ಬೆಂಗಳೂರು: ನನಗೆ ಕೊಟ್ಟಿರುವ ಖಾತೆ ತೃಪ್ತಿ ನೀಡಿದೆ. ನಾನೂ ಯಾವುದೇ ಸ್ಥಾನ ಬೇಡುವುದಿಲ್ಲ. ನನಗೆ ಯಾವ ಇಲಾಖೆ ಕೊಡುತ್ತಾರೆ ಅದನ್ನು ನಿಭಾಯಿಸುತ್ತೇನೆ ಎಂದು ನೂತನ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ನನಗೆ ಖಾತೆ ನೀಡಿ ರಾಜ್ಯದ ಜನರ ಸೇವೆ ಮಾಡಲು ಅನುಕೂಲ ಮಾಡಿಕೊಟ್ಟ ಸಿಎಂ ಅವರಿಗೆ ಧನ್ಯವಾದ. ನನಗೆ ಗಣಿ ಮತ್ತು ಭೂ ವಿಜ್ಞಾನ ಖಾತೆ ಕೊಟ್ಟಿದ್ದಾರೆ. ಅಕ್ಕಪಕ್ಕದ ರಾಜ್ಯದಲ್ಲಿ ಗಣಿ ನೀತಿ ಇದೆ. ಅದನ್ನು ಅಧ್ಯಯನ ಮಾಡಿ ರಾಜ್ಯದ ಆರ್ಥಿಕತೆ ಮಟ್ಟ ಹೆಚ್ಚಿಸಲು, ಕೈಗಾರಿಕೆಗೆ ಪೂರಕವಾಗುವಂತಹ ನೀತಿ ರೂಪಿಸುತ್ತೇವೆ. ಅಕ್ರಮ ಗಣಿಗಾರಿಕೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಐದು ವರ್ಷ ಕಾಲ ಕೈಗಾರಿಕಾ ಸಚಿವನಾಗಿ ಕೆಲಸ ಮಾಡಿದ್ದೇನೆ. ಆವಾಗ ಜಾಗತಿಕ ಹೂಡಿಕೆದಾರರ ಸಭೆ ನಡೆಸಿದ್ದೇನೆ. ಈ ಇಲಾಖೆಗೆ ಶಕ್ತಿ ಬರಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ ಎಂದು ವಿವರಿಸಿದರು.
ನೋಡಿ-ನಡೆದಾಡುವ ದೇವರ ಎರಡನೇ ವರ್ಷದ ಪುಣ್ಯಸ್ಮರಣೆ : ಸಿದ್ಧಗಂಗೆಯಲ್ಲಿ ಮೊಳಗಿದ ಓಂಕಾರ
ಆಗಾಗ ಖಾತೆ ಬದಲಾವಣೆ ಮಾಡುವುದು ಸಾಮನ್ಯ. ಮುಂದೆ ಪುನಾರಚನೆ ವೇಳೆ ಅವಕಾಶ ಸಿಗಬಹುದು. ಕೋವಿಡ್ ಕಾರಣ ಸಾಕಷ್ಟು ಕೆಲಸ ಹಿಂದುಳಿದಿದೆ. ಸಿಎಂ ಕೆಲ ಬದಲಾವಣೆ ಮಾಡಿ ಖಾತೆ ನೀಡಿದ್ದಾರೆ. ಈಗ ಖಾತೆ ಬಗ್ಗೆ ವಿವಾದ ಬೇಡ. ಅಭಿವೃದ್ಧಿಯತ್ತ ಮುಂದುವರಿಯಬೇಕೆಂದು ಸಹೋದ್ಯೋಗಿಗಳಿಗೂ ಮನವಿ ಮಾಡುತ್ತೇನೆ. ಮತ್ತೆ ಹೊಸ ಖಾತೆ ಕೊಡಲಾಗುವುದು. ಈಗ ಯಾವ ಖಾತೆ ಕೊಟ್ಟಿದ್ದಾರೆ ಅದರಲ್ಲಿ ಉತ್ತಮ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.