ಬೆಂಗಳೂರು: ಬಿಬಿಎಂಪಿ ನೂತನ ಮೇಯರ್ ಆಗಿ ಗೌತಮ್ ಕುಮಾರ್ ಆಯ್ಕೆ ಆಗಿದ್ದಾರೆ. 129 ಮತಗಳನ್ನು ಪಡೆಯುವ ಮೂಲಕ ಬೆಂಗಳೂರು ಪಾಲಿಕೆಗೆ ಹೊಸ ಮೇಯರ್ ಆಗಿದ್ದಾರೆ. ಈ ಮೂಲಕ ಅಧಿಕಾರದ ಬರ ಎದುರಿಸಿದ್ದ ಬಿಜೆಪಿ ಆ ಬರ ನೀಗಿಸಿಕೊಂಡಿದೆ. ಈ ನಡುವೆ ಗೌತಮ್ ಹೊಸ ಮೇಯರ್ ಆಗಿ ಆಯ್ಕೆ ಆಗುತ್ತಿದ್ದಂತೆ ಜಯಘೋಷಗಳನ್ನ ಹಾಕಲಾಯಿತು.
ಕಾಂಗ್ರೆಸ್ ಅಭ್ಯರ್ಥಿ ಸತ್ಯನಾರಾಯಣ 112 ಮತ ಪಡೆದು ಸೋತಿದ್ದು, 17 ಮತಗಳ ಅಂತರದಲ್ಲಿ ಗೌತಮ್ ಕುಮಾರ್ ಗೆದ್ದಿದ್ದಾರೆ. ಇನ್ನು ಉಪಮೇಯರ್ ಆಗಿ ಬೊಮ್ಮನಹಳ್ಳಿ ವಾರ್ಡ್ನ ರಾಮ್ ಮೋಹನ್ ರಾಜ್ ಬಹುಮತ ಪಡೆದು ಗೆದ್ದಿದ್ದಾರೆ.
- ಬಹಳ ವರ್ಷಗಳ ನಂತರ ಪಾಲಿಕೆ ಬಿಜೆಪಿ ಹಿಡಿತಕ್ಕೆ ಬಂದ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಸಂಭ್ರಮ ಮನೆ ಮಾಡಿದೆ. ಈ ನಡುವೆ ಉಪಮೇಯರ್ ಆಯ್ಕೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.
- ಬಿಬಿಎಂಪಿಯಲ್ಲಿ ಮೇಯರ್- ಉಪಮೇಯರ್ ಆಯ್ಕೆಗೆ ಕೈ ಎತ್ತುವ ಮೂಲಕ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಬೆಂಗಳೂರಿನ ಎಲ್ಲ ಶಾಸಕರು, ರಾಜ್ಯಸಭೆ, ಲೋಕಸಭೆ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದಾರೆ. ಚುನಾವಣೆ ಪ್ರಕ್ರಿಯೆಯಂತೆ ಎಲ್ಲ ಸದಸ್ಯರ ಸಹಿ ಪಡೆದರು.
- ಪರವಾಗಿ ಕೈ ಎತ್ತಿದವರು ಹಾಗೂ ವಿರೋಧವಾಗಿ ಕೈ ಎತ್ತಿದವರ ಸಹಿಯನ್ನ ಪ್ರತ್ಯೇಕವಾಗಿ ಪಡೆಯಲಾಗುತ್ತದೆ. ಬಿಬಿಎಂಪಿಯ ಕೌನ್ಸಿಲ್ ಕಟ್ಟಡದಲ್ಲಿ ಈ ಚುನಾವಣೆ ನಡೆಯುತ್ತಿದೆ. ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ನೇತೃತ್ವದಲ್ಲಿ ಈ ಮತದಾನ ಪ್ರಕ್ರಿಯೆ ನಡೆಯುತ್ತಿದೆ.
ಬೆಳ್ಳಿ ಬ್ಯಾಟನ್ ಹಸ್ತಾಂತರಿಸುವ ಮೂಲಕ ಮಾಜಿ ಮೇಯರ್ ಗಂಗಾಂಬಿಕೆ, ಗೌತಮ್ಗೆ ಅಧಿಕಾರ ಹಸ್ತಾಂತರಿಸಿದರು. ಕೆಂಪೇಗೌಡ ಮೂರ್ತಿ ಹಸ್ತಾಂತರಿಸುವ ಮೂಲಕ ಉಪ ಮೇಯರ್ ಭದ್ರೇಗೌಡ ಅಧಿಕಾರ ಹಸ್ತಾಂತರಿಸಿದರು.
ಚುನಾವಣೆ ಬಹಿಷ್ಕರಿಸಿದ ಜೆಡಿಎಸ್ನ ಇಬ್ಬರು:
ಜೆಡಿಎಸ್ನ ಇಬ್ಬರು ಸದಸ್ಯರು ಈಗಾಗಲೇ ಚುನಾವಣೆ ಬಹಿಷ್ಕರಿಸಿ ಹೊರ ನಡೆದಿದ್ದಾರೆ. 257 ಮತದಾರರಲ್ಲಿ ಒಟ್ಟು ಎಂಟು ಜನ ಗೈರು ಹಾಜರಾಗಿದ್ದಾರೆ. ಚುನಾವಣಾ ಸಭೆಯಿಂದ ಹೊರನಡೆದ ದೇವದಾಸ್ ಹಾಗೂ ಮಂಜುಳಾ ನಾರಾಯಣಸ್ವಾಮಿ. ಈ ಸದಸ್ಯರನ್ನ ಕೂಗಿ ಕರೆದ ಕಾಂಗ್ರೆಸ್ ಕಾರ್ಪೋರೇಟರ್ಗಳು. ಕಾಂಗ್ರೆಸ್ನ ವಿಧಾನಪರಿಷತ್ ಸದಸ್ಯ ರಘು ಕೂಡಾ ಗೈರು ಹಾಜರಾಗಿದ್ದಾರೆ. ಇನ್ನು ಕಾಂಗ್ರೆಸ್ನ ಜೈರಾಂ ರಮೇಶ್, ರಾಮನಗರ ಎಂಪಿ ಡಿಕೆ ಸುರೇಶ್ ಗೈರಾದರೆ, ಬಿಜೆಪಿಯಿಂದ ಸಚಿವೆ ನಿರ್ಮಲಾ ಸೀತಾರಾಮನ್ ಅಬ್ಸೆಂಟ್ ಆಗಿದ್ದಾರೆ.
ನಾಮಪತ್ರ ವಾಪಸ್ ಪಡೆದ ಪದ್ಮನಾಭ ರೆಡ್ಡಿ: ಇದಕ್ಕೂ ಮೊದಲು ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಪದ್ಮನಾಭರೆಡ್ಡಿ ತಮ್ಮ ನಾಮಪತ್ರ ವಾಪಸ್ ಪಡೆದರು.
ಗೌತಮ್ ಅವರನ್ನ ಮೇಯರ್ ಆಗಿ ಅಂತಿಮಗೊಳಿಸಿದ್ದ ಬಿಜೆಪಿ: ಬಿಜೆಪಿ ಅಂತಿಮವಾಗಿ ಮೇಯರ್ ಅಭ್ಯರ್ಥಿಯನ್ನ ಅಂತಿಮಗೊಳಿಸಿದೆ. ಗೌತಮ್ ಅವರನ್ನ ಮೇಯರ್ ಅಭ್ಯರ್ಥಿಯಾಗಿ ಕೇಸರಿ ಪಡೆ ಆಯ್ಕೆ ಮಾಡಿದೆ. ಉಪಮೇಯರ್ ಯಾರು ಅನ್ನೋದನ್ನ ಪಾಲಿಕೆಯಲ್ಲೇ ನಿರ್ಧಾರ ಮಾಡ್ತೇವೆ ಎಂದು ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ನಡೆದ ಸಭೆ ಮುಕ್ತಾಯವಾದ ಬಳಿಕ ಸಚಿವ ಆರ್ ಅಶೋಕ್ ಈ ವಿಷಯ ತಿಳಿಸಿದ್ದಾರೆ. ಈಗಾಗಲೇ ಪಕ್ಷದ ಅಧ್ಯಕ್ಷರು ನನಗೆ ಸೂಚನೆ ನೀಡಿದ್ದಾರೆ. ನಮ್ಮದು ಶಿಸ್ತಿನ ಪಕ್ಷ ಈ ಬಗ್ಗೆ ಯಾವುದೇ ಗೊಂದಲಗಳು ಇಲ್ಲ. ಸಿಎಂ ಬಿಎಸ್ವೈ ಜೊತೆಗೂ ಈ ಬಗ್ಗೆ ಮಾತನಾಡಿದ್ದೇನೆ.ಯಾವುದೇ ಗೊಂದಲ, ಅಸಮಾಧಾನ ಇಲ್ಲ. ಸಭೆಗೆ ಸಿಎಂ ಬರ್ತಿಲ್ಲ, ಆದರೆ ಚುನಾವಣೆ ಪ್ರಕ್ರಿಯೆಗಳ ಬಗ್ಗೆ ಎಲ್ಲ ಮಾಹಿತಿಯನ್ನ ಪಡೆದುಕೊಂಡಿದ್ದಾರೆ. ಕೇಂದ್ರ ಸಚಿವ ಸದಾನಂದ ಗೌಡ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.
ಇನ್ನು, ಬಿಬಿಎಂಪಿಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು.
ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿಯ ಗೌತಮ್ , ಪದ್ಮನಾಭ ರೆಡ್ಡಿ ಮೇಯರ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಗುರುಮೂರ್ತಿರೆಡ್ಡಿ, ಮಹಾಲಕ್ಷ್ಮಿ, ರಾಮಮೋಹನ ರಾಜ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಕಾಂಗ್ರೆಸ್ನಂದ ಸತ್ಯ ನಾರಾಯಣ ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರೆ, ಜೆಡಿಎಸ್ನಿಂದ ಗಂಗಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ನಾಮಪತ್ರ ವಾಪಸ್ ಪಡೆಯಲು ಇಂದು 11 ಗಂಟೆಯ ನಂತರ ಸಮಯ ನಿಗದಿ ಮಾಡಲಾಗಿದೆ.
12 ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಯುತ್ತಿದೆ. ಇದುವರೆಗೂ ನಾಲ್ಕು ಸಮಿತಿಗಳಿಗೆ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ. ಉಳಿದ ಸಮಿತಿಗಳಿಗೆ ನಾನಾ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಮೇಯರ್ ಸ್ಥಾನಕ್ಕೆ ಒಟ್ಟು 7 ಹಾಗೂ ಉಪಮೇಯರ್ ಸ್ಥಾನಕ್ಕೆ ಒಟ್ಟು 5 ನಾಮಪತ್ರ ಸಲ್ಲಿಕೆಯಾಗಿವೆ.
ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಗೌತಮ್ ಹಾಗೂ ಪದ್ಮನಾಭರೆಡ್ಡಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಮಹಾಲಕ್ಷ್ಮಿ ರವೀಂದ್ರ , ಗುರುಮೂರ್ತಿ ರೆಡ್ಡಿ ಹಾಗೂ ಮೋಹನ್ ರಾಜ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಕಾಂಗ್ರೆಸ್- ಜೆಡಿಎಸ್ ಮೈತ್ರಿಯಿಂದ ಮೇಯರ್ ಅಭ್ಯರ್ಥಿಯಾಗಿ ಸತ್ಯನಾರಾಯಣ ಹಾಗೂ ಉಪಮೇಯರ್ ಅಭ್ಯರ್ಥಿಯಾಗಿ ಗಂಗಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಬೆಂಗಳೂರಿನ ಅನರ್ಹ ಶಾಸಕರು ಬೇಸರ..? ಖಾಸಗಿ ಹೋಟೆಲ್ನಲ್ಲಿ ಮಹತ್ವದ ಸಭೆ
ಬೆಂಗಳೂರಿನ ಅನರ್ಹ ಶಾಸಕರು ಬೇಸರ..? ಸಭೆ ನಡೆಸುತ್ತಿರುವ ಈ ಶಾಸಕರುಬಿಜೆಪಿಯಿಂದ ಮೇಯರ್ ಆಯ್ಕೆ ಸಂಬಂಧ ಬೆಂಗಳೂರಿನ ಅನರ್ಹ ಶಾಸಕರು ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಅನರ್ಹ ಶಾಸಕರಾದ ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜು,ಗೋಪಾಲಯ್ಯ, ಮುನಿರತ್ನ ಮುನಿಸಿಕೊಂಡಿದ್ದಾರಂತೆ. ಬಿಬಿಎಂಪಿಯಲ್ಲಿ ಅನರ್ಹ ಶಾಸಕರ ಬೆಂಬಲಿಗರು ಎಂದು ಹೇಳಲಾಗುತ್ತಿರುವ 15ಕ್ಕೂ ಹೆಚ್ಚು ಕಾರ್ಪೋರೇಟರ್ ಇದ್ದರು. ಇದೇ ಕಾರಣಕ್ಕೆ ತಮಗೆ ಬೇಕಾದವರನ್ನೆ ಮೇಯರ್ ಮಾಡಲು ಇವರೆಲ್ಲ ರಣತಂತ್ರ ರೂಪಿಸಿದ್ದರು. ಈ ಸಂಬಂಧ ರಮೇಶ್ ಜಾರಕಿಹೊಳಿ ಇದೇ ಕಾರಣಕ್ಕೆ ರಮೇಶ್ ಜಾರಕಿಹೊಳಿ ನಿವಾಸದಲ್ಲೆ ಸಭೆ ನಡೆಸಿದ್ರು. ಈ ನಡುವೆ, ಮತ್ತೊಮ್ಮೆ ಅನರ್ಹ ಶಾಸಕರು ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸುತ್ತಿದ್ದಾರೆ. 10ಕ್ಕೂ ಹೆಚ್ಚು ಕಾರ್ಪೋರೇಟರ್ಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಡಿಸಿಎಂ ಎದುರು ಅಹವಾಲು: ನಿನ್ನೆ ನಡೆದ ಅನರ್ಹರ ಸಭೆಗೆ ಡಿಸಿಎಂ ಅಶ್ವತ್ಥ ನಾರಾಯಣ ಕರೆಸಿ ಬೇಡಿಕೆ ಇಟ್ಟಿದ್ದರು. ಉಪ- ಚುನಾವಣೆಯಲ್ಲಿ ವಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟಿದ್ದ ಅನರ್ಹ ಶಾಸಕರು. ಇದೇ ಕಾರಣಕ್ಕೆ ವಕ್ಕಲಿಗರೊಬ್ಬರನ್ನ ಮೇಯರ್ ಮಾಡಲು ನಿರ್ಧರಿಸಿದ್ದರು. ಮುನೀಂದ್ರ ಕುಮಾರ್ ಅಥವಾ ಎಲ್.ಶ್ರೀನಿವಾಸ್ ಇಬ್ಬರಲ್ಲಿ ಒಬ್ಬರನ್ನ ಯಾರನ್ನಾದರೂ ಮೇಯರ್ ಮಾಡಲು ಇವರೆಲ್ಲ ಪ್ಲಾನ್ ರೂಪಿಸಿದ್ದರು. ಹೀಗಾಗಿಯೇ ತಮ್ಮ ಪ್ಲಾನ್ ಪ್ರಕಾರ ಡಿಸಿಎಂ ಎದುರು ಬೇಡಿಕೆ ಸಹ ಇಟ್ಟಿದ್ದರು. ಅನರ್ಹರ ಬೇಡಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಮನಕ್ಕೂ ಡಿಸಿಎಂ ತಂದಿದ್ರು. ತಡರಾತ್ರಿ ಅನರ್ಹ ಶಾಸಕರೇ ನಳಿನ್ ಗೆ ಕರೆ ಮಾಡಿ ಮುನೀಂದ್ರ ಅಥವಾ ಎಲ್ ಶ್ರೀನಿವಾಸ್ ಮಾಡುವಂತೆ ಒತ್ತಡ ಹಾಕೋ ಪ್ರಯತ್ನ ನಡೆಸಿದ್ರು. ಆದರೆ ಈ ಯಾವುದೇ ಒತ್ತಡಗಳು ಕೆಲಸ ಮಾಡಿಲ್ಲ. ಇದರಿಂದ ಅನರ್ಹ ಶಾಸಕರು ಮತ್ತೊಮ್ಮೆ ಸಭೆ ಮಾಡಿ ಒತ್ತಡ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.