ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಗೆ ಸಮಸ್ಯೆ ಆಗಬಾರದು ಅಂತಾ ಸುಮ್ಮನಿದ್ದೇವೆ. ಪರೀಕ್ಷೆ ನಂತರ ಕೊರೊನಾ ವೇಗ ಕುಗ್ಗಿಸಲು ಇನ್ನಷ್ಟು ಕಠಿಣ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ಸಂಬಂಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿಗಳಿಗೆ ಅಧಿಕಾರ ಕೊಡಲಾಗಿದೆ. ಕೋವಿಡ್ ತಡೆ ಕುರಿತು ನಿನ್ನೆಯಿಂದ ಸಭೆ ಮಾಡಲಾಗಿದೆ. ಕೋವಿಡ್ ಹೆಚ್ಚಳಕ್ಕೆ ತಕ್ಕಂತೆ ಅಗತ್ಯ ಕ್ರಮ ಕೈಗೊಳ್ಳಲಾಗ್ತಿದೆ. ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕು ಲಕ್ಷಣ ಇಲ್ಲದವರನ್ನು ಅಡ್ಮಿಟ್ ಮಾಡಿಕೊಳ್ಳುತ್ತಿದ್ದಾರೆ. ಅವರಿಗೂ ಚಾರ್ಜ್ ಮಾಡುತ್ತಿದ್ದಾರೆ. ಇದು ಆಗಬಾರದು. ಬರುವಂತಹ ಸೋಂಕಿತರಿಗೆ ಯಾವುದೇ ಸಮಸ್ಯೆ ಆಗಬಾರದು. ಈ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು.
ಇದೊಂದು ಸಮರ. ನಾಳೆಯೇ ಮುಗಿಯುತ್ತೆ ಅನ್ನೋ ನಂಬಿಕೆ ಇಲ್ಲ. ನಾನು ಆ ಭ್ರಮೆಯಲ್ಲೂ ಇಲ್ಲ. 14 ದಿನದಲ್ಲಿ ಮುಗಿಯುವ ಯುದ್ಧ ಇದಲ್ಲ. ಕೊರೊನಾ ಇರುವ ತನಕ ಹೋರಾಟ ಮಾಡಬೇಕು. ಕೊರೊನಾ ಯುದ್ಧದಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ದಿನ ಸಿಎಂ ಮನೆಯಲ್ಲಿ ನಾವು ಸಭೆ ಸೇರುತ್ತಿದ್ದೇವೆ. ಪ್ರತಿ ದಿನ ಆದಾಯ ಕೂಡ ಸಂಗ್ರಹಣೆ ಆಗಬೇಕು ಅಂತಿದ್ದಾರೆ ಅಧಿಕಾರಿಗಳು. ಆದರೆ ಕಾಂಪ್ರಮೈಸ್ ಮಾಡ್ಕೊಂಡು ಕೆಲಸ ಮಾಡಬೇಕು ಎಂದು ಹೇಳಿದ್ದೇವೆ. ಕೊರೊನಾ ಸ್ಪೀಡ್ಗೆ ಬ್ರೇಕ್ ಹಾಕಬೇಕು. ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಾನು ಪತ್ರ ಬರೆಯುತ್ತೇನೆ. ಕಲಬುರಗಿಯಂತಹ ಜಿಲ್ಲೆಯಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸೂಚನೆ ಕೊಡುತ್ತೇನೆ ಎಂದರು.