ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಹೆಚ್ಚಳದಲ್ಲಿ ಹಿಂದಿನ ದಾಖಲೆಗಳನ್ನು ಹಿಂದಿಕ್ಕಲಾಗಿದೆ. ಇಂದು ಹೊಸ 63 ಸೋಂಕಿತರು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 925ಕ್ಕೆ ಏರಿಕೆಯಾಗಿದೆ.
ಇದುವರೆಗೆ 31 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 433 ಮಂದಿ ಸೋಂಕಿನಿಂದ ಗುಣಮುಖರಾಗಿ, ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 449 ಮಂದಿಗೆ ಈಗ ಚಿಕಿತ್ಸೆ ನೀಡಲಾಗುತ್ತಿದ್ದು, 11 ಜನರನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ.
ರಾಜ್ಯಾದ್ಯಂತ ಒಟ್ಟು ಸುಮಾರು 22, 474 ಮಂದಿಯ ಮೇಲೆ ನಿಗಾವಹಿಸಲಾಗಿದೆ. ಈವರೆಗೂ ಒಟ್ಟು 1,16,533 ಮಂದಿಗೆ ಸೋಂಕು ಪರೀಕ್ಷೆ ನಡೆಸಲಾಗಿದೆ. ಇಂದು 4,938 ಮಂದಿಯನ್ನು ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ.
ಕೋವಿಡ್ ಸೋಂಕಿನ ಅಂಕಿ-ಅಂಶಗಳಲ್ಲಿ ಮಾರ್ಚ್ನಲ್ಲಿ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ, ಇಂದು ಹದಿಮೂರನೇ ಸ್ಥಾನದಲ್ಲಿದೆ. ಶಂಕಿತ ರೋಗಿಗಳು ಪ್ರತ್ಯೇಕ ನಿಗಾ ಘಟಕಗಳಲ್ಲಿರುವುದನ್ನು ಕಡ್ಡಾಯ ಮಾಡಲಾಗಿದೆ. ಶಂಕಿತ ರೋಗಿಗಳ ಪರೀಕ್ಷಾ ವರದಿಯಲ್ಲಿ inconclusive ಎಂದಿದ್ದಲ್ಲಿ ಅವರನ್ನು ಕಡ್ಡಾಯವಾಗಿ ನಿಗಾ ಘಟಕಗಳಲ್ಲಿ ಇಡಬೇಕಾಗುತ್ತದೆ ಎಂಬ ಅಂಶವನ್ನು ಇಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ವಲಸೆ ಕಾರ್ಮಿಕರಿಗೆ ಊಟ ವಸತಿ ಸೌಲಭ್ಯವನ್ನು ಒದಗಿಸಿ ಅವರು ಸ್ವಂತ ಜಾಗಗಳಿಗೆ ಬಸ್ ರೈಲು ಮೂಲಕ ಪ್ರಯಾಣಿಸಲು ವ್ಯವಸ್ಥೆ ಮಾಡಲು ಕೇಂದ್ರ ಗೃಹ ಇಲಾಖೆ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ರೈಲುಗಳಲ್ಲಿ ಸಂಚರಿಸುವಾಗ ಪ್ರಯಾಣಿಕರು ಅನುಸರಿಸಬೇಕಾದ ವಿಸ್ಕೃತ ಮಾರ್ಗಸೂಚಿಗಳನ್ನು ಸಹ ಇಂದು ಕೇಂದ್ರ ಇಲಾಖೆ ಬಿಡುಗಡೆ ಮಾಡಿದೆ. ಅಂತೆಯೇ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ ಅಂತಾರಾಜ್ಯ ಸಂಚಾರಕ್ಕೆ ಎಲ್ಲಾ ರಾಜ್ಯಗಳೂ ಅನುಮತಿಸಬೇಕೆಂದು ಕೇಂದ್ರ ಗೃಹ ಇಲಾಖೆ ನಿರ್ದೇಶಿಸಿದೆ.
ಆಯುಷ್ ಇಲಾಖೆಯ ಹೊಸ ಉತ್ಪನ್ನಗಳ ಬಿಡುಗಡೆ:

ಕೋವಿಡ್ ಸಂದರ್ಭ ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಎರಡು ಹೊಸ ಉತ್ಪನ್ನಗಳನ್ನು ಆಯುಷ್ ಇಲಾಖೆಯು ತಯಾರಿಸಿದ್ದು, ಸಚಿವ ಸುರೇಶ್ ಕುಮಾರ್ ಬಿಡುಗಡೆ ಮಾಡಿದರು. ಆಯುಷ್ ನಿರ್ದೇಶಕಿ ಮೀನಾಕ್ಷಿ ನೇಗಿ, ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಈ ವೇಳೆ ಉಪಸ್ಥಿತರಿದ್ದರು.