ಕಳೆದ ಮೂರು ತಿಂಗಳಿಂದ ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಸಾವಿನ ಸುದ್ದಿ ಕೇಳಿಬರುತ್ತಿದೆ. ಆತ್ಮಹತ್ಯೆ, ಅಪಘಾತ, ಹೃದಯಾಘಾತದಿಂದ ನಿಧನರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಕೂಡಾ ಸಾಲು ಸಾಲಾಗಿ ಇದೇ ರೀತಿಯ ಘಟನೆ ನಡೆಯುತ್ತಿದೆ.
ಕಳೆದ ವಾರ ನಟ ಸುಶೀಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಮಾರು 20 ವರ್ಷಗಳಿಂದ ದರ್ಶನ್ ಅವರಿಗೆ ಮೇಕಪ್ ಮಾಡುತ್ತಿದ್ದ ಶ್ರೀನಿವಾಸ್ ಎಂಬುವವರು ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶ್ರೀನಿವಾಸ್ ದರ್ಶನ್ ಅವರ ಪರ್ಸನಲ್ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು ದರ್ಶನ್ ಇವರನ್ನು ಸೀನ ಎಂದೇ ಕರೆಯುತ್ತಿದ್ದರು.
ಶ್ರೀನಿವಾಸ್ ಸಾವಿನ ಬಗ್ಗೆ ದರ್ಶನ್ ಟ್ಟೀಟ್ ಮಾಡಿ ಕಂಬನಿ ಮಿಡಿದಿದ್ದಾರೆ. 'ಎರಡು ದಶಕಗಳಿಂದ ನನ್ನ ಬಳಿ ಮೇಕಪ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೀನ ಅಲಿಯಾಸ್ ಶ್ರೀನಿವಾಸ್ ಇಂದು ಹೃದಯಾಘಾತದಿಂದ ಸಾವನ್ನಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ' ಎಂದು ದರ್ಶನ್ ಟ್ವೀಟ್ ಮಾಡುವ ಮೂಲಕ ಶ್ರೀನಿವಾಸ್ ಸಾವಿಗೆ ಕಂಬನಿ ಮಿಡಿದಿದ್ದಾರೆ.