ಮೈಸೂರು: ಸರ್ವೇ ನಂ. 98ರ ಮುಡಾ ಜಾಗವನ್ನು ಒತ್ತುವರಿ ಮಾಡಿಕೊಂಡು ಸಾ.ರಾ.ಮಹೇಶ್ ಕನ್ವೆನ್ಷಲ್ ಹಾಲ್ ಕಟ್ಟಿದ್ದಾರೆ ಎಂಬ ಮಾಹಿತಿ ಇದೆ. ಒತ್ತುವರಿಯಾಗಿದ್ದರೆ ಸರ್ಕಾರಕ್ಕೆ ಕನ್ವೆನ್ಷನ್ ಹಾಲ್ ನೀಡುತ್ತೇನೆ ಎಂಬ ಹೇಳಿಕೆಗೆ ಸಾ.ರಾ.ಮಹೇಶ್ ಬದ್ಧರಾಗಿರಬೇಕು ಎಂದು ಕರ್ನಾಟಕ ರಾಜ್ಯ ಹಿಂದುಗಳ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ಹೇಳಿದರು.
ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಏಕಾಂಗಿ ಪ್ರತಿಭಟನೆ ನಡೆಸಿ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ವೇ ನಂಬರ್ 98 ಮೂಡ ಸ್ವತ್ತು ಎಂಬ ದಾಖಲೆ ಇದೆ. ಇಲ್ಲಿ ಒತ್ತುವರಿ ಮಾಡಿಕೊಂಡು ಸಾ.ರಾ.ಮಹೇಶ್ ಕನ್ವೆನ್ಷನ್ ಹಾಲ್ ಕಟ್ಟಿದ್ದಾರೆ. ಒತ್ತುವರಿಯಾಗಿದ್ದರೆ ಸರ್ಕಾರಕ್ಕೆ ಜಾಗ ಕೊಡುವುದಾಗಿ ಅವರು ಪ್ರತಿಭಟನೆ ವೇಳೆ ಹೇಳಿದ್ದರು. ಆದರೆ, ಒತ್ತುವರಿ ಮಾಡಿ, ಕನ್ವೆನ್ಷನ್ ಹಾಲ್ ಕಟ್ಟಲಾಗಿದೆ ಎಂಬ ಮಾಹಿತಿ ಇರುವುದರಿಂದ ಅವರು ಹೇಳಿದ ಮಾತಿನಂತೆ ನಡೆದುಕೊಳ್ಳಲಿ ಎಂದು ತಿಳಿಸಿದರು.
ಅಲ್ಲದೆ, ಸರ್ವೇ ನಂಬರ್ 82ರಲ್ಲಿ 160 ಎಕರೆ 30 ಗುಂಟೆ ಸರ್ಕಾರಿ ಜಾಗ 1921ರಿಂದ ಇಲ್ಲಿಯವರೆಗೂ ಸರ್ಕಾರಿ ಜಾಗ ಎಂದು ತೋರಿಸಲಾಗಿದೆ, ಆದರೆ, 1972ರಲ್ಲಿ ತಾಯಮ್ಮ ಎನ್ನುವವರು ಎಚ್.ಆರ್.ಶಶಾಂಕ್ ಅರಸ್ ಎನ್ನುವವರಿಗೆ 5 ಸೈಟ್ ಮಾರಿದ್ದಾರೆ. ಇದಕ್ಕೆಲ್ಲ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಲಾಗಿದೆ. ಆದರಿಂದ ಮೈಸೂರಿನಲ್ಲಿ ಭೂ ಮಾಫಿಯ ಬಗ್ಗೆ ಸಮಗ್ರವಾಗಿ ಹಾಗೂ ನಿಷ್ಪಕ್ಷಪಾತವಾಗಿ ಉನ್ನತ ಐಎಎಸ್ ಅಧಿಕಾರಿಗಳಿಂದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಮುಡಾ ಆಯುಕ್ತ ಡಾ. ನಟೇಶ್ ವ್ಯಾಪಕವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಅವರನ್ನು ಅಮಾನತು ಮಾಡಿ ತನಿಖೆ ನಡೆಸಬೇಕು ಎಂದರು.
ಇದನ್ನೂ ಓದಿ: ಇಂದಿನಿಂದ ಶೈಕ್ಷಣಿಕ ವರ್ಷ ಆರಂಭ.. ಯಾವುದೇ ಕಾರಣಕ್ಕೂ ಮುಂದೂಡಲ್ಲ ಎಂದ ಶಿಕ್ಷಣ ಇಲಾಖೆ