ಕಲಬುರಗಿ: ಸರ್ಕಾರ ವಲಸೆ ಕಾರ್ಮಿಕರ ಬಳಿ ವಸೂಲಿಗೆ ನಿಂತಿದೆ. ಬಡವರ ಹಣದಿಂದ ಖಜಾನೆ ತುಂಬುವ ದರ್ದು ಸರ್ಕಾರಕ್ಕೇನಿದೆ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಟ್ವಿಟರ್ ಮೂಲಕ ಅಸಮಾಧಾನ ಹೊರಹಾಕಿದ ಅವರು, ಕಲಬುರಗಿ-ಬೆಂಗಳೂರು ನಡುವೆ ಸಾಮಾನ್ಯ ಕೆಎಸ್ಆರ್ಟಿಸಿ ಬಸ್ ದರ 600 ರಿಂದ 650 ರೂಪಾಯಿ ಪಡೆಯಲಾಗುತ್ತಿತ್ತು. ಇದೀಗ ಸರ್ಕಾರವು ವಲಸೆ ಕಾರ್ಮಿಕರಿಂದ ಪ್ರತಿ ಸೀಟಿಗೆ 1,619 ಹಣ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಹೊರ ದೇಶದಲ್ಲಿರುವ ಉಳ್ಳವರನ್ನ ವಿಶೇಷ ವಿಮಾನದ ಮೂಲಕ ಉಚಿತವಾಗಿ ಸರ್ಕಾರ ಕರೆಸಿಕೊಳ್ಳುತ್ತೆ. ಆದರೆ, ಇಲ್ಲಿನ ಬಡ ಕೂಲಿ ಕಾರ್ಮಿಕರಿಂದ ಸಾವಿರಾರು ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಬಡವರ ಹಣದಿಂದ ಖಜಾನೆ ತುಂಬಿಸುವ ದರ್ದು ಸರ್ಕಾರಕ್ಕೇನಿದೆ. ಬಡ ಜನರ ಕಣ್ಣೀರಿನಿಂದ ಹಣ ಸರ್ಕಾರ ಮಾಡಿಕೊಳ್ಳಬೇಕಾ ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಇನ್ನು,ಬಡ ಕೂಲಿ ಕಾರ್ಮಿಕರ ಬಳಿ ಕೆಲಸವಿಲ್ಲ,ದುಡ್ಡಿಲ್ಲ. ಅದೇ ಕಾರಣಕ್ಕೆ ಅವರು ತಮ್ಮ ಊರುಗಳಿಗೆ ತೆರಳಲು ತುದಿಗಾಲಲ್ಲಿ ನಿಂತಿದ್ದಾರೆ. ಇಂತಹ ಸಮಯದಲ್ಲಿ ಅವರ ಬಳಿ ಸರ್ಕಾರ ದುಡ್ಡು ವಸೂಲಿಗೆ ನಿಂತಿರುವುದು ಸರಿಯಲ್ಲ. ಈ ಸಮಯದಲ್ಲಿ ಪ್ರಯಾಣದ ದಾರಿ ಮಧ್ಯೆ ಊಟವೂ ಸಿಗುವುದಿಲ್ಲ. ಅವರಿಗೆ ಬಸ್ನಲ್ಲಿ ಒಂದೊತ್ತಿನ ಊಟವನ್ನು ಸರ್ಕಾರದಿಂದ ನೀಡಲು ಸಾಧ್ಯವಿಲ್ಲವೇ? ಸರ್ಕಾರ ಮಾನವೀಯತೆ ತೋರಿ ಬಡ ಕಾರ್ಮಿಕರನ್ನು ಉಚಿತವಾಗ ತಮ್ಮ ಊರಿಗೆ ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.