ಸ್ಯಾಂಡಲ್ವುಡ್ನಲ್ಲಿ ಪತ್ರಕರ್ತ ಹಾಗೂ ಕಲಾವಿದನಾಗಿ ಗುರುತಿಸಿಕೊಂಡಿರುವ ಯತಿರಾಜ್ ನಿರ್ದೇಶನದ 'ಸತ್ಯಂ ಶಿವಂ' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಹಾಗೂ ಎರಡು ಹಾಡುಗಳ ಪ್ರದರ್ಶನ ಇತ್ತೀಚೆಗೆ ನಡೆಯಿತು. ನಿರ್ದೇಶಕ ದಯಾಳ್ ಪದ್ಮನಾಭನ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಈ ವೇಳೆ ಮಾತು ಶುರುಮಾಡಿದ ನಿರ್ದೇಶಕ ಯತಿರಾಜ್, 'ಸತ್ಯಂ ಶಿವಂ' ಎಂದರೆ ಎರಡು ಪಾತ್ರಗಳ ಹೆಸರಲ್ಲ. ನಮ್ಮೊಳಗಿರುವ ಕೆಟ್ಟದ್ದನ್ನು ಹೊರಗೆ ಹಾಕಿ ನಿಷ್ಕಲ್ಮಶವಾದಾಗ ಸತ್ಯದ ದರ್ಶನವಾಗಿ ಶಿವನ ಅನುಭೂತಿಯಾಗುತ್ತದೆ. ಇದೇ ಕಥೆಯ ಸಾರಾಂಶ. ನಮ್ಮ ಚಿತ್ರದಲ್ಲಿ ಸಸ್ಪೆನ್ಸ್, ಥ್ರಿಲ್ಲರ್, ಸೆಂಟಿಮೆಂಟ್ ಎಲ್ಲವೂ ಇದೆ. ನಿರ್ಮಾಪಕರಾಗಿರುವ ಬುಲೆಟ್ ರಾಜು ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ನಾನು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಸತ್ಯಂ ಶಿವಂ ಉತ್ತಮವಾಗಿ ಬಂದಿದೆ ಎಂದರು.
ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಬಗ್ಗೆ ಮಾತನಾಡಿದ ಅವರು "ತುಕಾಲಿ ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ಹಲವರ ಕಣ್ಣಿಗೆ ಬ್ಯಾಡ್ ಬಾಯ್ ಆಗಿ ಕಂಡಿರುವುದು ಗೊತ್ತೇ ಇದೆ. ಕೆಲವರು ಅವರನ್ನು ವಿಲನ್, ಖಾಲಿಡಬ್ಬ ಎಂದು ಬ್ರಾಂಡ್ ಮಾಡಿರುವುದು ಸಹ ಆಗಿದೆ. ಬರೀ ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ, ಸತ್ಯಂ ಶಿವಂ ಚಿತ್ರತಂಡದವರ ಪಾಲಿಗೂ ತುಕಾಲಿ ಸಂತೋಷ್ ವಿಲನ್ ಆಗಿದ್ದಾರೆ. ಅವರ ಕಾಟ ತಡೆಯಲಾರದೆ, ಅವರನ್ನು ಚಿತ್ರತಂಡದಿಂದ ಕಿತ್ತು ಹಾಕಿದ ಪ್ರಸಂಗ ನಡೆದಿತ್ತು" ಎಂದು ಹೇಳಿದರು.
ಇದನ್ನೂ ಓದಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: 'ಚಾರ್ಲಿ 777'ಗೆ ಕನ್ನಡದ ಅತ್ಯುತ್ತಮ ಚಿತ್ರದ ಗರಿಮೆ
"ಸಂತೋಷ್ ನಮ್ಮ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಮ್ಮ ಚಿತ್ರಕ್ಕೂ ಅವರಿಂದ ಸಾಕಷ್ಟು ತೊಂದರೆಯಾಗಿದೆ. ಬಜೆಟ್ ಮತ್ತು ಸಮಯದ ಒತ್ತಡ ಇತ್ತು. ಅದರಲ್ಲೇ ಒಂದೊಳ್ಳೆಯ ಸಿನಿಮಾ ಮಾಡುವ ಪ್ರಯತ್ನ ಮಾಡಿದ್ದೇವೆ. ಆದರೆ ಸಂತೋಷ್ ಅವರಿಗೆ ಶಿಸ್ತಿಲ್ಲ. ಹೇಳಿದ ಸಮಯಕ್ಕೆ ಚಿತ್ರೀಕರಣಕ್ಕೆ ಬರುತ್ತಿರಲಿಲ್ಲ. ನಮ್ಮ ಚಿತ್ರದಲ್ಲಿ ಮೈಕೋ ನಾಗರಾಜ್, ಅರವಿಂದ್ ರಾವ್, ಮುನಿ, ಸಂಗೀತಾ ಅನಿಲ್, ಸುಂಧರಶ್ರೀ ಸೇರಿದಂತೆ ಹಲವು ಜನಪ್ರಿಯ ಕಲಾವಿದರಿದ್ದಾರೆ. ಅವರೆಲ್ಲರೂ ಬಹಳ ಶ್ರದ್ಧೆ, ಪ್ರೀತಿ ಮತ್ತು ಶಿಸ್ತಿನಿಂದ ಕೆಲಸ ಮಾಡಿದ್ದಾರೆ. ಆದರೆ, ಸಂತೋಷ್ ತುಂಬಾ ಕಾಟ ಕೊಟ್ಟಿದ್ದಾರೆ. ಕೊನೆಗೆ ಅರ್ಧ ಚಿತ್ರದಿಂದಲೇ ಅವರನ್ನು ತೆಗೆದು ಹಾಕಿದ್ದೇವೆ. ಇನ್ನೊಂದಿಷ್ಟು ದೃಶ್ಯ ಮತ್ತು ಹಾಡಿನಲ್ಲಿ ಅವರು ಇರಬೇಕಿತ್ತು. ಆದರೆ, ಅವರ ಅಶಿಸ್ತಿನಿಂದಾಗಿ ಅನಿವಾರ್ಯವಾಗಿ ಅವರನ್ನು ಕಿತ್ತು ಹಾಕಬೇಕಾಯಿತು" ಎಂದು ತಿಳಿಸಿದರು.
ಸತ್ಯಂ ಶಿವಂ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬುಲೆಟ್ ರಾಜ್ ಮಾತನಾಡಿ, "ಯತಿರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಕಥೆ ಹಾಗೂ ನನ್ನ ಪಾತ್ರ ಎರಡೂ ಚೆನ್ನಾಗಿದೆ" ಎಂದರು.
ಬುಲೆಟ್ ರಾಜ್ ಜೋಡಿಯಾಗಿ ಸಂಜನ ನಾಯ್ಡು ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಮೈಕೋ ನಾಗರಾಜ್, ಅರವಿಂದ್ ರಾವ್, ಸಂಗೀತಾ, ಸುಂದರಶ್ರೀ , ತೇಜಸ್ವಿನಿ, ತನುಜಾ ಹಾಗೂ ತುಕಾಲಿ ಸಂತೋಷ್ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ವಿ.ಮನೋಹರ್ ಸಂಗೀತ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಛಾಯಾಗ್ರಾಹಕ ವಿದ್ಯಾ ನಾಗೇಶ್ ಮತ್ತು ನೃತ್ಯ ನಿರ್ದೇಶನ ಫೈವ್ ಸ್ಟಾರ್ ಗಣೇಶ್ ಮಾಡಿದ್ದಾರೆ. ಸದ್ಯ ಟ್ರೇಲರ್ನಿಂದ ಗಮನ ಸೆಳೆಯುತ್ತಿರುವ ಸತ್ಯಂ ಶಿವಂ ಸಿನಿಮಾ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.
ಇದನ್ನೂ ಓದಿ: ಕಾಲ್ಪನಿಕ ಕಥೆಯಲ್ಲೊಂದು ಸೈಕಲಾಜಿಕಲ್ ಥ್ರಿಲ್ಲರ್; 'ಮನ್ ರೇ' ಚಿತ್ರದಲ್ಲಿ ಅಜಯ್ ರಾಜ್-ಐಶ್ವರ್ಯಾ ರಂಗರಾಜನ್