ಜು.12ರಂದು ಜನಪ್ರಿಯ ನಟಿ ಕೃಷ್ಣ ಲೀಲಾ ಚಿತ್ರದ ನಾಯಕಿ ಮಯೂರಿ ಕ್ಯಾತರಿ ಅವರ ಜನುಮದಿನ ಆಚರಣೆ ಮಾಡಿಕೊಂಡರು. ಈ ವರ್ಷದ ವಿಶೇಷ ಏನಪ್ಪಾ ಅಂದರೆ ಮಯೂರಿ ಜೊತೆ ಪತಿ ಅರುಣ್ ಇದ್ದಾರೆ. ಮತ್ತು ಅವರ ಚಿತ್ರ ಆದ್ಯಂತ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
ಆದ್ಯಂತ ಮಹಿಳಾ ಪ್ರಧಾನ ಸಿನಿಮಾ. ಸಾಮಾಜಿಕ ಜಾಲತಾಣದಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿರುವವರು ನಿರ್ಮಾಪಕ ರಮೇಶ್ ಬಾಬು, ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾ. ಪುನೀತ್ ಶರ್ಮನ್ ಈ ಚಿತ್ರದ ನಿರ್ದೇಶಕರು. ಮಯೂರಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ದೀಪಾ ಪಾತ್ರದಾರಿಯಾಗಿರುವ ಮಯೂರಿ ಬೆಂಗಳೂರಿನಿಂದ ಅಚಾನಕ್ ಆಗಿ ಸಿಕ್ಕಿದ ಆಸ್ತಿಯನ್ನು ಪಡೆಯಲು ಸಕಲೇಶಪುರದ ಬಂಗಲೆಗೆ ಬರುತ್ತಾರೆ. ಆಗ ಅವರ ಹೆಸರಿನಲ್ಲಿ ಇದ್ದ ವಿಲ್ ಪಡೆಯಲು ಅನುಭವಿಸುವ ತೊಂದರೆಗಳ ಹೂರಣ ಈ ಚಿತ್ರದ ಪ್ರಮುಖ ಕಥಾ ಹಂದರ.
ಕಿಟ್ಟು ಸಂಕಲನ, ಕೃಷ್ಣ ಪ್ರಸಾದ್ ಸಂಭಾಷಣೆ, ಸ್ಯಾಂಡಿ ಸಂಗೀತ ನೀಡಿರುವ ಈ ಚಿತ್ರಕ್ಕೆ ಡಾ. ವಿ. ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ ಒದಗಿಸಿದ್ದಾರೆ. ದಿಲೀಪ್, ರಮೇಶ್ ಭಟ್, ಶ್ರೀನಾಥ್ ವಸಿಷ್ಠ, ಪ್ರಶಾಂತ್, ನಿಖಿಲ್ ಗೌಡ ಸಹ ತಾರಾಗಣದಲ್ಲಿದ್ದಾರೆ.