ದಾವಣಗೆರೆ: ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಬಗ್ಗೆ ಚರ್ಚೆ ಆರಂಭ ಆಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರ ಹೆಸರುಗಳು ಮುನ್ನೆಲೆಗೆ ಬರುತ್ತಿವೆ. ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗದಲ್ಲಿ ಕೈ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೆ ಜೈ ಎಂದು ಘೋಷಣೆ ಕೂಗಿದ್ದು, ಭಾವಿ ಸಿಎಂ ಪೈಪೋಟಿಗೆ ತುಪ್ಪ ಸುರಿದಂತಾಗಿದೆ.
ಸೂರನಗೊಂಡ ಕೊಪ್ಪದಲ್ಲಿರುವ ಭಾಯಗಡ್ ಸೇವಾಲಾಲ್ ಸಂತರ ಜನ್ಮ ಸ್ಥಳದಲ್ಲಿ ಲಂಬಾಣಿ ಸಮುದಾಯದ ಜನರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಡಿಕೆಶಿಗೆ ಹೂಮಳೆ ಸುರಿಸಿ ಕೈ ಕಾರ್ಯಕರ್ತರು ಸ್ವಾಗತಿಸಿದರು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಹಿಂದ ಮತಗಳ ಮೇಲೆ ಡಿಕೆಶಿ ಕಣ್ಣಿಟ್ಟಿದ್ದು, ಬಂಜಾರ ಸಮುದಾಯದ ಜನರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿದರು.
ಕೆಪಿಸಿಸಿ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ
ಚುನಾವಣೆ ತಯಾರಿಯಲ್ಲಿರುವ ಕೆಪಿಸಿಸಿ ಅಧ್ಯಕ್ಷರು ಶಿವಮೊಗ್ಗ ಹಾಗು ದಾವಣಗೆರೆ ಪ್ರವಾಸ ಕೈಗೊಂಡಿದ್ದಾರೆ. ದಾವಣಗೆರೆಗೆ ಆಗಮಿಸಿದ ಡಿಕೆಶಿಗೆ ಜಿಲ್ಲಾ ಕಾಂಗ್ರೆಸ್ ಹಾಗೂ ಕಿಸಾನ್ ಕಾಂಗ್ರೆಸ್ ನಿಂದ ಅದ್ಧೂರಿ ಸ್ವಾಗತ ಕೋರಲಾಯಿತು.
ಚುನಾವಣಾ ಉದ್ದೇಶದಿಂದ ಸಂವಾದ ನಡೆಸಿಲ್ಲ
ಸಂವಾದದ ಬಳಿಕ ಮಾತನಾಡಿದ ಅವರು, ಕೊರೊನಾ ಸಂಕಷ್ಟದಲ್ಲಿ ರಾಜಕೀಯ ಸಭೆ ಮಾಡುವಂತಿಲ್ಲ. ಆದ್ರೆ ರಾಜ್ಯದಲ್ಲಿನ ಶೋಷಿತ ಸಮುದಾಯಗಳ ಸಂಕಷ್ಟ ಕೇಳುವುದು ನನ್ನ ಉದ್ದೇಶ. ಮೀನುಗಾರರನ್ನ ಭೇಟಿ ಮಾಡಿದ್ದೇನೆ. ಈಗ ಲಂಬಾಣಿ ಸಮುದಾಯ. ಇನ್ಮುಂದೆ ನೇಕಾರ ಸಮುದಾಯ ಸೇರಿದಂತೆ ಎಲ್ಲ ಸಮಾಜಗಳ ಜೊತೆ ಮಾತನಾಡುವೆ. ಚುನಾವಣೆಯ ಉದ್ದೇಶದಿಂದ ಈ ಸಂವಾದ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಬೇಡಿಕೆ ಈಡೇರಿಸುತ್ತೇವೆ
ತಾಂಡಗಳಿಗೆ ಭೇಟಿ ನೀಡುವ ಕೆಲಸ ಮಾಡಿದ್ದೇವೆ. ಸಮಸ್ಯೆಗಳು ಇವೆ, ಅವುಗಳನ್ನು ಬಗೆಹರಿಸುವ ಕಾರ್ಯವಾಗುತ್ತಿಲ್ಲ. ಅದ್ದರಿಂದ ನಾನೇ ಪ್ರವಾಸ ಕೈಗೊಂಡು ಸಮಸ್ಯೆ ಆಲಿಸಲು ಬಂದಿದ್ದೇನೆ. ಸ್ಥಳೀಯ ಕುಲಕಸುಬನ್ನು ಮಾಡುವಂತೆ ಪ್ರೇರೇಪಿಸಬೇಕು, ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕು ಎನ್ನುವ ಬೇಡಿಕೆ ಇದೆ. ಆದ್ರೆ ಈ ಸರ್ಕಾರ ಅದನ್ನ ಸಂಪೂರ್ಣವಾಗಿ ನಿಭಾಯಿಸಿಲ್ಲ. ನಮ್ಮ ಸರ್ಕಾರ ಬಂದೇ ಬರುತ್ತೆ, ಆಗ ಅದನ್ನು ಈಡೇರಿಸುತ್ತೇವೆ ಎಂದು ಡಿಕೆಶಿ0 ಭರವಸೆ ನೀಡಿದರು.