ಬೆಂಗಳೂರು: ಹಿಂದೂಗಳೆಲ್ಲಾ ಒಳ್ಳೆಯವರಲ್ಲ, ಮುಸ್ಲಿಮರೆಲ್ಲಾ ಕೆಟ್ಟವರಲ್ಲ. ಎಲ್ಲಾ ಜಾತಿ ಧರ್ಮಗಳಲ್ಲೂ ಒಳ್ಳೆಯವರು, ಕೆಟ್ಟವರು ಇರುತ್ತಾರೆ. ದೇವರು ಇದ್ದಾನೆ ಅಂದ್ರೆ ಅಲ್ಲಿ ದೆವ್ವ-ಸೈತಾನ್ಗಳು ಇದ್ದೇ ಇರುತ್ತವೆ ಎಂದು ವಸತಿ ಸಚಿವ ವಿ.ಸೋಮಣ್ಣ ಮಾರ್ಮಿಕವಾಗಿ ಹೇಳಿದ್ದಾರೆ.
ಗೋವಿಂದ ರಾಜನಗರ ವಿಧಾನಸಭಾ ಕ್ಷೇತ್ರದ ನಾಗರಭಾವಿ ವಾರ್ಡ್ ನಲ್ಲಿ ಈದ್ಗಾ ಮೈದಾನ ಕಂಪೌಂಡ್ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಈ ಕೆಲಸಕ್ಕೂ ಜಾತಿ- ಧರ್ಮಕ್ಕೂ ಸಂಬಂಧವಿಲ್ಲ, ಇದು ನನ್ನ ಕರ್ತವ್ಯ. ಒಬ್ಬ ಜನಪ್ರತಿನಿಯಾಗಿ ನಾನು ನನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದೇನೆ. ನಾವು ಭಾರತೀಯರು, ಹಿಂದೂ-ಮುಸ್ಲಿಮರು ಒಂದೇ ಮನೆಯವರು. ನೀವೂ ಅಲ್ಲಾ ಅಂತೀರಾ, ನಾವು ಶಿವ ಅಂತೀವಿ. ಎಲ್ಲರಿಗೂ ದೇವರೊಬ್ಬನೇ ಎಂದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸೋಮಣ್ಣ, ಕೊರೊನಾದಿಂದಾಗಿ ಸಾಮಾನ್ಯ ಬಡವ ಕಳೆದ ಐದು ತಿಂಗಳಿನಿಂದ ಕಂಗಾಲಾಗಿದ್ದಾನೆ. ಕಾಂಗ್ರೆಸ್ ನವರು 75 ವರ್ಷಗಳಿಂದ ನಿಮ್ಮನ್ನ ವೋಟ್ ಬ್ಯಾಂಕ್ಗಾಗಿ ಬಳಸಿಕೊಂಡಿದ್ದಾರೆ, ಈಗಲೂ ಬಳಸಿಕೊಳ್ಳುತ್ತಿದ್ದಾರೆ. ಇನ್ನು ಎಷ್ಟು ವರ್ಷ ನೀವು ಮೋಸ ಹೋಗ್ತೀರಾ..? ನಾನು ಯಾವತ್ತಾದರೂ ಅನ್ಯಾಯ ಮಾಡಿದ್ದೀನಾ..? ಆದರೂ ನನ್ನ ವಿರುದ್ಧ ಕೆಲವರು ಅಪಪ್ರಚಾರ ಮಾಡಿದ್ದಾರೆ. ನನಗೆ ಬೂಟಾಟಿಕೆ ಗೊತ್ತಿಲ್ಲ, ನಾನು ಕಾಮ್ ಕರ್ನೆ ವಾಲಾ (ಜನರ ಕೆಲಸ ಮಾಡುವವನು) ಎಂದು ಹೇಳಿದರು.
ಇನ್ನಾದರೂ ನೀವು ಬದಲಾಗಿ, ದೇಶದಲ್ಲಿ ನರೇಂದ್ರ ಮೋದಿ ಅವರು ಬದಲಾವಣೆಯ ಪರ್ವ ಶುರು ಮಾಡಿದ್ದಾರೆ. ನಿಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ. ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಂತೆ ಮಾಡಿ ಎಂದು ಮುಸ್ಲಿಂ ಸಮುದಾಯದವರಿಗೆ ಸೋಮಣ್ಣ ಕರೆ ನೀಡಿದರು.
ನಾನು ಈ ಪ್ರದೇಶದ ಬಡವರಿಗಾಗಿ 1 ಸಾವಿರ ಮನೆಗಳನ್ನು ಕಟ್ಟಿಕೊಡುತ್ತಿದ್ದೇನೆ. ನನ್ನ ಬೆಂಬಲಿಸದಿದ್ದರೂ ಪರವಾಗಿಲ್ಲ. ಆದ್ರೆ ನನ್ನ ವಿರುದ್ಧ ಸುಮ್ಮನೆ ಅಪಪ್ರಚಾರ ಮಾಡಬೇಡಿ. ನಾನು ಬಸವ ತತ್ವದಲ್ಲಿ ನಂಬಿಕೆಯನ್ನಿಟ್ಟುಕೊಂಡು ಅದರಂತೆ ನಡೆಯುತ್ತಿರುವ ವ್ಯಕ್ತಿ. ಅದನ್ನು ನೀವು ಅರ್ಥ ಮಾಡಿಕೊಳ್ಳಬೇಕು, ನೀವು ಬೆಂಬಲಿಸದಿದ್ದರೂ ನಾನು ನಿಮ್ಮ ಸೇವೆ ಮಾಡುತ್ತೇನೆ. ಈ ಈದ್ಗಾ ಮೈದಾನವನ್ನು ಆರು ತಿಂಗಳಿನಲ್ಲಿ ಕಟ್ಟಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಈ ಕಾರ್ಯಕ್ರಮಕ್ಕೆ ನಾನು ಶಾಸಕ ಜಮೀರ್ ಅವರನ್ನು ಕರೆದುಕೊಂಡು ಬರಬೇಕು ಎಂದುಕೊಂಡಿದ್ದೆ. ಆದ್ರೆ ಅವನು ಬರಲಿಲ್ಲ. ಅವನು ನನ್ನ ಆತ್ಮೀಯ, ಅವನು ದಡ್ಡ ಅಲ್ಲ, ಕಿಲಾಡಿ. ಜಮೀರ್ ಕೇವಲ ಮುಸ್ಲಿಂರ ಎಂಎಲ್ ಎ ಅಲ್ಲ, ಎಲ್ಲಾ ವರ್ಗದವರ ಎಂಎಲ್ ಎ ಎಂದು ಸೋಮಣ್ಣ ಹೇಳಿದ್ರು.
ರೈಲ್ವೆ ಅಂಡರ್ ಪಾಸ್ ಉದ್ಘಾಟನೆ:
ಇದಕ್ಕೂ ಮೊದಲು ಸಚಿವರು, ನಾಯಂಡಹಳ್ಳಿ ವಾರ್ಡ್ ಸಂಖ್ಯೆ - 131ರಲ್ಲಿ ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರೈಲ್ವೆ ಅಂಡರ್ ಪಾಸ್ ಅನ್ನು ಅಭಿವೃದ್ಧಿಪಡಿಸಿ ಲೋಕಾರ್ಪಣೆ ಮಾಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಅಭಿವೃದ್ಧಿಯೇ ನನ್ನ ಧ್ಯೇಯ, ತಾಂತ್ರಿಕವಾಗಿ ಸರ್ವೆ ಮಾಡಿಸಿ ಯಾರಿಗೂ ತೊಂದರೆ ಆಗದಂತೆ ಈ ಅಂಡರ್ ಪಾಸ್ ನಿರ್ಮಾಣ ಮಾಡಲಾಗಿದೆ. ಜನರ ಪ್ರತಿನಿಧಿಗಳು ಚುನಾವಣೆ ವೇಳೆ ನೀಡಿದ ಭರವಸೆಗಳನ್ನು ಈಡೇರಿಸಬೇಕೆನ್ನುವುದು ನನ್ನ ಸಂಕಲ್ಪವಾಗಿದೆ. ಈ ಅಂಡರ್ ಪಾಸ್ ಯೋಜನೆಯನ್ನು ಸುಮಾರು 8.30 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.