ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ಗಣ್ಯರಾದ ಪಾಟೀಲ ಪುಟ್ಟಪ್ಪನವರು `ಪಾಪು’ ಎಂದೇ ಪ್ರಸಿದ್ಧರಾಗಿದ್ದಾರೆ. ಇವರು ಹಾವೇರಿ ಜಿಲ್ಲೆಯ ಕುರುಬಗೊಂಡ ಗ್ರಾಮದಲ್ಲಿ 14-01-1922ರಲ್ಲಿ ಜನಿಸಿದರು. ಸಿದ್ಧಲಿಂಗಪ್ಪ-ಮಲ್ಲಮ್ಮ ಇವರ ತಂದೆ ತಾಯಿ.
ಶಾಲಾ ಶಿಕ್ಷಣವನ್ನು ಹಲಗೇರಿ, ಬ್ಯಾಡಗಿ, ಚಿತ್ರದುರ್ಗ ಮತ್ತು ಹಾವೇರಿಗಳಲ್ಲಿ ಮುಗಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಪೂರೈಸಿದರು. ಇದಾದ ಬಳಿಕ ಅವರು ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಎಂ.ಎಂ.ಬಿ. ವ್ಯಾಸಂಗ ಮಾಡಿದರು. 1949ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎಫ್.ಪಿ ಪದವಿ ಗಳಿಸಿದರು.
ವಿಶಾಲ ಕರ್ನಾಟಕ ಪತ್ರಿಕೆ ಸಂಪಾದಕರಾಗಿ ಕೆಲಸಮಾಡಿದ ಪುಟ್ಟಪ್ಪನವರು ಕ್ಯಾಲಿಫೋರ್ನಿಯಾಗೆ ಹೋಗಿ ಬಂದ ಮೇಲೆ ನವಯುಗ ಮಾಸಪತ್ರಿಕೆ ಸಂಪಾದಕರಾದರು. ಆಮೇಲೆ 1954ರಲ್ಲಿ ಪ್ರಪಂಚ ವಾರಪತ್ರಿಕೆಯನ್ನು ತಾವೇ ಹುಟ್ಟು ಹಾಕಿದರು. 1957ರಲ್ಲಿ ಸಂಗಮ ಎಂಬ ಕನ್ನಡ ಡೈಜೆಸ್ಟ್ ಪ್ರಾರಂಭಿಸಿದರು. 1959ರಲ್ಲಿ ವಿಶ್ವವಾಣಿ ದಿನಪತ್ರಿಕೆಯನ್ನೂ ಮನೋರಮಾ ಎಂಬ ಚಲನಚಿತ್ರ ಮಾಸಿಕವನ್ನೂ ಆರಂಭಿಸಿ ಪತ್ರಿಕಾ ರಂಗದಲ್ಲಿ ಛಾಪು ಮೂಡಿಸಿದರು. ಹೀಗೆ ಪತ್ರಿಕೆಗಳನ್ನು ಹುಟ್ಟು ಹಾಕುತ್ತಲೂ, ನಡೆಸುತ್ತಲೂ ಪತ್ರಿಕೋದ್ಯಮದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡರು.
ಇದರ ಜೊತೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ, ಅನಂತರ ಕನ್ನಡಪ್ರಭ ಪತ್ರಿಕೆಯಲ್ಲಿ ಅಂಕಣಕಾರರಾಗಿ ಲೇಖನಗಳನ್ನು ಪ್ರಕಟಿಸಿದರು. ಹೀಗೆ ಪತ್ರಿಕಾ ಸಂಪಾದಕರಾಗಿ ನಾಡಿನ ಮನೆಮಾತಾದವರು ಈ ಪಾಟೀಲ ಪುಟ್ಟಪ್ಪ. ಇದಲ್ಲದೆ ಇತರ ಸಂಸ್ಥೆಗಳಲ್ಲಿ ಸಾರ್ವಜನಿಕ ರಂಗಗಳಲ್ಲಿ ದುಡಿದು ಕನ್ನಡ ಕಟ್ಟುವ ಕೆಲಸವನ್ನು ಇವರು ನಿರಂತರವಾಗಿ ಮಾಡಿಕೊಂಡು ಬಂದಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ಪಾಟೀಲರು ದುಡಿದಿದ್ದರು.
ರಾಜ್ಯದಲ್ಲಿ ಅಷ್ಟೇ ಅಲ್ಲ, ರಾಜ್ಯ ಸಭೆಯ ಸದಸ್ಯರಾಗಿ (1962-71) ಧಾರವಾಡ ಮತ್ತು ಕರ್ನಾಟಕದ ಸಮಸ್ಯೆಗಳಿಗೆ ಧ್ವನಿಯಾಗಿ ಸೈ ಅನಿಸಿಕೊಂಡಿದ್ದರು. ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ 1967 ರಿಂದ ಅಧ್ಯಕ್ಷರಾಗಿ ದುಡಿದಿದ್ದರು. ಗೋಕಾಕ ವರದಿ ಜಾರಿಗೆ ಬರಲು ನಡೆದ ಚಳವಳಿಯ ನೇತೃತ್ವವನ್ನು ಪಾಟೀಲರೇ ವಹಿಸಿದ್ದರು. ಕರ್ನಾಟಕ ಸರಕಾರ ಕನ್ನಡ ಕಾವಲು ಮತ್ತು ಗಡಿಸಲಹಾ ಸಮಿತಿ ರಚಿಸಿ ಇವರನ್ನು ಅದಕ್ಕೆ ಅಧ್ಯಕ್ಷರನ್ನಾಗಿ ಮಾಡಿದಾಗ ಕನ್ನಡ ಅನುಷ್ಠಾನಕ್ಕೆ ಇವರು ಹೆಚ್ಚಿನ ಶ್ರಮ ವಹಿಸಿದ್ದರು. 1992ರಲ್ಲಿ ಅಖಿಲ ಕರ್ನಾಟಕ ಹೋರಾಟ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿದ್ದರು. ಹೀಗೆ ನಾನಾ ರಂಗಗಳಲ್ಲಿ ಸೇವೆ ಸಲ್ಲಿಸಿರುವ ಇವರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.
ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ 1994ರಲ್ಲಿ ಡಿ’ಲಿಟ್’ ಪದವಿ ಕೊಟ್ಟಿದೆ. ಕರ್ನಾಟಕ ಸರಕಾರ ನೀಡುವ ಟಿ.ಎಸ್.ಆರ್.ಪ್ರಶಸ್ತಿ 1994ರಲ್ಲೇ ಪಾಟೀಲರಿಗೆ ಲಭಿಸಿದೆ. 1976ರಲ್ಲಿ ರಾಜ್ಯ ಪ್ರಶಸ್ತಿ, 1990 ವಿಶ್ವೇಶ್ವರಯ್ಯ ಭಾರತ ಜ್ಯೋತಿ ಪ್ರಶಸ್ತಿ, 1999 ರಲ್ಲಿ ಹುಬ್ಬಳ್ಳಿಯ ತಿಲಕ್ ಮೊಹರೆ ಪ್ರಶಸ್ತಿ, 1996ರಲ್ಲಿ ಹಂಪಿ ವಿಶ್ವವಿದ್ಯಾಲಯದ ನಾಡೋಜ ಗೌರವ, 2001 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, 2002 ರಲ್ಲಿ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ, ‘ಕನ್ನಡ ಸಾಹಿತ್ಯ ಪರಿಷತ್ತಿನ ‘ನೃಪತುಂಗ’ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಬೆಳಗಾವಿಯಲ್ಲಿ ನಡೆದ 70ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ 2003ರಲ್ಲಿ ದೊರಕಿತ್ತು. ಪಾಟೀಲ ಪುಟ್ಟಪ್ಪನವರು ಕೇವಲ ಪತ್ರಕರ್ತರಲ್ಲ ಗ್ರಂಥಕರ್ತರೂ ಹೌದು.
ಅವರು ಬರೆದ ಗ್ರಂಥಗಳಲ್ಲಿ ಕೆಲವು ಹೀಗಿವೆ:
ನನ್ನದು ಈ ಕನ್ನಡ ನಾಡು(1975), ನಮ್ಮದು ಈ ಭರತಭೂಮಿ(1977), ಕರ್ನಾಟಕ ಕಥೆ(1991), ಸೋವಿಯತ್ ದೇಶ ಕಂಡೆ(1944), ಗವಾಕ್ಷಿ ತೆರೆಯಿತು(1974), ಶಿಲಾಬಾಲಿಕೆ ನುಡಿದಳು(1974), ನಮ್ಮ ದೇಶ ನಮ್ಮ ಜನ(1973), ಈಗ ಹೊಸದನ್ನು ಕಟ್ಟೋಣ(1975), ಪಾಪು ಪ್ರಪಂಚ(2000). ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಪಾಪು ತಮ್ಮದೇ ಛಾಪು ಮೂಡಿಸಿದ್ದರು.