ಣ ಇರಲೇಬೇಕು ಎಂದು ಅದೆಷ್ಟೋ ನಿರ್ಮಾಪಕರು ಆಸೆ ಪಡುತ್ತಿದ್ದರು. ಅದಕ್ಕಾಗಿ ಬಾಲಕೃಷ್ಣ, ನರಸಿಂಹರಾಜು ಅವರು ಫ್ರೀ ಇದ್ದಾರಾ ಎಂದು ನೋಡಿಕೊಂಡು ಡಾ. ರಾಜ್ಕುಮಾರ್ ಅವರ ಡೇಟ್ಸ್ ಪಡೆಯುತ್ತಿದ್ದ ಉದಾಹರಣೆ ಉಂಟು.
ನರಸಿಂಹರಾಜು ಅವರಿಗೆ ಅಕ್ಕಿ ರೊಟ್ಟಿ, ಕಾಯಿ ಚಟ್ನಿ ಅಂದರೆ ಪಂಚಪ್ರಾಣ, ಅದರೊಂದಿಗೆ ಮದ್ರಾಸ್ ಚಿಗುರು ವೀಳ್ಯದೆಲೆ ಅವರ ಬಳಿ ಇದ್ದರೆ ಸ್ನೇಹಿತರೊಂದಿಗೆ ಸೇರಿ ಸಂತೋಷದಿಂದ ಪಗಡೆ ಆಡುತ್ತಿದ್ದರು.
ಡಾ. ರಾಜ್ಕುಮಾರ್ ಹಾಗೂ ನರಸಿಂಹರಾಜು ಜೊತೆಯಾಗಿ ಸುಮಾರು 100 ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ನರಸಿಂಹರಾಜು ಅವರು ಒಂದು ಕಾಲದಲ್ಲಿ 5000 ರೂಪಾಯಿ ಸಂಭಾವನೆ ಪಡೆಯುತ್ತಿದ್ದರೆ ಅದೇ ವೇಳೆ ಡಾ. ರಾಜ್ಕುಮಾರ್ 3000 ರೂಪಾಯಿ ಸಂಭಾವನೆ ಪಡೆಯುತ್ತಿದ್ದರು ಎಂದು ದಿವಂಗತ ನಟ ದಿನೇಶ್ ಒಮ್ಮೆ ಹೇಳಿದ್ದುಂಟು.
ಆ ಸಮಯದಲ್ಲಿ ನರಸಿಂಹರಾಜು ಅವರಿಗೆ ಅಮೆರಿಕದ 'ಸ್ಕೈ ಲಾಬ್' ಬೀಳುವ ಭಯ ಕಾಡುತ್ತಲೇ ಇತ್ತು. 1979 ಜುಲೈ 10 ರಂದು ಇಡೀ ಕುಟುಂಬವನ್ನು ಒಟ್ಟಿಗೆ ಸೇರಿಸಿ ಬೆಳಗ್ಗಿನಿಂದ ರಾತ್ರಿವರೆಗೆ ಹರಟಿ, ಊಟ ಮಾಡಿ, ಎಲೆ-ಅಡಿಕೆ ಹಾಕಿಕೊಂಡು ನಿದ್ರೆಗೆ ಜಾರಿದರು. ಮರುದಿನ ಬುಧವಾರ ಬೆಳಗ್ಗೆ 7 ಗಂಟೆಗೆ ನೋಡಿದರೆ ಅವರು ಚಿರನಿದ್ರೆಗೆ ಜಾರಿದ್ದರು.
ನರಸಿಂಹರಾಜು ಅವರ ಪತ್ನಿ ಶ್ರೀಮತಿ ಶಾರದಮ್ಮ. ಈ ದಂಪತಿಗೆ ಐವರು ಹೆಣ್ಣು ಮಕ್ಕಳು ಹಾಗೂ ನಾಲ್ಕು ಗಂಡು ಮಕ್ಕಳಿದ್ದಾರೆ. ನರಸಿಂಹರಾಜು ಸುಮಾರು 20 ವರ್ಷಗಳ ಕಾಲ ಚೆನ್ನೈನಲ್ಲಿ ಇದ್ದು ಹಿರಿಯ ಮಗನ ಒತ್ತಾಯಕ್ಕೆ ಬೆಂಗಳೂರಿಗೆ ಬಂದಿದ್ದರು.
ನರಸಿಂಹರಾಜು ಅಂದರೆ ನೆನಪಿಗೆ ಬರುವುದು ಸತ್ಯ ಹರಿಶ್ಚಂದ್ರ, ನಕ್ಕರೆ ಅದೇ ಸ್ವರ್ಗ, ರತ್ನಮಂಜರಿ, ಸಾಕ್ಷಾತ್ಕಾರ, ಸ್ಕೂಲ್ ಮಾಸ್ಟರ್, ಪ್ರೊ. ಹುಚ್ಚುರಾಯ, ಗಾಳಿ ಗೋಪುರ, ಜಾತಕರತ್ನ ಗುಂಡಾಜೋಯಿಸ, ಶ್ರೀಕೃಷ್ಣದೇವರಾಯ ಚಿತ್ರಗಳು. ಪ್ರೊ. ಹುಚ್ಚುರಾಯ ಚಿತ್ರವನ್ನು ನರಸಿಂಹರಾಜು ಅವರೇ ನಿರ್ಮಿಸಿ ನಟಿಸಿದ್ದರು.
ನರಸಿಂಹರಾಜು ಅವರ 90 ನೇ ಹುಟ್ಟುಹಬ್ಬಕ್ಕೆ ಅವರು ಪತ್ನಿ ಶಾರದಮ್ಮ ಹಾಸ್ಯ ಚಕ್ರವರ್ತಿ ಬಗ್ಗೆ ಒಂದು ಪುಸ್ತಕ ಬಿಡುಗಡೆ ಮಾಡಿದ್ದರು. 'ಈ ಮಹಾನ್ ತಂದೆಯ ಮಗಳಾಗಿ ಹುಟ್ಟಿರುವುದೇ ನನ್ನ ಅದೃಷ್ಟ, ಏಳೇಳು ಜನ್ಮದ ಪುಣ್ಯ. ಇಂತಹ ಹೃದಯವಂತ ವ್ಯಕ್ತಿಯು ಹೆಂಡತಿಗೆ ತಕ್ಕ ಗಂಡ, ಪ್ರೀತಿಯ ತಂದೆ, ಮುದ್ದಿನ ತಾತ, ಮೇರು ಹಾಸ್ಯ ನಟ, ಒಳ್ಳೆಯ ಸ್ನೇಹಿತ, ಇಂತ ವ್ಯಕ್ತಿ ಇನ್ನೆಂದೂ ಹುಟ್ಟಲಾರರು. ಅವರಿಗೆ ಅವರೇ ಸರಿಸಾಟಿ ಅವರನ್ನು ಇನ್ಯಾರು ಹೋಲುವುದಿಲ್ಲ' ಎಂದು ಮಗಳು ಸುದಾ ನರಸಿಂಹರಾಜು ತಮ್ಮ ಲೇಖನದಲ್ಲಿ ಬರೆದಿದ್ದಾರೆ.
1974 ರಲ್ಲಿ ನರಸಿಂಹರಾಜು ಪ್ರೊ. ಹುಚ್ಚುರಾಯ ಚಿತ್ರವನ್ನು ನಿರ್ಮಿಸಿ ನಟಿಸಿದ್ದರು. ನಮ್ಮ ತಂದೆಯ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಆಗಲಿ, ರಾಜ್ಯ ಪ್ರಶಸ್ತಿ ಆಗಲಿ ಬರಲಿಲ್ಲ ಎಂದು ಸುಧಾ ನರಸಿಂಹರಾಜು ಬೇಸರ ವ್ಯಕ್ತಪಡಿಸಿದ್ದರು. ಸುಧಾ ತಮ್ಮ ತಂದೆಯನ್ನು 'ಅಣ್ಣ' ಎಂದೇ ಕರೆಯುತ್ತಿದ್ದರು.
ಡಾ. ರಾಜ್ಕುಮಾರ್ ಮಾತ್ರವಲ್ಲ ಗುಬ್ಬಿ ವೀರಣ್ಣ, ಬಿ.ಆರ್. ಪಂತುಲು, ಹುಣಸೂರು ಕೃಷ್ಣಮೂರ್ತಿ, ಸಿ.ಬಿ. ಮಲ್ಲಪ್ಪ, ಶ್ರೀಕಂಠಮೂರ್ತಿ, ಜಿ.ವಿ. ಅಯ್ಯರ್, ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್, ಅಂದಿನ ಉಪರಾಷ್ಟ್ರಪತಿ ಬಿ.ಡಿ. ಜತ್ತಿ ಅಂತಹ ದಿಗ್ಗಜರು ನರಸಿಂಹರಾಜು ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. 'ಸದಾರಮೆ' ನಾಟಕದಲ್ಲಿ ನರಸಿಂಹರಾಜು ಅವರ ಪಾತ್ರ ನೋಡಿ ದಿಗ್ಗಜ ಗುಬ್ಬಿ ವೀರಣ್ಣ ಅವರು 'ನನ್ನ ಜಾಗಕ್ಕೆ ನೀನೆ ಸರಿಯಾದವನು ಕಣಯ್ಯ' ಎಂದು ಹೇಳಿದ್ದರಂತೆ.
ನನ್ನ ತಂದೆಗೆ ಹೆಣ್ಣುಮಕ್ಕಳ ಮೇಲೆ ಬಹಳ ಗೌರವ ಇತ್ತು. ಹೆಣ್ಣಿನ ಮೇಲಿನ ದೌರ್ಜನ್ಯವನ್ನು ಅವರು ಎಂದಿಗೂ ಸಹಿಸುತ್ತಿರಲಿಲ್ಲ. ನಮ್ಮ ಮನೆ ಮಾತ್ರವಲ್ಲ ಯಾರಾದರೂ ಚಿತ್ರೀಕರಣದ ಸೆಟ್ನಲ್ಲಿ ಕೂಡಾ ಮಹಿಳೆಯರಿಗೆ ಗೌರವ ನೀಡದಿದ್ದರೆ ಅಂತವರನ್ನು ಕಂಡರೆ ನರಸಿಂಹರಾಜು ಬಹಳ ಕೋಪ ವ್ಯಕ್ತಪಡಿಸುತ್ತಿದ್ದರು. 'ಭಕ್ತ ಕನಕದಾಸ' ಚಿತ್ರೀಕರಣದ ವೇಳೆ ಸೆಟ್ ಬಾಯ್ ಒಬ್ಬರು ನಾಯಕಿ ಕೃಷ್ಣಕುಮಾರಿ ಅವರನ್ನು ಏಕವಚನದಲ್ಲಿ ಮಾತನಾಡಿಸಿದ್ದಕ್ಕೆ ಅವರ ಬಳಿ ಕ್ಷಮೆ ಕೇಳುವಂತೆ ಮಾಡಿದ್ದರು ಎಂದು ಸುಧಾ ನರಸಿಂಹರಾಜು ಹೇಳುತ್ತಾರೆ.
ಪತ್ನಿ ಶಾರದಾ ಅವರನ್ನು ನರಸಿಂಹರಾಜು ಅವರು ಬಹಳ ಪ್ರೀತಿಸುತ್ತಿದ್ದರು ಎಂದು ಅವರ ಪುತ್ರಿ ಸುಧಾ ನರಸಿಂಹರಾಜು ಹೇಳುತ್ತಾರೆ. ನನ್ನೊಂದಿಗೆ ಎಷ್ಟೇ ನಟಿಯರು ನಟಿಸಿದ್ದರು ನೀನೇ ನನ್ನ ನಿಜವಾದ ಹೀರೋಯಿನ್. ನೀನು ಬಣ್ಣ ಹಚ್ಚದೆ ಬಹಳ ಸುಂದರವಾಗಿದ್ದೀಯ ಎಂದು ನರಸಿಂಹರಾಜು ಪತ್ನಿಗೆ ಆಗ್ಗಾಗ್ಗೆ ಹೇಳುತ್ತಿದ್ದರಂತೆ.
ನನ್ನ ತಂದೆ ಸಹಾಯ ಮಾಡಿ ಎಂದು ಯಾರ ಬಳಿಯೂ ಕೈ ಚಾಚಲಿಲ್ಲ. ಬದಲಾಗಿ ಕಷ್ಟದಲ್ಲಿರುವವರಿಗೆ ತಮ್ಮ ಕೈ ಮೀರಿ ಸಹಾಯ ಮಾಡಿದ್ದಾರೆ. 1964 ರಲ್ಲಿ ಶೃಂಗೇರಿಯ ಒಂದು ಕಾಲೇಜಿಗೆ ತಾವು ನಾಟಕ ಮಾಡಿ ಪಡೆದ ಹಣವನ್ನು ಸಹಾಯಾರ್ಥವಾಗಿ ನೀಡಿದ್ದರು. ಕ್ಷತ್ರಿಯ ಸಂಘ, ಮಠ, ಶಾಲೆಗಳಿಗೆ, ಮದುವೆ ಸಮಾರಂಭಗಳಿಗೆ ನರಸಿಂಹರಾಜು ಹಣದ ಸಹಾಯ ಮಾಡಿದ್ದಾರೆ ಎಂದು ಸುಧಾ ನರಸಿಂಹರಾಜು ಹಾಗೂ ನರಸಿಂಹರಾಜು ಆಪ್ತರು ಹೇಳುತ್ತಾರೆ.
ಒಟ್ಟಿನಲ್ಲಿ ಹಾಸ್ಯ ಚಕ್ರವರ್ತಿ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಸಿನಿಮಾಗಳ ಮೂಲಕ ಇಂದಿಗೂ ಎಲ್ಲರನ್ನೂ ನಗಿಸುತ್ತಿದ್ದಾರೆ. ಸಿನಿಮಾದಲ್ಲಿ ನರಸಿಂಹರಾಜು ಇದ್ದಾರೆ ಎಂದರೆ ಅಲ್ಲಿ ಭರಪೂರ ಹಾಸ್ಯಕ್ಕೆ ಕೊರತೆ ಇಲ್ಲ ಎಂದೇ ಅರ್ಥ. ನರಸಿಂಹರಾಜು ಅವರಿಗೆ ಅವರೇ ಸರಿಸಾಟಿ.