ತುಮಕೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್ಡೌನ್ ಆಗಿ ಅಸಂಘಟಿತ ಕಾರ್ಮಿಕ ವಲಯ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಈ ಸಂದರ್ಭದಲ್ಲಿ ಮಹಾರಾಷ್ಟ್ರದ ವಲಸೆ ಕಾರ್ಮಿಕರ ಪರ ಜಪಾನಂದ ಸ್ವಾಮೀಜಿ ನಿಂತಿದ್ದಾರೆ.
ಪಾವಗಡ ತಾಲೂಕಿನ ತಿಮ್ಮಮ್ಮನಹಳ್ಳಿ ಮತ್ತು ಚಿಕ್ಕಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಮಹಾರಾಷ್ಟ್ರದ ಇದ್ದಿಲು ಸುಡುವ ಕಾರ್ಮಿಕರನ್ನು ಭೇಟಿ ಮಾಡಿ ಮಾತನಾಡಿದ ಜಪಾನಂದ ಸ್ವಾಮಿ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೂಡ ಕೆಲಸದಲ್ಲಿ ತೊಡಗಿರುವುದು ಕಂಡರೆ ಇದಕ್ಕಿಂತ ದುರಂತ ಬೇರೊಂದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಜೊತೆಗೆ ಇಲ್ಲಿನ ಕಾರ್ಮಿಕರಿಗೆ ಶ್ರೀರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಸುಧಾಮೂರ್ತಿಯವರ ಸಹಕಾರದಿಂದ ಎರಡು ತಿಂಗಳಿಗೆ ಆಗುವಷ್ಟು ಪಡಿತರ, ಬಟ್ಟೆ ಹಾಗೂ ಗುಡಿಸಲಿಗೆ ಟಾರ್ಪಾಲ್ ಕೂಡ ವಿತರಣೆ ಮಾಡುತ್ತೇನೆಂದು ಸ್ವಾಮೀಜಿ ಭರವಸೆ ನೀಡಿದರು.