ಮೈಸೂರು: ಪತಿ-ಪತ್ನಿಯ ಜಗಳದಿಂದ ಮಾವ ಕಂಗಾಲಾಗಿದ್ದು, ಕೊನೆ ಕಾಲದಲ್ಲಿ ನನಗೆ ರಕ್ಷಣೆ ಕೊಟ್ಟು, ನೆಮ್ಮದಿಯಾಗಿ ಸಾಯಲು ಬಿಡಿ ಎಂದು ಅಳಲು ತೋಡಿಕೊಂಡಿದ್ದಾರೆ.
ನಗರದ ಹೊರವಲಯದ ರೂಪಾ ನಗರದಲ್ಲಿ ವಾಸವಿರುವ ಕಂಡೆರಾಮಶೆಟ್ಟಿ ಎಂಬವರು ತಮ್ಮ ಮಗ ಶ್ರೀನಿವಾಸ್ ರಾಜ್ಗೆ ಆರು ವರ್ಷದ ಹಿಂದೆ ಬಳ್ಳಾರಿ ಮೂಲದ ಅರುಂಧತಿ ಜೊತೆ ವಿವಾಹ ಮಾಡಿದ್ದಾರೆ. ಆರಂಭದಿಂದಲೂ ಈ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ನೊಂದ ಶ್ರೀನಿವಾಸ್ ರಾಜ್ ಪತ್ನಿಗೆ ವಿಚ್ಛೇದನ ನೀಡಿದ್ದ. ಕೋರ್ಟ್ ಆತನಿಗೆ ಪ್ರತಿ ತಿಂಗಳು ಹೆಂಡತಿಗೆ 6,500 ಜೀವನಾಂಶ ನೀಡುವಂತೆ ಆದೇಶಿಸಿತ್ತು. ಅದರಂತೆ ಆತ ಜೀವನಾಂಶ ನೀಡುತ್ತಿದ್ದ. ಆದರೆ ಈ ನಡುವೆ ವೃದ್ಧ ಮಾವನ ಹೊಸ ಮನೆಯನ್ನು ಪಡೆಯಲೆಂದು ಸೊಸೆ ಅರುಂಧತಿಯು ಕೆಲ ವ್ಯಕ್ತಿಗಳನ್ನು ಮಧ್ಯರಾತ್ರಿ ಕರೆದುಕೊಂಡು ಬಂದು ಗಲಾಟೆ ಮಾಡಿದ್ದಾಳೆ ಎಂದು ಆರೋಪಿಸಿರುವ ಕಂಡೆರಾಮಶೆಟ್ಟಿ ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಮಾತನಾಡಿರುವ ಕಂಡೆರಾಮಶೆಟ್ಟಿ, ನನಗೆ 83 ವರ್ಷ ವಯಸ್ಸು. ಸೊಸೆಯ ವೈಮನಸ್ಸಿನಿಂದಾಗಿ ನನ್ನ ಮಗ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ಅವರ ಜಗಳದಿಂದ ಬೇಸತ್ತು ಬೇರೆಡೆ ಹೋಗಿ ಜೀವನ ಮಾಡಿ, ನನಗೆ ಅಂತ್ಯ ಕಾಲದಲ್ಲಿ ನೆಮ್ಮದಿಯಿಂದ ಬಾಳಲು ಬಿಡಿ ಎಂದು ಹೇಳಿದ್ದೆ. ಆದರೆ ನನ್ನ ಮಗ ವಯಸ್ಸಾದ ತಂದೆಯನ್ನು ಬಿಟ್ಟು ಹೋಗುವುದು ತಪ್ಪು ಎಂದು ಸಮಾಧಾನದಿಂದ ಇದ್ದ. ನನ್ನ ಮಗ ಅವನ ಹೆಂಡತಿಗೆ ಬುದ್ಧಿವಾದ ಹೇಳಿ ಒಳ್ಳೆಯ ರೀತಿಯಲ್ಲಿ ಇರು ಎಂದು ಹೇಳಿದ್ದಾನೆ. ಆದರೆ ಸೊಸೆ ಯಾರ ಮಾತನ್ನು ಕೇಳದೆ 7 ತಿಂಗಳು ಮನೆ ಬಿಟ್ಟು ಹೋಗಿ ತವರು ಮನೆಯಲ್ಲಿದ್ದಳು. ನಂತರ ಡಿವೋರ್ಸ್ ನೋಟಿಸ್ ಕೊಟ್ಟಿದ್ದಾಳೆ.
ಇದಕ್ಕೆ ನನ್ನ ಮಗ ಕೂಡ ಸಹಿ ಹಾಕಿ, ಜೀವನಾಂಶ ನೀಡುತ್ತಿದ್ದಾನೆ. ಆದರೂ ಆಕೆ ಏಕಾಏಕಿ ರಾತ್ರಿ ಬಂದು ಗಲಾಟೆ ಮಾಡಿ, ಹಲ್ಲೆ ನಡೆಸಲು ಮುಂದಾಗಿದ್ದಾಳೆ. ನನಗೆ ಆರೋಗ್ಯ ಸರಿಯಿಲ್ಲ. ಬಿಪಿ, ಶುಗರ್ ಇದೆ, ಕಣ್ಣು ಸರಿಯಾಗಿ ಕಾಣುವುದಿಲ್ಲ. ಹೇಗಾದರೂ ಮಾಡಿ ನಾನು ಕಟ್ಟಿಸಿರುವ ಮನೆಯನ್ನು ಲಪಟಾಯಿಸಬೇಕು ಎಂಬುದು ನನ್ನ ಸೊಸೆಯ ಉದ್ದೇಶ. ಅಂತ್ಯ ಕಾಲದಲ್ಲಿ ನನಗೆ ರಕ್ಷಣೆ ಕೊಡಿ ಅಳಲು ತೋಡಿಕೊಂಡಿದ್ದಾರೆ ವೃದ್ಧ.