ಶಿವಮೊಗ್ಗ: ಒತ್ತುವರಿಯಾಗಿದ್ದ ಜಾಗವನ್ನು ನಗರಸಭೆ ಆಡಳಿತ ಪೌರಾಯುಕ್ತ ತೆರವು ಮಾಡಿಸಿರುವ ಘಟನೆ ಸಾಗರ ಪಟ್ಟಣ ಸಮೀಪದ ಬಳಸಗೋಡುವಿನಲ್ಲಿ ನಡೆದಿದೆ.
ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಒತ್ತುವರಿ ಮಾಡಲಾಗಿತ್ತು. ಈ ಬಳಸಗೋಡು ಸರ್ವೇ ನಂ. 36ರಲ್ಲಿನ 6 ಎಕರೆ ಸರ್ಕಾರಿ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಮೀಸಲು ಇರಿಸಲಾಗಿತ್ತು. ಆದರೆ ಈ ಜಾಗದಲ್ಲಿ ಕಳೆದ ಕೆಲವು ವರ್ಷಗಳಿಂದ ಕೆಲ ವ್ಯಕ್ತಿಗಳು ಸಾಗುವಳಿ ಮಾಡಿ, ಮನೆ ನಿರ್ಮಾಣ ಸೇರಿದಂತೆ ಇನ್ನಿತರೆ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಒತ್ತುವರಿ ನಡೆಸಿದ್ದರು. ಕಳೆದ ವರ್ಷ ಕೆಲವು ಪ್ರಭಾವಿಗಳು 6 ಎಕರೆ ಜಾಗವನ್ನು ಒತ್ತುವರಿ ಮಾಡಿ, ನಿವೇಶನವಾಗಿ ಮಾರ್ಪಡಿಸಿ ಮಾರಾಟ ಮಾಡಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ನಗರಸಭೆ ಮನೆಗಳನ್ನು ನೆಲಸಮ ಮಾಡಿತ್ತು.
ನಗರ ವ್ಯಾಪ್ತಿಯಲ್ಲಿರುವ ನಗರಸಭೆ ಜಾಗವನ್ನು ಗುರುತಿಸಿ ಬೇಲಿ ಹಾಕುವಂತೆ ಶಾಸಕ ಎಚ್.ಹಾಲಪ್ಪ ಹರತಾಳು ಎಸ್.ಎಫ್.ಸಿ. ವಿಶೇಷ ಅನುದಾನದಲ್ಲಿ 30 ಲಕ್ಷ ರೂ. ನೀಡಿದ್ದರು. ಆದರೆ ನಗರಸಭೆ ಅಧಿಕಾರಿಗಳು ಜಾಗಗುರುತಿಸಿ ಬೇಲಿ ಹಾಕದೆ ಇರುವುದಕ್ಕೆ ಶಾಸಕರು ನಗರಸಭೆ ಪೌರಾಯುಕ್ತರನ್ನು ಸೇರಿದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ನಗರಸಭೆ ಹಾಗೂ ಕಂದಾಯ ಇಲಾಖೆ ವತಿಯಿಂದ ಒತ್ತುವರಿ ತೆರವು ಮಾಡಿದ್ದಾರೆ. ಜಾಗ ಕಬಳಿಕೆಗಾಗಿ ನಿರ್ಮಿಸಿದ್ದ ಕಾಪೌಂಡ್ಗಳನ್ನ ಒಡೆದು ಹೊಸದಾಗಿ ನಗರಸಭೆ ವತಿಯಿಂದ ಬೇಲಿ ನಿರ್ಮಿಸುವ
ಕೆಲಸಕ್ಕೆ ಚಾಲನೆ ನೀಡಲಾಯಿತು.
ಪೌರಾಯುಕ್ತರ ತೆರವು ಕಾರ್ಯಾಚರಣೆಯನ್ನು ಇನ್ನಷ್ಟು ಬಿಗುಗೊಳಿಸುವ ಅಗತ್ಯವಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಒತ್ತುವರಿ ತೆರವು ಕುರಿತು ಮಾತನಾಡಿದ ಪೌರಾಯುಕ್ತ ಎಚ್.ಕೆ.ನಾಗಪ್ಪ, ಶಾಸಕರ ಸೂಚನೆ ಹಾಗೂ ಉಪವಿಭಾಗಾಧಿಕಾರಿಗಳ ಮಾರ್ಗದರ್ಶನದಲ್ಲಿ ಸುಮಾರು 6 ಎಕರೆ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಿ, ನಗರಸಭೆ ವಶಕ್ಕೆ ಪಡೆಯಲಾಗಿದೆ ಎಂದರು.