ಬೆಂಗಳೂರು : ವಿಶ್ವ ದೃಷ್ಟಿ ದಿನದ ಅಂಗವಾಗಿ ಪ್ರಾಜೆಕ್ಟ್ ವಿಷನ್ ಸಹಯೋಗದೊಂದಿಗೆ ದಿ ಗುಡ್ ಕ್ವೆಸ್ಟ್ ಫೌಂಡೇಶನ್ ಆಯೋಜಿಸಿದ್ದ ವರ್ಲ್ಡ್ ಬ್ಲೈಂಡ್ ವಾಕ್ 2021 ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ನಡೆಯಿತು.
ಬೆಂಗಳೂರಿನಲ್ಲಿ ಪೊಲೀಸರು ಹಾಗೂ ವಿದ್ಯಾರ್ಥಿಗಳು ಸೇರಿ ವಿಧಾನಸೌಧದಿಂದ ಹೈಕೋರ್ಟ್ವರೆಗೆ ಬ್ಲೈಂಡ್ವಾಕ್ ನಡೆಸಿದರು. ಕಣ್ಣು ಕಾಣಿಸುವವರು ಕೂಡ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ವಾಕ್ ಮಾಡಿದರು. ಕಣ್ಣು, ಕಣ್ಣಿನ ದಾನ ಎಷ್ಟು ಮುಖ್ಯ ಎಂಬುವುದರ ಕುರಿತು ಜಾಗೃತಿ ಮೂಡಿಸಿದರು.
ಬ್ಲೈಂಡ್ ವಾಕ್ಗೆ ಉಪ ಪೊಲೀಸ್ ಆಯುಕ್ತ ಮಂಜುನಾಥ್ ಬಾಬು ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಕುರುಡುತನ ಹೊಂದಿರುವ ಜನರು ನಮ್ಮೆಲ್ಲರಿಂದ ಸಮಾಜದಲ್ಲಿ ಉತ್ತಮ ಪರಿಗಣನೆಗೆ ಅರ್ಹರು. ವಿಶ್ವ ದೃಷ್ಟಿ ದಿನದ ಅಂಗವಾಗಿ ಒಂದು ಕಿ. ಮೀ ಕಣ್ಣು ಮುಚ್ಚಿ ನಡೆದಿದ್ದೇವೆ. ಒಂದು ಕಿ.ಮೀ ನಡಿಗೆ 4 ಕಿ.ಮೀ ನಡಿಗೆಯಂತೆ ಭಾಸವಾಗುತ್ತಿದೆ. ದೃಷ್ಟಿಹೀನರಿಗೆ ಸವಾಲುಗಳು ನಿಜಕ್ಕೂ ದೊಡ್ಡದಾಗಿವೆ ಎಂದು ಹೇಳಿದರು.
ಪೊಲೀಸ್ ಇಲಾಖೆಯ ಮಾಜಿ ಎಸಿಪಿ ನಾರಾಯಣಸ್ವಾಮಿ ಮಾತನಾಡಿ, ದೇಶದಲ್ಲಿ 15 ಮಿಲಿಯನ್ ಜನರು ಕುರುಡರಾಗಿದ್ದಾರೆ. ಸುಮಾರು 3 ಮಿಲಿಯನ್ ಜನರು ಕಣ್ಣುಗಳನ್ನು ದಾನ ಮಾಡಲು ಮುಂದೆ ಬಂದರೆ ಕುರುಡರು ಮತ್ತೆ ಜಗತ್ತನ್ನು ನೋಡಬಹುದು. ಸಾವಿನ ನಂತರ ಕಣ್ಣುಗಳನ್ನು ದಾನ ಮಾಡಿ. ಜತೆಗೆ ಸಾಧ್ಯವಿರುವ ಎಲ್ಲ ರೀತಿಯಲ್ಲೂ ಕುರುಡುತನ ಹೊಂದಿರುವ ವ್ಯಕ್ತಿಗಳಿಗೆ ಸಹಾಯ ಮಾಡಿ ಎಂದು ಸಲಹೆ ನೀಡಿದರು.
ಬ್ಲೈಂಡ್ವಾಕ್ಗೆ ಸೇಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಜೈನ್ ವಿಶ್ವವಿದ್ಯಾಲಯದ ಸೆಂಟರ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದು ತಮ್ಮ ಜೀವನ ಬದಲಿಸುವ ಅನುಭವ. ನೋಡದೆ ನಡೆಯುವುದು ತುಂಬಾ ಕಷ್ಟ ಎಂದು ನಾವು ಎಂದಿಗೂ ಭಾವಿಸಿರಲಿಲ್ಲ ಎಂದು ಜೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪಲ್ಲವ್ ಹೇಳಿದರು.
ಈ ಸಂದರ್ಭದಲ್ಲಿ ಗುಡ್ ಕ್ವೆಸ್ಟ್ ಫೌಂಡೇಶನ್ ಜತೆಗೆ ಪ್ರಾಜೆಕ್ಟ್ ವಿಷನ್ ಕೂಡ ಬೆಂಗಳೂರಿನಲ್ಲಿ ಬ್ಲೈಂಡ್ ವಾಕ್ ಆಯೋಜಿಸಿತ್ತು. 2013ರಿಂದ ದೃಷ್ಟಿ ವಿಕಲ ಚೇತನರಿಗಾಗಿ ಕೆಲಸ ಮಾಡುತ್ತಿರುವ ಪ್ರಾಜೆಕ್ಟ್ ವಿಷನ್, ನೇತ್ರದಾನ ಚಳವಳಿಯನ್ನು ಉತ್ತೇಜಿಸಲು ಐದು ದೇಶಗಳಲ್ಲಿ 1000ಕ್ಕೂ ಹೆಚ್ಚು ಬ್ಲೈಂಡ್ ವಾಕ್ಗಳನ್ನು ನಡೆಸಿದೆ ಎಂದು ತಿಳಿದು ಬಂದಿದೆ.