ಬೆಂಗಳೂರು: ವೈಯಾಲಿಕಾವಲ್ ಸೊಸೈಟಿಯ 55 ನಿವೇಶನದಾರರಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದ್ದು, ಸೊಸೈಟಿ ನಾಗರಿಕ ಸೌಲಭ್ಯ ನಿವೇಶನಗಳಲ್ಲಿನ ಸೈಟ್ ಹಂಚಿಕೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ದೇಶಿಸಿದೆ.
ನಿವೇಶನದಾರರಾದ ವಿ.ಆರ್ ಪದ್ಮಾವತಿ ಸೇರಿದಂತೆ 53 ಮಂದಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯಪೀಠ ಈ ಮಧ್ಯಂತರ ಆದೇಶ ನೀಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಲೇಔಟ್ ಪ್ಲಾನ್ನಂತೆ ಸೈಟ್ ಖರೀದಿ ಮಾಡಲಾಗಿದೆ. ಆ ಬಳಿಕ ಸೊಸೈಟಿ ಮತ್ತು ಬಿಡಿಎ ಸೇರಿ ಬಡಾವಣೆಯ ಪ್ಲಾನ್ ಬದಲಿಸಿವೆ. ಇದರಲ್ಲಿ ನಿವೇಶನದಾರರ ತಪ್ಪಿಲ್ಲ. ಆದರೂ, ಇದೀಗ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಇದನ್ನೂ ಓದಿರಿ: ಕಾಲೇಜಿನಲ್ಲಿ ಹಿಜಾಬ್ ವಿವಾದ: ಹೈಕೋರ್ಟ್ಗೆ ಮತ್ತೆ ನಾಲ್ಕು ಅರ್ಜಿಗಳು ಸಲ್ಲಿಕೆ; ನಾಳೆ ವಿಚಾರಣೆ
ವಾದ ಆಲಿಸಿದ ಪೀಠ, ಯಥಾಸ್ಥಿತಿ ಕಾಯ್ದುಕೊಳ್ಳಲು ಬಿಡಿಎ, ವೈಯಾಲಿಕಾವಲ್ ಸೊಸೈಟಿಗೆ ಆದೇಶಿಸಿತು. ಅಲ್ಲದೆ, ಖಾಲಿ ನಿವೇಶನದಲ್ಲಿ ಕಟ್ಟಡ ನಿರ್ಮಿಸದಂತೆ ಮತ್ತು ಸದ್ಯಕ್ಕೆ ನಿರ್ಮಾಣವಾಗಿರುವ ಯಾವುದೇ ಕಟ್ಟಡವನ್ನು ತೆರವುಗೊಳಿಸದಂತೆ ಸೂಚನೆ ನೀಡಿ, ವಿಚಾರಣೆ ಮುಂದೂಡಿತು. ಈ ಹಿಂದೆ ಹೈಕೋರ್ಟ್ ನಾಗರೀಕ ಸೌಲಭ್ಯದ ನಿವೇಶನದಲ್ಲಿ ಸೈಟ್ ಹಂಚಿಕೆ ಮಾಡಿದ್ದರೆ ಅಂತಹವುಗಳನ್ನು ತೆರವುಗೊಳಿಸಬೇಕೆಂದು ಆದೇಶಿಸಿತ್ತು. ಹೀಗಾಗಿ ನಿವೇಶನದಾರರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.