ರಾಮನಗರ: ನವಜಾತ ಗಂಡು ಶಿಶುವನ್ನು ಬೀದಿಯಲ್ಲಿ ಬಿಸಾಡಿರುವ ಅಮಾನವೀಯ ಘಟನೆ ಚನ್ನಪಟ್ಟಣ ನಗರದಲ್ಲಿ ನಡೆದಿದೆ.
ನಗರದ ಕೆಎಚ್ಬಿ ಬಡಾವಣೆಯ ಖಾಲಿ ನಿವೇಶನವೊಂದರಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ನವಜಾತ ಶಿಶುವನ್ನು ಸುತ್ತಿ ಬಿಸಾಡಿ ಹೋಗಿದ್ದಾರೆ. ರಾತ್ರಿ ವೇಳೆಯಾಗಿದ್ದು ಮಳೆಯಲ್ಲಿ ನೆನೆಯುತ್ತಾ ಅಳುತ್ತಿದ್ದ ಮಗುವಿನ ಧ್ವನಿ ಕೇಳಿ, ಸ್ಥಳೀಯ ನಿವಾಸಿ ವಕೀಲ ನಾರಾಯಣಸ್ವಾಮಿ ಅವರು ಗ್ರಾಮಾಂತರ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಶಿವಕುಮಾರ್ ಅವರು ಸ್ಥಳೀಯರ ನೆರವಿನಿಂದ ಮಗುವನ್ನು ರಕ್ಷಿಸಿದ್ದಾರೆ. ಸದ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗು ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ಪ್ರಾಣಾಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ನವಜಾತ ಗಂಡು ಶಿಶುವನ್ನು ಬಿಟ್ಟು ಹೋದ ದುರುಳ ತಾಯಿಯನ್ನು ಪತ್ತೆ ಹಚ್ಚುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಸುರಿಯುವ ಮಳೆಯಲ್ಲಿ ನೆನೆಯುತ್ತಾ, ಚಳಿಯಲ್ಲಿ ನಡುಗುತ್ತಿದ್ದ ಶಿಶುವಿನ ಅವಸ್ಥೆ ಕಂಡು ಮರುಕಪಟ್ಟಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡಿದ್ದರೂ ಸ್ಥಳಕ್ಕೆ ಆಗಮಿಸದ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.