ಮಂಗಳೂರು: ಬಾಲಕನೊಬ್ಬ ಸ್ನೇಹಿತರ ಜೊತೆ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಮೇಲೆ ಬಾರಲಾಗದೆ ಮೃತಪಟ್ಟ ಘಟನೆ ಕುಮಾರಧಾರ ನದಿಯಲ್ಲಿ ನಡೆದಿದೆ.
ಪರಣೆ ನಿವಾಸಿ ಅಶ್ಪಕ್ ಮೃತ ಬಾಲಕ, ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಈ ಬಾಲಕ ಓದುತ್ತಿದ್ದ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಲಂಕಾರು ಸಮೀಪದ ಶಾಂತಿಮೊಗರು ಎಂಬಲ್ಲಿ ಗೆಳೆಯರೊಂದಿಗೆ ಸ್ನಾನ ಮಾಡಲು ನೀರಿಗಿಳಿದಿದ್ದಾನೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದು, ಸ್ಥಳೀಯ ಈಜುಗಾರರು ಮೃತ ಶರೀರವನ್ನು ಮೇಲೆತ್ತಿದ್ದಾರೆ.