ಲಂಡನ್ (ಯುಕೆ): ಕೊರೊನಾ ವೈರಸ್ ಇಡೀ ವಿಶ್ವವನ್ನೇ ಆವರಿಸಿಕೊಂಡಿದ್ದು, ಬಹುತೇಕ ದೇಶಗಳಲ್ಲಿ ಜನ ಮನೆಯಿಂದ ಹೊರ ಬರದಂತೆ ಲಾಕ್ಡೌನ್ ಮಾಡಲಾಗಿದೆ. ಇತ್ತ ಯುಕೆಯಲ್ಲಿರುವ ಭಾರತೀಯರು ಸೇರಿದಂತೆ ವಿದೇಶಿ ಪ್ರಜೆಗಳ ವೀಸಾ ಅವಧಿ ಏ. 15ರವರೆಗೆ ವಿಸ್ತರಣೆ ಮಾಡಲಾಗಿದೆ.
ವೀಸಾ ಅವಧಿ ವಿಸ್ತರಣೆಯು ಕೊರೊನಾ ವೈರಸ್ ಪರಿಣಾಮದಿಂದಾಗಿ ಸ್ವದೇಶಕ್ಕೆ ಬರಲಾರದೆ ಸಂಕಷ್ಟಕ್ಕೆ ಸಿಲುಕಿರುವವರಿಗೆ ಸಹಕಾರಿಯಾಗಲಿದೆ. ಜನವರಿ 24ರ ನಂತರ ವೀಸಾ ಮುಗಿದಿರುವವರಿಗೆ ಇದು ಅನ್ವಯವಾಗಲಿದೆ. ಇವರೆಲ್ಲರೂ ಅಲ್ಲಿನ ಗೃಹ ಕಚೇರಿಯ CIH@homeoffice.gov.uk ಇಮೇಲ್ಗೆ ಸಂದೇಶ ಕಳುಹಿಸಿ ವೀಸಾ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ. ಜಾಗತಿಕ ಲಾಕ್ಡೌನ್ನಿಂದ ತಮ್ಮ ದೇಶಗಳಿಗೆ ತೆರಳಲು ಸಾಧ್ಯವಾಗದವರಿಗೆ ಇದು ಅನುಕೂಲವಾಗಿದೆ. ಅಲ್ಲದೆ, ಸಂಕಷ್ಟಕ್ಕೆ ಸಿಲುಕಿರುವವರು ಉಚಿತ ಸಹಾಯವಾಣಿ 08006781767 ಸಂಖ್ಯೆಗೆ ಬೆಳಗ್ಗೆ 9ರಿಂದ ಸಂಜೆ 5ರೊಳಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಒಂದು ವೇಳೆ ಸಹವಾಣಿಯ ಅವಧಿಯನ್ನು ವಿಸ್ತರಿಸುವ ಅವಶ್ಯಕತೆ ಬಂದರೆ ಅದನ್ನು ಪರಿಷ್ಕರಿಸಲಾಗುವುದು. ಅಗತ್ಯವೆನಿಸುವ ಇತರೆ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ವಿಸ್ತರಿಸುವುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಯುಕೆಯಲ್ಲಿರುವ ಜನರ ಆರೋಗ್ಯಕ್ಕೆ ಮೊದಲ ಆದ್ಯತೆಯನ್ನು ನೀಡಲಾಗಿದೆ. ತಾವು ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ವೀಸಾ ಅವಧಿಯನ್ನು ವಿಸ್ತರಿಸುವ ಮೂಲಕ ಜನ ಶಾಂತಿಯಿಂದ ಇರುವಂತೆ ಹಾಗೂ ಪ್ರಮುಖ ಸೇವೆಗಳಿಗಾಗಿ ಬಂದಿರುವವರು ತಮ್ಮ ಕೆಲಸವನ್ನು ಮುಂದುವರಿಸಬಹುದು ಎಂದು ಬ್ರಿಟಿಷ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ತಿಳಿಸಿದ್ದಾರೆ. ಇದು ಯುಕೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಎಲ್ಲಾ ಭಾರತೀಯರಿಗೆ ಸ್ವಲ್ಪ ಮಟ್ಟಿಗೆ ಧೈರ್ಯ ತುಂಬಿದಂತಾಗಿದೆ ಎಂದು ಭಾರತಕ್ಕೆ ಹೈಕಮಿಷನರ್ ಆಗಿರುವ ಜಾನ್ ಥಾಂಪ್ಸನ್ ಹೇಳಿದ್ದಾರೆ. ಪ್ರಸ್ತುತ ನಿರ್ಮಾಣವಾಗಿರುವ ಪರಿಸ್ಥಿತಿಯಲ್ಲಿ ಭಾರತಕ್ಕೆ ವಾಪಸ್ ಬರಲಾಗದೆ ಪ್ರಯಾಣಿಕರು ಯಾವ ರೀತಿ ಯಾತನೆ ಪಡುತ್ತಿದ್ದಾರೆ ಎಂಬುದರ ಅರಿವಿದೆ. ಸದ್ಯ ಯುಕೆ ನೀಡಿರುವ ಈ ಆದೇಶದಿಂದ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಭಾರತದಲ್ಲಿರುವ ಬ್ರಿಟಿಷ್ ಪ್ರಜೆಗಳಿಗೆ ಬೇಕಿರುವ ಅಗತ್ಯ ಸೌಲಭ್ಯಗಳಿಗಾಗಿ ನಮ್ಮ ಸಿಬ್ಬಂದಿ ಮತ್ತು ನಾನು ಹಗಲಿರುಳು ಶ್ರಮಿಸುತ್ತಿರುವುದಾಗಿ ಥಾಂಪ್ಸನ್ ತಿಳಿಸಿದ್ದಾರೆ.
ಇತ್ತ ಭಾರತ ಕೂಡ ದೇಶದಲ್ಲಿರುವ ಎಲ್ಲಾ ವಿದೇಶಿಗರ ವೀಸಾ ಅವಧಿಯನ್ನು ಏಪ್ರಿಲ್ 15ರ ಮಧ್ಯರಾತ್ರಿವರೆಗೆ ವಿಸ್ತರಿಸಿದೆ. ಈ ಸಂಬಂಧ ವಿದೇಶಿಯರ ನೋಂದಣಿ ಕಚೇರಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಇದೇ ಮಾರ್ಚ್ 17ರಿಂದ ಭಾರತ 37 ದೇಶಗಳ ಪ್ರಜೆಗಳಿಗೆ ಭಾರತ ಪ್ರವೇಶವನ್ನು ನಿಷೇಧಿಸಲಾಗಿದೆ. ಜೊತೆಗೆ ಮಾರ್ಚ್ 22ರಿಂದ ಎಲ್ಲಾ ವಾಣಿಜ್ಯ ವಿಮಾನಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಯುಕೆ, ಜಪಾನ್, ಯುಎಸ್, ಜರ್ಮನಿ, ಅಫ್ಘಾನಿಸ್ತಾನ ಮತ್ತು ರಷ್ಯಾ ದೇಶಗಳು ಭಾರತದಲ್ಲಿರುವ ತಮ್ಮ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ಪ್ರಯತ್ನಗಳನ್ನು ಮುಂದುವರಿಸಿವೆ. ಭಾರತದಲ್ಲಿರುವ ಜರ್ಮನಿ ಪ್ರಜೆಗಳನ್ನು ತಮ್ಮ ದೇಶಕ್ಕೆ ಕಳುಹಿಸಲು ದೆಹಲಿಯಲ್ಲಿರುವ ಜರ್ಮನ್ ರಾಯಭಾರಿ ಕಚೇರಿ ಯೂರೋಪಿಯನ್ ಒಕ್ಕೂಟ ರಾಷ್ಟ್ರಗಳೊಂದಿಗೆ ಸೇರಿ ಕೆಲಸ ಮಾಡುತ್ತಿದೆ. ಜೊತೆಗೆ ಲಿಯಾಸನ್ನಲ್ಲಿ 24X7 ಬಿಕ್ಕಟ್ಟು ಕೇಂದ್ರವನ್ನು ಆರಂಭಿಸಿದೆ. ಭಾರತ ಸರ್ಕಾರದ ನೆರವನ್ನು ಪಡೆದಿದೆ. ಜರ್ಮನ್, ಇಯು ಹಾಗೂ ಜರ್ಮನಿಯಲ್ಲಿ ಶ್ವಾಶತ ಪ್ರಜೆಗಳಾಗಿರುವ ಕೆಲ ಭಾರತೀಯರು ಸೇರಿ 500 ಮಂದಿಯನ್ನು ಹೊತ್ತ ಲೂಫ್ಥಾನ್ಸಾ ವಿಶೇಷ ವಿಮಾನ ಇಂದು ರಾತ್ರಿ ದೆಹಲಿಯಿಂದ ಫ್ರಾಂಕ್ಪ್ರುಟ್ಗೆ ತೆರಳಲಿದೆ. ಸುಮಾರು 5 ಸಾವಿರ ಮಂದಿ ಜರ್ಮನ್ರು ಭಾರತದಲ್ಲಿದ್ದಾರೆ ಎನ್ನಲಾಗಿದೆ.
ಜರ್ಮನಿಯ ರಾಯಭಾರಿ ವಾಲ್ಟರ್ ಲಿಂಡರ್, ರಿಶಿಕೇಷಿ ಮತ್ತು ಜೈಪುರದಲ್ಲಿದ್ದ ತಮ್ಮ ದೇಶದ ಪ್ರಜೆಗಳು ದೆಹಲಿ ವಿಮಾನ ನಿಲ್ದಾಣ ಸಮೀಪದ ಹೋಟೆಲ್ಗೆ ಬಂದು ಸ್ವದೇಶಕ್ಕೆ ಮರಳಲು ಸಿದ್ಧರಾಗುವಂತೆ ಸೂಚಿಸಿದ್ದಾರೆ. ಇಂದು ಬೆಳಗ್ಗೆ ಎರಡು ವಿಶೇಷ ವಿಮಾನಗಳು 388 ರಷ್ಯಾ ಪ್ರಜೆಗಳನ್ನು ಹೊತ್ತು ದೆಹಲಿಯಿಂದ ಪ್ರಯಾಣ ಬೆಳೆಸಿವೆ. ಗೋವಾದಿಂದ ಮಾಸ್ಕೋಗೆ 126 ಪ್ರಯಾಣಿಕರನ್ನು ಹೊತ್ತು ತಮ್ಮ ದೇಶದತ್ತ ಹೊರಟಿವೆ. ಮತ್ತೊಂದು ವಿಮಾನ ಸಿದ್ಧವಾಗಿದೆ. ಆದ್ರೆ ಸದ್ಯದ ಮಟ್ಟಿಗೆ ಪ್ರಯಾಣಿಕರನ್ನು ಕರದೊಯ್ಯುತ್ತಿಲ್ಲ ಎನ್ನಲಾಗಿದೆ. ಇತ್ತ ನೆರೆಯ ದೇಶ ಅಘ್ಘಾನ್ ಕೂಡ ಭಾರತದಲ್ಲಿರುವ ತಮ್ಮ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಭಾರತ ಸರ್ಕಾರದ ನೆರವಿನಿಂದ ನಾಳೆ ಅಫ್ಘಾನಿಸ್ತಾನಕ್ಕೆ ವಾಪಸ್ ಹೋಗಲಿದ್ದಾರೆ.