ಇಂದು ಬೆಳಗ್ಗೆ ಕಿಡ್ನಿ ವೈಫಲ್ಯದಿಂದ ನಿಧನರಾದ ಮೇಕಪ್ ಕೃಷ್ಣ ಅವರ ಅಂತಿಮ ಸಂಸ್ಕಾರವನ್ನು, ಅವರ ಕೊನೆ ಆಸೆಯಂತೆ ಹುಟ್ಟೂರು ಕುಂಬಳಗೋಡು ಸಮೀಪದ ಕೆಂಚನಪಾಳ್ಯದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ.
15 ದಿನಗಳಿಂದ ನಮ್ಮ ತಂದೆಯವರ ಆರೋಗ್ಯದಲ್ಲಿ ಏರುಪೇರಾಗಿದ್ದು. ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಎರಡೂ ಕಿಡ್ನಿಗಳು ಫೇಲ್ ಆಗಿ ಹಾಗೂ ಹೃದಯದಲ್ಲೂ ಸಮಸ್ಯೆ ಕಾಣಿಸಿಕೊಂಡು ಇಂದು ಬೆಳಗ್ಗೆ 6 ಗಂಟೆಯವರೆಗೆ ನಿಧನರಾಗಿದ್ದಾರೆ. ನಾನು ಸಾವನ್ನಪ್ಪಿದಾಗ ನನ್ನ ಹುಟ್ಟೂರಿನಲ್ಲೇ ಅಂತ್ಯಕ್ರಿಯೆ ಜರುಗಬೇಕೆಂದು ಕೃಷ್ಣ ಅವರು ಆಗ್ಗಾಗ್ಗೆ ಹೇಳುತ್ತಿದ್ದರು. ಅವರ ಆಸೆಯಂತೆ ಅವರ ಹುಟ್ಟೂರಿನಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಅವರ ಪುತ್ರಿ ತಿಳಿಸಿದ್ದಾರೆ.
ಬಾಲ್ಯದಿಂದಲೂ ಕಲೆಯ ಗೀಳು ಹೆಚ್ಚಿಸಿಕೊಂಡಿದ್ದ ಕೃಷ್ಣ, ಅಣ್ಣಾವ್ರ ಆದರ್ಶಗಳಿಂದ ಬಹಳ ಪ್ರಭಾವಿತರಾಗಿದ್ದರು. ಅಲ್ಲದೆ ರಂಗಭೂಮಿಗೆ ಕಲಿಯಲು ಹೊಸದಾಗಿ ಬರುವ ವಿದ್ಯಾರ್ಥಿಗಳಿಗಾಗಿ, ಅಣ್ಣಾವ್ರ ಬಗ್ಗೆ ಸಂಶೋಧನೆ ಮಾಡುವ ಸಲುವಾಗಿ, 'ರಂಗ ಜಂಗಮ' ಎಂಬ ಸಂಶೋಧನಾ ಅಧ್ಯಯನ ಕೇಂದ್ರವನ್ನು ಮೇಕಪ್ ಕೃಷ್ಣ ಸ್ಥಾಪಿಸಿದ್ದರು. ಆದರೆ ಈಗ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ಅವರ ಸ್ನೇಹಿತ ಗುರು ಪ್ರಸಾದ್ ತಿಳಿಸಿದರು. ಜನಪದ ಅಕಾಡೆಮಿ ಮಾಜಿ ಸದಸ್ಯರಾಗಿ ಕೂಡಾ ಕೆಲಸ ನಿರ್ವಹಿಸಿದ್ದ ಕೃಷ್ಣ, ಚಿತ್ರರಂಗಕ್ಕೆ ಬರುವ ಮುನ್ನವೇ ಮೇಕಪ್ ಕೃಷ್ಣ ಎಂದೇ ಹೆಸರಾಗಿದ್ದರು. ರಂಗಭೂಮಿಗಾಗಿ ತಮ್ಮ ಇಡೀ ಜೀವನವನ್ನು ಸವೆಸಿದ್ದ ಕೃಷ್ಣ, ಇನ್ನು ನೆನಪು ಮಾತ್ರ ಎಂದು ಜಾನಪದ ಅಕಾಡೆಮಿ ಮಾಜಿ ಸದಸ್ಯ ಆರ್.ವೆಂಕಟರಾಜ್ ಬೇಸರ ವ್ಯಕ್ತಪಡಿಸಿದರು.