ಶಿವಮೊಗ್ಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಜ. 25ರಂದು "ಯಂತ್ರಶ್ರೀ" ಯೋಜನೆ ಜಾರಿಯಾಗಲಿದ್ದು, ಈ ಕಾರ್ಯಕ್ರಮ ಹಾಗೂ ಚೈತನ್ಯ ಸೌಧ ಕಟ್ಟಡ ಉದ್ಘಾಟನೆಯನ್ನು ಡಾ. ವೀರೇಂದ್ರ ಹೆಗ್ಗಡೆ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ ನೆರವೇರಿಸಲಿದ್ದಾರೆ ಎಂದು ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲ್ಯಾನ್ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರಿಗೆ ಭತ್ತದ ಯಾಂತ್ರೀಕರಣ ಕೌಶಲ್ಯವನ್ನು ತೋರಿಸಿಕೊಡಲು ಮಾನವ ಚಾಲಿತ ಮತ್ತು ಸ್ವಯಂ ಚಾಲಿತ ಯಂತ್ರಗಳ ಪ್ರದರ್ಶನ ಹಾಗೂ ತಜ್ಞರಿಂದ ಯಂತ್ರೋಪಕರಣಗಳ ಬಳಕೆಯ ಕುರಿತು ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತದೆ. ಹಸಿರು ಎಲೆ ಗೊಬ್ಬರ ತಯಾರಿ, ನರ್ಸರಿ ತಯಾರಿ ಮತ್ತು ಭತ್ತ ನಾಟಿ ಯಂತ್ರಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಹಾಗಾಗಿ ರೈತರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಜೊತೆಗೆ ಕಾರ್ಯಕ್ರಮದಲ್ಲಿ ಇತ್ತೀಚಿನ ದಿನಗಳಲ್ಲಿ ಬರಗಾಲ, ಕೂಲಿ ಕಾರ್ಮಿಕರ ಕೊರತೆ, ಬೆಲೆ ಸಮಸ್ಯೆ ಮುಂತಾದ ಸಮಸ್ಯೆಗಳನ್ನು ರೈತರು ಅನುಭವಿಸುತ್ತಿದ್ದಾರೆ. ಇದರಿಂದ ಬಹುತೇಕ ರೈತರು ಬೇಸಾಯದಿಂದ ವಿಮುಖರಾಗುತ್ತಿದ್ದಾರೆ. ವಾಣಿಜ್ಯ ಬೆಳೆಗಳತ್ತ ರೈತರು ಹೆಚ್ಚು ಆಕರ್ಷಿತರಾಗುತ್ತಿರುವುದು ಮತ್ತೊಂದು ಕಾರಣ. ಹಾಗಾಗಿ ಕಡಿಮೆ ನೀರನ್ನು ಉಪಯೋಗಿಸಿ, ಉತ್ಪಾದನಾ ವೆಚ್ಚವನ್ನು ತಗ್ಗಿಸಿ ಭತ್ತದ ಬೇಸಾಯವನ್ನು ಲಾಭದಾಯಕವಾಗಿ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಯಂತ್ರಶ್ರೀ ಯೋಜನೆ ಕಾರ್ಯಕ್ರಮ ಜಾರಿಗೆ ತಂದು ಈ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ 5,000 ಹೆಕ್ಟೇರ್ ಪ್ರದೇಶದಲ್ಲಿ ಯಾಂತ್ರೀಕೃತ ಭತ್ತ ಬೇಸಾಯವನ್ನು ಹಮ್ಮಿಕೊಳ್ಳುವ ಗುರಿ ಇಟ್ಟುಕೊಂಡಿದ್ದೇವೆ ಎಂದರು.