ನಿರ್ದೇಶಕ ಬಿ.ಎಸ್. ಲಿಂಗದೇವರು ತನಗೆ ಧಮ್ಕಿ ಹಾಕಿದ್ದಾರೆ ಎಂದು ನಿರ್ದೇಶಕ ಮತ್ತು ನಿರ್ಮಾಪಕ ದಯಾಳ್ ಪದ್ಮನಾಭನ್ ಸೈಬರ್ ಕ್ರೈಂ ಹಾಗೂ ಸಿಸಿಬಿಗೆ ದೂರು ನೀಡಿದ್ದಾರೆ.
66ನೇ ರಾಷ್ಟ್ರೀಯ ಪ್ರಶಸ್ತಿಯಲ್ಲಿ ನಾತಿಚರಾಮಿ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದ್ದವು. ಆದರೆ ನಾತಿಚರಾಮಿ ಚಿತ್ರಕ್ಕೆ ನೀಡಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಹಿಂಪಡೆಯಬೇಕು ಎಂದು ಪದ್ಮನಾಭನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಯಾಕಂದ್ರೆ ಲಿಂಗದೇವರು ಅಕ್ಕ ಕಮ್ಯುನಿಕೇಶನ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರು. ಕಾನೂನು ಪ್ರಕಾರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರು ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗಿರುವ ಚಿತ್ರಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದೇ ಸಂಬಂಧ ಹೊಂದಿರಬಾರದು. ಆದರೆ ಈ ವಿಷಯದಲ್ಲಿ ಲಿಂಗದೇವರು ನಕಲಿ ದಾಖಲೆಗಳನ್ನು ನೀಡಿ ರಾಷ್ಟ್ರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ನಾತಿಚರಾಮಿ ಚಿತ್ರದ ಪರ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ಪದ್ಮನಾಭನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇನ್ನು, ಹೈಕೋರ್ಟ್ ಪದ್ಮನಾಭನ್ ಅರ್ಜಿಯನ್ನು ಪರಿಗಣಿಸಿ ರಾಷ್ಟ್ರ ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಲಾಬಿ ನಡೆದಿದೆ ಎಂಬುದನ್ನು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೆ. 11ರಂದು ಆದೇಶ ನೀಡಿತ್ತು. ಈ ಆದೇಶ ಬಂದ ನಂತರ ಸೆ. 17ರಂದು ರಾಷ್ಟ್ರಪ್ರಶಸ್ತಿ ಜೂರಿ ಮೆಂಬರ್ ಆಗಿರುವ ಲಿಂಗದೇವರು ಫೇಸ್ಬುಕ್ನಲ್ಲಿ ಮೌನ ದೌರ್ಬಲ್ಯ ಅಲ್ಲ, ಮುಂದೈತಿ ಆ ಕರಾಳ ರಾತ್ರಿ ಮತ್ತು ದಿನ ಎಂದು ನನಗೆ ಧಮ್ಕಿ ಹಾಕಿದ್ದರು. ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ ನಾನು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ನಿರ್ದೇಶಕ ಪದ್ಮನಾಭನ್ ಹೇಳಿದ್ದಾರೆ.