ಮಂಗಳೂರು: ಒಂದರ ಹಿಂದೊಂದರಂತೆ ಕೊರೆದದ್ದು 5 ಕೊಳವೆ ಬಾವಿಗಳು. ಆದರೆ, ಯಾವುದರಲ್ಲಿಯೂ ನೀರಿಲ್ಲ. ಕೊನೆಗೆ ನೀರಿಲ್ಲದೆ ಸೊರಗಿದ ತೋಟದಲ್ಲಿ ಕ್ರೈಸ್ತ ಕುಟುಂಬ ಕೊನೆಯ ಪ್ರಯತ್ನವೆಂಬಂತೆ ಮಾಡಿದ್ದು ನಾಗಪೂಜೆ, ದೈವಕ್ಕೆ ಹರಕೆ. ಬಳಿಕ ನಡೆದದ್ದೇ ಪವಾಡ...
4-5 ಲಕ್ಷ ರೂ. ಖರ್ಚು ಮಾಡಿ 600-700 ಅಡಿ ಕೊರೆದರೂ ನೀರು ಸಿಗಲಿಲ್ಲ..
ಒಂದಲ್ಲ, ಎರಡಲ್ಲ, ಕೊರೆದ ಎಲ್ಲಾ ಕೊಳವೆ ಬಾವಿಗಳಲ್ಲಿ ಜಿನುಗಿತು ಯಥೇಚ್ಛ ನೀರು. ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಸಮೀಪದ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಡ್ಡೋಡಿಯ ಗುಂಡೇಲ್ ಎಂಬ ಗ್ರಾಮದ ವಿಕ್ಟರ್ ಡಿಸಿಲ್ವರೆಂಬ ಕೃಷಿಕ, ತಮ್ಮ 7ಎಕರೆ ಭೂಮಿಯಲ್ಲಿ ಅಡಿಕೆ, ತೆಂಗು ಹಾಗೂ ಭತ್ತದ ಕೃಷಿ ಮಾಡುತ್ತಿದ್ದಾರೆ. ಆದರೆ, ಈ ಬಾರಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ತಟ್ಟಿದ ಬರದಿಂದ, ಇವರಿಗೆ ನೀರಿನ ಅಭಾವ ತೋರಿತು. ಅದಕ್ಕಾಗಿ ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ತೋಡಿದರು. ಆದರೆ, ನೀರು ಸಿಗಲಿಲ್ಲ. ಒಂದರ ಮೇಲೊಂದರಂತೆ 600 ಅಡಿ, 700 ಅಡಿಯಂತೆ 4 ಕೊಳವೆ ಬಾವಿ ತೋಡಿದರೂ ನೀರು ಸಿಗಲಿಲ್ಲ. ಇದಕ್ಕಾಗಿ ಖರ್ಚು ಮಾಡಿದ್ದು, ಸುಮಾರು 4-5 ಲಕ್ಷ ರೂ. ಇಷ್ಟಾದರೂ ವಿಕ್ಟರ್ ಡಿಸಿಲ್ವಾರಲ್ಲಿ ಭರವಸೆ ಕುಂದಿರಲಿಲ್ಲ. ಆಗ ನೆರವಿಗೆ ಬಂದದ್ದೇ ಕೊಳವೆ ಬಾವಿ ಕೊರೆಯುವ ಸಂಸ್ಥೆಯ ಮಾಲೀಕ ಪ್ರಕಾಶ್. ಅವರು ಬೆಳ್ತಂಗಡಿಯ ಜ್ಯೋತಿಷಿ ಜಗದೀಶ್ ಶಾಂತಿಯವರನ್ನು ಭೇಟಿಯಾಗಿ ಸಲಹೆ ಪಡೆಯುವಂತೆ ತಿಳಿಸಿದರು.
ಕ್ರಿಶ್ಚಿಯನ್ ಆದರೂ ನೀರಿಗಾಗಿ ನಾಗ, ದೈವಗಳನ್ನು ನಂಬಿ ಪೂಜೆ..
ಈ ಬಗ್ಗೆ ವಿಕ್ಟರ್ ಡಿಸಿಲ್ವಾರು ಮಾತನಾಡಿ, ಜಗದೀಶ್ ಶಾಂತಿಯವರು ನನ್ನ ತೋಟಕ್ಕೆ ಬಂದ ತಕ್ಷಣ ಹೇಳಿದ್ದು, ನಿಮ್ಮ ಜಮೀನಿನಲ್ಲಿ ನಾಗದೋಷವಿದೆ, ದೈವಗಳ ಸವಾರಿಯಿದೆ. ಅವುಗಳಿಗೆ ಪರಿಹಾರವಾಗದೆ ನಿಮಗೆ ನೀರು ಸಿಗುವುದಿಲ್ಲ. ಹಿಂದೆ ನಿಮ್ಮ ತಂದೆಯವರಿಂದ ನಾಗ ಸಂತತಿಗಳ ನಾಶವಾಗಿದೆ. ಅದಲ್ಲದೆ ಹಿಂದೆ ಈ ಜಮೀನಿನಲ್ಲಿದ್ದವರು ನಂಬುತ್ತಿದ್ದ ದೈವಗಳನ್ನು ಅವರು ತೆಗೆದುಕೊಂಡು ಹೋಗಿದ್ದರೂ, ದೈವಗಳು ಮಾತ್ರ ಈ ಸ್ಥಳವನ್ನು ತೊರೆದಿಲ್ಲ. ಇದರಿಂದಲೇ ನೀವು ಎಷ್ಟೇ ಕೊಳವೆ ಬಾವಿ ಕೊರೆದಾಗಲೂ ನೀರು ದೊರಕುತ್ತಿಲ್ಲ. ಆದ್ದರಿಂದ ಈಗಿಂದೀಗಲೇ ದೋಷ ಪರಿಹಾರಕ್ಕೆ ಹರಕೆ ಕಟ್ಟಿಕೊಳ್ಳಿ. ನೀರು ತನ್ನಿಂದ ತಾನಾಗಿಯೇ ದೊರೆಯುತ್ತದೆ ಎಂದರು.
ನಾನು ಜಾತಿಯಲ್ಲಿ ಕ್ರಿಶ್ಚಿಯನ್. ಆದರೆ, ನೀರು ದೊರೆಯುತ್ತದೆ ಎಂದಾದರೆ ನನಗೆ ನಾಗ, ದೈವಗಳನ್ನು ನಂಬುವುದರಲ್ಲಿ ತಪ್ಪಿಲ್ಲ ಎಂದು ಜಗದೀಶ್ ಶಾಂತಿಯವರ ಮಾತಿನಂತೆ ನಾಗನಿಗೆ ಆಶ್ಲೇಷ ಪೂಜೆ, ಜುಮಾದಿ ದೈವಕ್ಕೆ ಸೀಯಾಳ, ಕೊಡಮಣಿತ್ತಾಯ ದೈವಕ್ಕೆ ಹಾಲು ನೀಡಲು ಬೆಳ್ಳಿಯ ಲೋಟ ಹರಕೆ ಹೇಳಿದೆ. ಅಲ್ಲದೆ ಧರ್ಮಸ್ಥಳ, ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗಿ ದೋಷ ಪರಿಹಾರಕ್ಕೆ ಪೂಜೆ, ಕಾರ್ಕಳ, ಮಂಗಳೂರು ಹಾಗೂ ನನ್ನ ಗ್ರಾಮದ ಚರ್ಚ್ನಲ್ಲಿಯೂ ಪ್ರಾರ್ಥನೆಯನ್ನೂ ಮಾಡಲು ಹೇಳಿದರು.
ಇದೆಲ್ಲವನ್ನೂ ಮಾಡುತ್ತೇನೆಂದು ಸಂಕಲ್ಪ ಮಾಡಿಕೊಂಡೆ. ಅದೇ ಕ್ಷಣದಲ್ಲಿ ನನ್ನ ಜಮೀನಿನ ಒಂದು ಕಡೆಯಲ್ಲಿ ಸ್ಥಳ ತೋರಿಸಿ ಇಲ್ಲಿ ಬಾವಿ ಕೊರೆಯಿರಿ. 600 ಅಡಿ ಕೊರೆಯುವಾಗ ಬೇಕಾದಷ್ಟು ನೀರು ದೊರೆಯುತ್ತದೆ. ಅಲ್ಲದೆ ಹಿಂದೆ ಕೊರೆದ ಕೊಳವೆ ಬಾವಿಗಳಲ್ಲಿಯೂ ಈಗ ನೀರಿದೆ. ಬೇಕಾದರೆ ಪರೀಕ್ಷೆ ಮಾಡಿ ಎಂದರು. ಪವಾಡವೆಂಬಂತೆ ಎಲ್ಲಾ ಕೊಳವೆ ಬಾವಿಗಳಲ್ಲಿಯೂ ಬೇಕಾದಷ್ಟು ನೀರು ಕಂಡು ಬಂದಿತು. ಇದೆಲ್ಲವೂ ದೈವ ಹಾಗೂ ನಾಗನ ಪವಾಡ ಎಂದರೆ ತಪ್ಪಲ್ಲ ಎಂದು ವಿಕ್ಟರ್ ಡಿಸಿಲ್ವಾರು ಭಕ್ತಿಯಿಂದ ಹೇಳುತ್ತಾರೆ.
ಆಶ್ಲೇಷ ಪೂಜೆಯನ್ನು ತನ್ನ ಜಮೀನಿನಲ್ಲೇ ಮಾಡಿದ್ದರು..
ಬಳಿಕ ನಾನು ಸಂಕಲ್ಪಿಸಿದ ಆಶ್ಲೇಷ ಪೂಜೆಯನ್ನು ನನ್ನ ಜಮೀನಿನಲ್ಲೇ ಮಾಡಿದ್ದೆ. ಅಂದು ನಾಗರಹಾವೊಂದು ಕೊಳವೆಬಾವಿಯ ಕಲ್ಲ ಮೇಲೆ ಬಂದಿತ್ತು. ಅದಕ್ಕೆ ಜಗದೀಶ್ ಶಾಂತಿಯವರು ನಿಮ್ಮ ಪೂಜೆ ಫಲಿಸಿದೆ. ಅದಕ್ಕಾಗಿಯೇ ನಾಗರಾಜನೇ ಬಂದಿದ್ದಾನೆ ಎಂದು ಹೇಳಿದ್ದನ್ನು ಅವರು ನೆನಪಿಸಿದ್ದರು. ಅಲ್ಲದೆ ದೈವಗಳಿಗೂ ಸಂಕಲ್ಪಿಸಿದ ಸೇವೆಯನ್ನು ಮೇ ಮೊದಲ ವಾರದಲ್ಲಿ ಮಾಡಿಸಲಾಗಿದೆ. ಧರ್ಮಸ್ಥಳ, ಸುಬ್ರಹ್ಮಣ್ಯ, ಕಾರ್ಕಳ, ಮಂಗಳೂರು ಹಾಗೂ ಗ್ರಾಮದ ಚರ್ಚ್ಗಳಲ್ಲಿಯೂ ಹರಕೆ ತೀರಿಸಿದ್ದೇನೆ ಎನ್ನುತ್ತಾರೆ.
ಈಗ ನಮ್ಮ ಒಂದು ಕೊಳವೆ ಬಾವಿಯ ನೀರನ್ನು ಪಕ್ಕದ ಜಮೀನೊಂದಕ್ಕೆ ನೀಡಿದ್ದೇನೆ. ಅವರಲ್ಲಿಯೂ ಕೊಳವೆ ಬಾವಿಯಲ್ಲಿ ನೀರಿಲ್ಲದೆ ಕೃಷಿಗೆ ತೊಂದರೆಯಾಗುತ್ತಿತ್ತು. ಈಗ ಅವರ ಕೃಷಿಯೂ ಸುಧಾರಿಸಿದೆ. ಅಲ್ಲದೆ ಮೂರು ಮನೆಯವರೂ ನಮ್ಮ ಕೊಳವೆ ಬಾವಿಯ ನೀರನ್ನೇ ದಿನ ಬಳಕೆಗೆ ಬಳಸುತ್ತಿದ್ದಾರೆ. ಇದರಿಂದ ತುಂಬಾ ಸಂತೋಷವಾಗುತ್ತಿದೆ ಎಂದು ವಿಕ್ಟರ್ ಡಿಸಿಲ್ವಾ ನೆನಪಿಸುತ್ತಾರೆ.