ಬೆಂಗಳೂರು: ಕನ್ನಡ ಚಿತ್ರರಂಗದ ಕನಸುಗಾರ, ಶೋ ಮ್ಯಾನ್, ಕ್ರೇಜಿಸ್ಟಾರ್, ರಣಧೀರ, ರವಿಮಾಮ ಹೀಗೆ ಹತ್ತು ಹಲವು ರೀತಿಯ ಜನಪ್ರಿಯತೆ ಹೊಂದಿರುವ ಕನ್ನಡದ ಹಿರಿಯ ನಟ ವಿ.ರವಿಚಂದ್ರನ್. ಕನ್ನಡ ಸಿನಿಮಾರಂಗವನ್ನು ಶ್ರೀಮಂತಗೊಳಿಸಿದ ಪ್ರೇಮಲೋಕದ ಹೆಡ್ ಮಾಸ್ಟರ್ ಕ್ರೇಜಿಸ್ಟಾರ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 62 ನೇ ವಸಂತಕ್ಕೆ ಕಾಲಿಟ್ಟಿರುವ ನಟ ಅಭಿಮಾನಿಗಳು ಹಾಗೂ ಕುಟುಂಬ ಸದಸ್ಯರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾರಂಗದಲ್ಲಿ 5 ದಶಕ ಪೂರೈಸಿರುವ ರವಿಚಂದ್ರನ್ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದ ಶ್ರೀಮಂತ ನಿರ್ಮಾಪಕ ವೀರಸ್ವಾಮಿ ಅವರ ಪುತ್ರ. 1971 ರಲ್ಲಿ ಇವರು ಕುಲ ಗೌರವ ಚಿತ್ರದಲ್ಲಿ ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಪ್ರೇಮಲೋಕ, ರಣಧೀರ, ಅಂಜದ ಗಂಡು, ರಾಮಾಚಾರಿ, ಅಣ್ಣಯ್ಯ ಹೀಗೆ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ಮಾಡಿರುವ ರವಿಚಂದ್ರನ್ಗೆ ಈಶ್ವರ ಎಂಬ ಮತ್ತೊಂದು ಹೆಸರಿದೆ. ಇದು ಅವರ ತಂದೆ ಹಾಗೂ ತಾಯಿ ಜಾತಕದ ಪ್ರಕಾರ ಇಟ್ಟ ಹೆಸರಂತೆ. ಮನೆಯಲ್ಲಿ ಇವರ ತಂದೆ - ತಾಯಿ ಈಶ್ವರ ಎಂದೇ ಕರೆಯುತ್ತಿದ್ದರಂತೆ.

ಸಹಜವಾಗಿ ಸಿನಿಮಾ ಸೆಲೆಬ್ರಿಟಿಗಳು ದೇವರ ಪೂಜೆ ಮಾಡುವುದು ಕಡಿಮೆ. ಆದರೆ, ಕ್ರೇಜಿಸ್ಟಾರ್ನ ಅಚ್ಚುಮೆಚ್ಚಿನ ದೇವರು ಈಶ್ವರ ಅನ್ನೋದು ಈ ಮಾತಿಗೆ ಪೂರಕವಾಗಿದೆ. ಏಕಾಂಗಿ ಸಿನಿಮಾ ಮಾಡಿ ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸುತ್ತಾರೆ. ಆ ಸಮಯಲ್ಲಿ ಸಿನಿಮಾ ಶೂಟಿಂಗ್ ಹೋದಾಗ ಈಶ್ವರ ಪ್ರತಿಮೆಯನ್ನು ಮನೆಗೆ ತೆಗೆದುಕೊಂಡು ಬರುತ್ತಾರೆ. ಆಗ 'ಮಲ್ಲ' ಚಿತ್ರ ಸೂಪರ್ ಹಿಟ್ ಆಗುತ್ತದಂತೆ. ಅಂದಿನಿಂದ ಕ್ರೇಜಿಸ್ಟಾರ್ ಈಶ್ವರನ ಪರಮ ಭಕ್ತನಾಗಿದ್ದಾರೆ.

ಅಮ್ಮನ ಕೈಯ ನೀರು ರವಿಚಂದ್ರನ್ನವರಿಗೆ ಲಕ್: ಸಾಕಷ್ಟು ಸೋಲು-ಗೆಲುವುಗಳನ್ನು ನೋಡಿರುವ ರವಿಚಂದ್ರನವರ ಸಕ್ಸಸ್ ಸೀಕ್ರೆಟ್ ಎಂದರೆ, ಅವರು ಸಿನಿಮಾ ಶೂಟಿಂಗ್ ಅಥವಾ ಯಾವುದೇ ಕೆಲಸಕ್ಕೆ ಹೋಗಬೇಕಾದರೆ ಇವರ ತಾಯಿ ಪಟ್ಟಮ್ಮಲ್ ಕೈಯಲ್ಲಿ ನೀರು ಕುಡಿದು ಹೋಗುವುದು. ಆಗ ಆ ಕೆಲಸ ಸಕ್ಸಸ್ ಆಗುತ್ತಿದ್ದವು ಎಂಬುದು ಕನಸುಗಾರನ ನಂಬಿಕೆ. ಆದರೆ ಈ ವರ್ಷ ಅವರು ತಮ್ಮ ತಾಯಿಯನ್ನು ಕಳೆದುಕೊಂಡರು.

ಪರಭಾಷಾ ನಟಿಯರನ್ನು ಕನ್ನಡಕ್ಕೆ ಕರೆತಂದರು: ಅಂದಿನ ಕಾಲದಲ್ಲಿ ಬಹುಬೇಡಿಕೆ ಹಾಗೂ ಸುಂದರ ನಟಿಮಣಿಗಳಾದ ಜೂಹಿ ಚಾವ್ಲಾ, ಖುಷ್ಬು, ಮೂನ್ ಮೂನ್ ಸೇನ್, ಮಧುಬಾಲ, ಮೀನಾ, ರೋಜಾ, ಭಾನುಪ್ರಿಯ, ಶಿಲ್ಪಾ ಶೆಟ್ಟಿ ಹೀಗೆ ಮುಂತಾದ ಹೆಸರಾಂತ ಪರಭಾಷಾ ನಾಯಕಿಯರನ್ನು ಕನ್ನಡಕ್ಕೆ ಕರೆತಂದ ಹೆಗ್ಗಳಿಕೆ ರವಿಚಂದ್ರನ್ಗೆ ಸಲ್ಲುತ್ತದೆ.

ದೊಡ್ಡ ಹಿಟ್ ಕೊಟ್ಟ ಪ್ರೇಮಲೋಕ: ಪ್ರೇಮಲೋಕ ಸಿನಿಮಾ ಬಂದು 35 ವರ್ಷಗಳಾಗುತ್ತಿವೆ. ಆದರೆ ಇಂದಿಗೂ ರವಿಚಂದ್ರನ್ ಅವರನ್ನೇ ಪ್ರೇಮಲೋಕದ ಹೀರೋ ಎಂದೇ ಗುರುತಿಸುತ್ತಾರೆ. ಆ ಕಾಲದಲ್ಲಿ ರವಿಚಂದ್ರನ್ 60 ಲಕ್ಷ ರೂ. ಖರ್ಚು ಮಾಡಿ ಈ ಸಿನಿಮಾ ಮಾಡುತ್ತಾರೆ. ಆಗ ಇವರ ತಂದೆ ವೀರಸ್ವಾಮಿ, ಇಷ್ಟು ಲಕ್ಷ ಖರ್ಚು ಮಾಡಿ ಸಿನಿಮಾ ಮಾಡಬೇಡ ಎಂದು ಹೇಳಿದ್ದರಂತೆ. ಆದರೂ ಪ್ರೇಮಲೋಕ ಸಿನಿಮಾ ಮಾಡಿ ಯಶಸ್ವಿಯಾಗುತ್ತಾರೆ. ಈ ಸಿನಿಮಾ ಆ ಕಾಲದಲ್ಲಿ ಕೋಟಿ ಕೋಟಿ ಹಣ ಗಳಿಸುತ್ತದೆ.
15ಕ್ಕೂ ಹೆಚ್ಚು ಚಿತ್ರಗಳಿಗೆ ಕ್ರೇಜಿಸ್ಟಾರ್ ಸಂಗೀತ: ಕಡಿಮೆ ಸಮಯದಲ್ಲಿ ನಟ, ನಿರ್ಮಾಪಕ ಹಾಗೂ ನಿರ್ದೇಶಕನಾಗಿ ತನ್ನ ಪ್ರತಿಭೆ ಪ್ರದರ್ಶಿಸಿದ ಕ್ರೇಜಿಸ್ಟಾರ್, 1999 ರಲ್ಲಿ ಬಂದ 'ನಾನು ನನ್ನ ಹೆಂಡ್ತೀರು' ಸಿನಿಮಾ ಮೂಲಕ ಸಂಗೀತ ನಿರ್ದೇಶಕನ ಪಟ್ಟ ಅಲಂಕರಿಸುತ್ತಾರೆ. ಓ ನನ್ನ ನಲ್ಲೆ, ಏಕಾಂಗಿ, ಮಲ್ಲ, ಹಠವಾದಿ, ಅಪೂರ್ವ ಸೇರಿದಂತೆ 15 ಕ್ಕೂ ಹೆಚ್ಚು ಚಿತ್ರಗಳಿಗೆ ಇವರ ಸಂಗೀತದ ಗಾನಸುಧೆ ಇದೆ.

ರವಿಚಂದ್ರನ್ ಸಿನಿಮಾದಿಂದ ದುಡಿದ ಹಣದಿಂದ ಯಾವುದೇ ಜಮೀನು, ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟುವ ಕೆಲಸ ಮಾಡಲಿಲ್ಲ. ಆ ಹಣವನ್ನು ಪೂರ್ತಿ ಸಿನಿಮಾಕ್ಕೆ ಹಾಕುತ್ತಿದ್ದರಂತೆ. ಸಿನಿಮಾ ಮೇಲೆ ಅಪಾರ ಪ್ರೀತಿ ಹಾಗೂ ವ್ಯಾಮೋಹವಿದ್ದ ರವಿಚಂದ್ರನ್, ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಅನ್ನೋದು ಅವರಿಗಿದ್ದ ಮಹದಾಸೆ. ಸದ್ಯ 62ನೇ ವಯಸ್ಸಿನಲ್ಲೂ ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿರೋ ಕ್ರೇಜಿಸ್ಟಾರ್ ಜಡ್ಜ್ಮೆಂಟ್, ಗೌರಿ, ಮಹಾಲಕ್ಷ್ಮಿ, ತ್ರಿಶೂಲಂ ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಿಯಾಲಿಟಿ ಶೋನಲ್ಲಿಯೂ ಮಿಂಚುತ್ತಿದ್ದಾರೆ.
ಇದನ್ನೂ ಓದಿ: 'ಮಂಡ್ಯದ ಗಂಡಿ'ಗೆ 71ನೇ ಹುಟ್ಟುಹಬ್ಬ: ರೆಬೆಲ್ ಸ್ಟಾರ್ ಕುರಿತು 10 ಸ್ವಾರಸ್ಯಕರ ಸಂಗತಿ!