ನವದೆಹಲಿ : ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, 'ಭಾರತ ಆರ್ಸಿಇಪಿಗೆ ಸೇರದೆ ಇರುವುದರ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಬೇಕು' ಎಂದು ಹೇಳಿದರು.
ಸೋಮವಾರ 15ನೇ ಪೂರ್ವ ಏಷ್ಯಾ ಶೃಂಗಸಭೆ (ಇಎಎಸ್) ಉದ್ದೇಶಿಸಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಾತನಾಡಿದ್ದರು. ಅವರ ಭಾಷಣದ ಬಗ್ಗೆ ಚಿದಂಬರಂ ಅಸಮಾಧಾನ ವ್ಯಕ್ತಪಡಿಸಿ, ಜೈಶಂಕರ್ ಅವರು ತಮ್ಮದೆ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. 1970 ಮತ್ತು 1980ರ ದಶಕಗಳಲ್ಲಿ ನಾನು ಕೇಳಿದ್ದ ಮಾತುಗಳಂತಿವೆ ಎಂದು ಕಿಡಿಕಾರಿದರು.
ಆರ್ಸಿಇಪಿಗೆ ಸೇರ್ಪಡೆಗೊಳ್ಳಲು ಭಾರತಕ್ಕೆ ತೊಡಕುಗಳಿವೆ. ಆದರೆ, ಸಂಸತ್ತಿನಲ್ಲಿ ಆಗಲಿ ಅಥವಾ ಜನರ ನಡುವೆ ಆಗಲಿ ಅಥವಾ ವಿರೋಧ ಪಕ್ಷಗಳನ್ನೂ ಒಳಗೊಂಡಂತೆ ಎಲ್ಲಿಯೂ ಇದುವರೆಗೂ ಚರ್ಚೆ ನಡೆದಿಲ್ಲ. ಇದು ಪ್ರಜಾಪ್ರಭುತ್ವದಲ್ಲಿ ಸ್ವೀಕಾರಾರ್ಹವಲ್ಲ. ಕೇಂದ್ರೀಕೃತ ನಿರ್ಧಾರ ತೆಗೆದುಕೊಳ್ಳುವ ಮತ್ತೊಂದು ಕೆಟ್ಟ ನಿರ್ಧಾರದ ಉದಾಹರಣೆಯಾಗಿದೆ ಎಂದರು.
ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ (ಆರ್ಸಿಇಪಿ) 15 ರಾಷ್ಟ್ರಗಳ ವಿಶ್ವದ ಅತಿದೊಡ್ಡ ವ್ಯಾಪಾರ ಸಂಸ್ಥೆಯಾಗಿದೆ. ಭಾರತ ಮತ್ತು ಚೀನಾ ಸಹ ಒಳಗೊಂಡಿದೆ. ಈ ವಿಷಯದ ಬಗ್ಗೆ ಕಾಂಗ್ರೆಸ್ ಪಕ್ಷವು ಪರಿಗಣಿಸುವ ನಿಲುವು ತೆಗೆದುಕೊಳ್ಳುವವರೆಗೆ ನಾನು ಅಂತಿಮ ದೃಷ್ಟಿಕೋನ ಕಾಯ್ದಿಟ್ಟುಕೊಳ್ಳುತ್ತೇನೆ ಎಂದು ಚಿದಂಬರಂ ಹೇಳಿದರು.
ಭಾರತ ಏಳು ವರ್ಷಗಳ ಕಾಲ ಮ್ಯಾರಾಥಾನ ಮಾತುಕತೆ ನಡೆಸಿದ ನಂತರ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವಕ್ಕೆ ಸೇರದಿರಲು ನಿರ್ಧರಿಸಿದೆ. ಇದು ದೇಶಿ ಉದ್ಯಮ ಮತ್ತು ರಫ್ತು ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಭಾರತದ ಕಳವಳ.
ಅಗ್ಗದ ಸರಕುಗಳನ್ನು ಉತ್ಪಾದಿಸುವ ಮತ್ತು ರಫ್ತು ಮಾಡುವ ದೇಶಗಳಿಗೆ ಮುಕ್ತ ವ್ಯಾಪಾರ ಒಪ್ಪಂದ ಪ್ರಯೋಜನಕಾರಿಯಾಗಲಿದೆ. ಆಮದು ಮಾಡಿಕೊಳ್ಳುವ ದೇಶಗಳಿಗೆ ಇದು ಅನಾನುಕೂಲಕರ ಎಂದು ಅನೇಕ ದೇಶಗಳು ದೂರುತ್ತಿವೆ. ಇದು ಮೂಲಭೂತ ಮುಕ್ತ ವ್ಯಾಪಾರಕ್ಕೆ ವಿರುದ್ಧವಾದ ವಾದಗಳಿವೆ.