ಮಂಗಳೂರು: ಉಡುಪಿ ಪರ್ಯಾಯ ಪೀಠಾರೋಹಣಗೈಯಲಿರುವ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥ ಸ್ವಾಮೀಜಿಗೆ ಗುರುವಂದನೆ ಹಾಗೂ ಪಟ್ಟದ ದೇವರ ತುಲಾಭಾರ ಸೇವೆಯು ನಗರದ ಕದ್ರಿ ಕಂಬಳ ರಸ್ತೆಯ 'ಮಂಜು ಪ್ರಾಸಾದ'ದಲ್ಲಿ ನೆರವೇರಿತು.
ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ್ ಕಲ್ಕೂರ ಅವರ ವತಿಯಿಂದ ನಾಲ್ಕನೇ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡುತ್ತಿರುವ ಸ್ವಾಮೀಜಿಗೆ ಗುರುವಂದನಾ ಕಾರ್ಯಕ್ರಮ ಜರುಗಿತು. ಬಳಿಕ ಕೃಷ್ಣಾಪುರ ಮಠದ ಪಟ್ಟದ ದೇವರ ತುಲಾಭಾರ ಸೇವೆ ನಡೆಯಿತು.
ವಿದ್ಯಾಸಾಗರತೀರ್ಥ ಸ್ವಾಮೀಜಿ ಮಾತನಾಡಿ, ಈ ಬಾರಿ ಕೊರೊನಾ ಸಂಕಷ್ಟವಿದ್ದರೂ ಭಕ್ತರು ಪರ್ಯಾಯ ನೆರವೇರಿಸುವ ಉತ್ಸಾಹದಿಂದಿದ್ದಾರೆ. ಹಿಂದೆ ಯಾವ ರೀತಿ ಸಂಪ್ರದಾಯದ ಪ್ರಕಾರ ಪರ್ಯಾಯ ನಡೆಯುತ್ತಿತ್ತೋ, ಅದಕ್ಕೆ ಕುಂದು ಉಂಟಾಗದಂತೆ ಸರ್ಕಾರದ ನಿಯಮದೊಂದಿಗೆ ಪರ್ಯಾಯ ನಡೆಯಲಿದೆ ಎಂದು ಹೇಳಿದರು.