ಬೆಂಗಳೂರು: ಗುಜರಾತ್ ಹಾಗೂ ಛತ್ತಿಸ್ಘಡ ರಾಜ್ಯಗಳ ಮಾದರಿಯಲ್ಲಿ ರಾಜ್ಯದಲ್ಲಿಯೂ ಸಾವಯವ ಕೃಷಿ ವಿಶ್ವವಿದ್ಯಾಲಯದ ತೆರೆಯಲು ಕುರಿತು ಕೃಷಿ ಸಚಿವ ಬಿ.ಸಿ.ಪಾಟೀಲ್ ಚಿಂತನೆ ನಡೆಸಿದ್ದಾರೆ.
![minister bc patil talk](https://etvbharatimages.akamaized.net/etvbharat/prod-images/kn-bng-02-minister-bc-patil-meeting-script-7208083_11022021165329_1102f_1613042609_1040.jpg)
ಓದಿ: ನಟಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲು
ವಿಕಾಸಸೌಧದ ತಮ್ಮ ಕಚೇರಿಯಲ್ಲಿ 'ಸಾವಯವ ಕೃಷಿ ಪ್ರಗತಿ ಪರಿಶೀಲನಾ ಸಭೆ' ನಡೆಸಿದ ಸಚಿವರು, ಆರೋಗ್ಯದ ದೃಷ್ಟಿಯಿಂದ ಸಾವಯವದತ್ತ ಜನರು ಹೆಚ್ಚು ವಾಲುತ್ತಿರುವುದರಿಂದ ಸಾವಯವ ಪದಾರ್ಥಗಳಿಗೆ ಹೆಚ್ಚು ಮಹತ್ವ ದೊರೆಯುತ್ತಿದೆ. ಹೀಗಾಗಿ ಸಾವಯವ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು.
ಗುಜರಾತ್ ಹಾಗೂ ಛತ್ತಿಸ್ಘಡ ರಾಜ್ಯಗಳಲ್ಲಿ ಸಾವಯವ ಕೃಷಿ ವಿಶ್ವವಿದ್ಯಾಲಯಗಳಿವೆ. ಇದೇ ಮಾದರಿಯಲ್ಲಿ ಶಿವಮೊಗ್ಗದಲ್ಲಿ ಸಾವಯವ ಕೃಷಿ ವಿವಿ ಸ್ಥಾಪಿಸುವ ಬಗ್ಗೆ ಸಾವಯವ ಸಮಿತಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಕುರಿತು ಚಿಂತನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಕೃಷಿ ಚಟುವಟಿಕೆಗಳಿಗೆ ಕೃಷಿ ಭೂಮಿಗೆ ಹೆಚ್ಚಿನ ರಾಸಾಯನಿಕಗಳನ್ನು ಬಳಸುವುದರಿಂದ ಆರೋಗ್ಯಕರ ಉತ್ಪನ್ನಗಳನ್ನು ಪಡೆಯಲು ಸಾಧ್ಯವಿಲ್ಲ. ರಾಸಾಯನಿಕ ಬಳಕೆ ಹೆಚ್ಚಿದಷ್ಟು ಭೂಮಿಯ ಪೋಷಕಾಂಶ ಕುಗ್ಗುವುದರ ಜೊತೆಗೆ ರಾಸಾಯನಿಕಗಳನ್ನು ಹೆಚ್ಚಾಗಿ ಬಳಸುವ ರೈತನ ಆರೋಗ್ಯದ ಮೇಲೂ ಸಹ ದುಷ್ಪರಿಣಾಮ ಬೀರುವುದು ಹೆಚ್ಚಾಗಿದೆ. ಹೀಗಾಗಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು.
ಭೂಮಿಗೆ ವಿಷ ಹಾಕಬಾರದೆಂದು ಸಂಕಲ್ಪ ತೊಟ್ಟು ಸಾವಯವದತ್ತ ಮುಖ ಮಾಡಬೇಕು. ಒಂದು ಜಿಲ್ಲೆ ಒಂದು ಉತ್ಪನ್ನದಡಿ ಸಿರಿಧಾನ್ಯ ಹಾಗೂ ಸಾವಯವ ಪದಾರ್ಥಗಳ ಸಂಸ್ಕರಣೆ ಮಾರುಕಟ್ಟೆ ವಿಸ್ತರಣೆಗೆ ಹೆಚ್ಚು ಒತ್ತು ನೀಡಬೇಕು. ಸ್ಥಳೀಯ ಧಾನ್ಯಗಳನ್ನು ಸಾವಯವ ಪಟ್ಟಿಗೆ ಸೇರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ರೈತರಿಗೊಂದು ಕಾರ್ಯಕ್ರಮದಲ್ಲಿ ಸಾವಯವ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕೆಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಸಾವಯವ ಕೃಷಿಗಾಗಿ ಸಂಪನ್ಮೂಲ ವ್ಯಕ್ತಿಗಳನ್ನು ಹೆಚ್ಚಿಸಬೇಕು. ಮಾದರಿ ಸಂಪನ್ಮೂಲ ವ್ಯಕ್ತಿಗಳು ಕೃಷಿಕರಿಗೆ ಸಾವಯವ ಕೃಷಿ ಕುರಿತು ಇನ್ನಷ್ಟು ಮಾಹಿತಿ ನೀಡಬೇಕು. ಸಾವಯವ ಗೊಬ್ಬರವನ್ನು ಸರ್ಕಾರದ ಸಂಸ್ಥೆಗಳೇ ಪ್ರಮಾಣೀಕರಿಸುವಂತಾಗಬೇಕು. ಗುಣಮಟ್ಟದ ಪ್ರಮಾಣೀಕೃತ ಸಾವಯವ ಗೊಬ್ಬರ ತಯಾರಿಕೆ ಸೇರಿದಂತೆ ಮತ್ತಿತರ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.