ಮೈಸೂರು: ಐಟಿಸಿ ಕಾರ್ಖಾನೆ ಮಹಿಳಾ ಕಾರ್ಮಿಕಳೊಬ್ಬಳ ನಿಗೂಢ ಕೊಲೆ ರಹಸ್ಯ ಬಯಲಾಗಿದೆ. ಪ್ರಿಯತಮೆಯ ಕಿರುಕುಳಕ್ಕೆ ಬೇಸತ್ತು ಪ್ರೇಮಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರವಿಚಂದ್ರ (25) ಬಂಧಿತ ಆರೋಪಿ. ಫೆಬ್ರವರಿ 23 ರಂದು ನಂಜನಗೂಡಿನ ಹಿಮ್ಮಾವು ಕೈಗಾರಿಕಾ ಪ್ರದೇಶದ ಹೊರವಲಯದಲ್ಲಿ ಐಟಿಸಿ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಪಲ್ಲವಿ ಎಂಬಾಕೆಯನ್ನು ಹಿಮ್ಮಾವು ಗ್ರಾಮದ ನಿರ್ಜನ ಪ್ರದೇಶದಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ, ಭೀಕರವಾಗಿ ಕೊಲೆ ಮಾಡಲಾಗಿತ್ತು. ಬಳಿಕ ಆಕೆಯ ಮೃತದೇಹ ಪತ್ತೆಯಾಗಿತ್ತು.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ನಂಜನಗೂಡು ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂರು ಮಕ್ಕಳ ತಾಯಿಯಾಗಿದ್ದ ಪಲ್ಲವಿ, ಐಟಿಸಿ ಕಾರ್ಖಾನೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ರವಿಚಂದ್ರನ ಜೊತೆ ವಿವಾಹೇತರ ಸಂಬಂಧ ಬೆಳೆಸಿಕೊಂಡಿದ್ದಳು. ಅವಿವಾಹಿತನಾಗಿದ್ದ ರವಿಚಂದ್ರಗೆ ಸಂಬಳ ಕೊಡುವಂತೆ ಪಲ್ಲವಿ ಪೀಡಿಸುತ್ತಿದ್ದಳು. ಅಲ್ಲದೇ ಬೇರೆ ಹುಡುಗಿಯನ್ನು ಮದುವೆ ಮಾಡಿಕೊಳ್ಳಬಾರದೆಂದು ತಾಕೀತು ಮಾಡಿದ್ದಳು ಎನ್ನಲಾಗ್ತಿದೆ. ಇದರಿಂದ ಬೇಸತ್ತ ರವಿಚಂದ್ರ ಪಲ್ಲವಿ ಮೇಲೆ ಹಲ್ಲೆ ಮಾಡಿ, ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.