ಮಥುರಾ(ಉತ್ತರ ಪ್ರದೇಶ): ಸದಾ ಒಂದಿಲ್ಲೊಂದು ರೀತಿಯ ವಿವಾದಿತ ಹೇಳಿಕೆ ಮೂಲಕ ಚರ್ಚೆಯಲ್ಲಿರುವ ಬಾಲಿವುಡ್ನ ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ ಇದೀಗ ಉತ್ತರ ಪ್ರದೇಶದ ಬಂಕೆ ಬಿಹಾರಿಯ ವೃಂದಾವನದ ಕೃಷ್ಣನ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ವಿಶ್ವಪ್ರಸಿದ್ಧ ಠಾಕೂರ್ ಬಂಕೆ ಬಿಹಾರಿ ದೇವಸ್ಥಾನಕ್ಕೆ ಆಗಮಿಸಿದ ನಟಿ ಕಂಗನಾ ರಣಾವತ್, ಶ್ರೀಕೃಷ್ಣನ ಆಶೀರ್ವಾದ ಪಡೆದುಕೊಂಡರು. ಈ ವೇಳೆ ದೇವಸ್ಥಾನದ ಸ್ವಾಮಿಗಳು ಮಾಲೆ ಹಾಕಿ, ಪಟಕಾ ತೊಡಿಸಿ ಸ್ವಾಗತಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ನಟಿ, ವೃಂದಾವನದ ಕೃಷ್ಣನ ಆಶೀರ್ವಾದ ಪಡೆದು ಪಾವನಳಾದೆ. ಇದೇ ಮೊದಲ ಸಲ ವೃಂದಾವನಕ್ಕೆ ಬಂದಿದ್ದೇನೆ. ಆದರೆ, ಬೆಳಗ್ಗೆ ದೇವಸ್ಥಾನಕ್ಕೆ ಬರುವುದು ಸ್ವಲ್ಪ ತಡವಾಯಿತು ಎಂದರು.
ಕ್ಷಮೆ ಕೇಳಲ್ಲ ಎಂದ ಕಂಗನಾ
ಸ್ವಾತಂತ್ರ್ಯದ ವಿಚಾರ ಸೇರಿದಂತೆ ಅನೇಕ ವಿವಾದಿತ ಹೇಳಿಕೆ ಮೂಲಕ ಕೆಂಗಣ್ಣಿಗೆ ಗುರಿಯಾಗಿರುವ ನಟಿ ಕಂಗನಾ ಯಾವುದೇ ಕಾರಣಕ್ಕೂ ಕ್ಷಮೆಯಾಚನೆ ಮಾಡಲ್ಲ. ಯಾರು ಸುಳ್ಳು ಹೇಳುತ್ತಾರೋ ಅವರು ಕಷ್ಟಪಡಬೇಕಾಗುತ್ತದೆ. ಆದರೆ ಪ್ರಾಮಾಣಿಕರು, ಧೈರ್ಯವಂತರು ಯಾವಾಗಲೂ ದೇಶದ ಹಿತಾಸಕ್ತಿಯಿಂದ ಮಾತನಾಡುತ್ತಾರೆ. ಅದು ತಪ್ಪಲ್ಲ. ಈ ವಿಚಾರದಲ್ಲಿ ಕ್ಷಮೆಯಾಚನೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಇದನ್ನೂ ಓದಿರಿ: ಕಂಗನಾ ಕಾರಿಗೆ ಮುತ್ತಿಗೆ ಹಾಕಿದರಂತೆ ಪಂಜಾಬ್ ರೈತರು : ನಟಿಯಿಂದ ಕ್ಷಮಾಪಣೆಗೆ ಒತ್ತಾಯಿಸಿದರಂತೆ
ಕೃಷಿ ಕಾನೂನು ರದ್ದುಗೊಂಡಿದ್ದ ಸಂದರ್ಭದಲ್ಲೂ ನಾಲಿಗೆ ಹರಿಬಿಟ್ಟಿದ್ದ ನಟಿ ಕಂಗನಾ, ರೈತರ ವಿರೋಧವಾಗಿ ಹೇಳಿಕೆ ನೀಡಿದ್ದರು. ಇದೇ ವಿಚಾರವಾಗಿ ನಿನ್ನೆ ಆಕೆಯ ಕಾರಿಗೆ ಘೇರಾವ್ ಹಾಕಿದ್ದ ಅನ್ನದಾತರು ಕ್ಷಮಾಪಣೆ ಕೇಳಲು ಒತ್ತಾಯಿಸಿದ್ದರು.