ಚಿಕ್ಕೋಡಿ: ಪ್ರವಾಹ ಇಳಿದು ಗ್ರಾಮಗಳಲ್ಲಿ ನೀರು ಖಾಲಿಯಾಗಿದ್ದರಿಂದ ಸಂತ್ರಸ್ತರು ತಮ್ಮ ತಮ್ಮ ಮನೆಗಳತ್ತ ಮುಖಮಾಡಿದ್ದಾರೆ. ಆದರೆ, ಪ್ರವಾಹದಿಂದ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಲ್ಬಣಗೊಂಡಿದೆ.
ಬೆಳಗಾವಿ ಜಿಲ್ಲೆಯ ಅಥಣಿ, ರಾಯಬಾಗ, ಕಾಗವಾಡ, ಚಿಕ್ಕೋಡಿ ತಾಲೂಕಿನಲ್ಲಿರುವ ಎಲ್ಲ ಕಾಳಜಿ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ನಿರಾಶ್ರಿತರಿಗೆ ಆರಂಭಿಸಿದ ಗೋಶಾಲೆಗಳಲ್ಲಿ ಬಿಟ್ಟಿದ್ದ ತಮ್ಮ ದನ-ಕರುಗಳನ್ನು ಹೊಡೆದುಕೊಂಡು ಹೋಗುತ್ತಿದ್ದರೂ ಅವುಗಳಿಗೆ ಮೇವು ಎಲ್ಲಿಂದ ತರಬೇಕೆಂಬುದೇ ಸಮಸ್ಯೆಯಾಗಿದೆ.
ಹೊಲ-ಗದ್ದೆಗಳಲ್ಲಿ ಸಮುದ್ರೋಪಾದಿಯಲ್ಲಿ ನೀರು ಹರಿದು ಕಬ್ಬು, ಗೋವಿನಜೋಳ, ಸೋಯಾಬೀನ್, ದನಗಳಿಗಾಗಿ ಬೆಳೆದ ಹುಲ್ಲು ಸೇರಿದಂತೆ ಇತರ ಬೆಳೆಗಳು ಸಂಪೂರ್ಣ ನಾಶವಾಗಿವೆ. ಇನ್ನು ಶಾಲಾ ಪುನಾರಂಭವಾಗುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ತೆರೆದಿದ್ದ ಗೋಶಾಲೆಗಳನ್ನು ಮುಚ್ಚುವುದು ಅನಿವಾರ್ಯವಾಗಿದೆ. ಒಟ್ಟಾರೆಯಾಗಿ ಪ್ರವಾಹದ ನಂತರ ಸೃಷ್ಟಿಯಾಗಿರುವ ಸಂದಿಗ್ಧತೆ ಇನ್ನಷ್ಟು ಘೋರ ಎನಿಸಿದೆ.
ಚಿಕ್ಕೋಡಿ ವಿಭಾಗದಲ್ಲಿ ನೂರಾರು ದನಕರಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ರಾತ್ರೋರಾತ್ರಿ ನದಿ ಪ್ರವಾಹ ಹೆಚ್ಚಾಗಿದ್ದರಿಂದ ಮನೆ ಮುಂದೆ ಹಿತ್ತಲಿನಲ್ಲಿ ಕಟ್ಟಿದ್ದ ದನ-ಕರುಗಳನ್ನು ಅಲ್ಲಿಯೇ ಬಿಟ್ಟು ಬಂದಿದ್ದರಿಂದ ಅವು ನೀರಲ್ಲಿ ಮುಳಗಿ ಸಾವನ್ನಪ್ಪಿವೆ.