ಹೈದರಾಬಾದ್: ಸತ್ಯಂ ಕಂಪ್ಯೂಟರ್ಸ್ ಹಗರಣದಲ್ಲಿ ಶಿಕ್ಷೆಗೊಳಗಾದ ಸತ್ಯಂ ಕಂಪ್ಯೂಟರ್ ಸರ್ವೀಸಸ್ ಸಂಸ್ಥಾಪಕ ಬಿ. ರಾಮಲಿಂಗ ರಾಜು ಅವರ ಜೀವನ ಕಥೆ ಕುರಿತು ವೆಬ್ ಸರಣಿ 'ಬ್ಯಾಡ್ ಬಾಯ್ ಬಿಲಿಯನೇರ್ಸ್: ಇಂಡಿಯಾ' ಬಿಡುಗಡೆ ಮಾಡದಂತೆ ನೆಟ್ಫ್ಲಿಕ್ಸ್ಗೆ ಹೈದರಾಬಾದ್ನ ನ್ಯಾಯಾಲಯ ತಡೆವೊಡ್ಡಿದೆ.
2018ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ರಾಮಲಿಂಗ ರಾಜು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಹೈದರಾಬಾದ್ ಸಿವಿಲ್ ನ್ಯಾಯಾಲಯವು ಸ್ಟೇ ಆದೇಶ ಜಾರಿಗೊಳಿಸಿತು. ಇದು ತನ್ನ ಗೌಪ್ಯತೆಯನ್ನು ಕಾನೂನುಬಾಹಿರ ರೀತಿಯಲ್ಲಿ ಆಕ್ರಮಿಸುತ್ತದೆ ಎಂಬ ಕಾರಣಕ್ಕೆ ನೆಟ್ಫ್ಲಿಕ್ಸ್ ವೆಬ್ ಸರಣಿ ಬಿಡುಗಡೆ ಮಾಡದಂತೆ ತಡೆಯಲು ಆದೇಶಿಸುವಂತೆ ಕೋರಿದ್ದರು.
ವೆಬ್ ಸರಣಿ ನಿರೂಪಣೆಯಲ್ಲಿ ಅರ್ಧ ಸತ್ಯಗಳಿಂದ ಕೂಡಿದೆ. ನನ್ನ ಖ್ಯಾತಿಯನ್ನು ತಗ್ಗಿಸುವಂತೆ ಸ್ಪಷ್ಟವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ರಾಜು ಆರೋಪಿಸಿದರು.
ನೆಟ್ಫ್ಲಿಕ್ಸ್ ಈಗಾಗಲೇ ವೆಬ್ ಸರಣಿಯ ಟ್ರೈಲರ್ ಬಿಡುಗಡೆ ಮಾಡಿದೆ. ಇದು ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ, ಸುಬ್ರತಾ ರಾಯ್ ಮತ್ತು ರಾಮಲಿಂಗ ರಾಜು ಅವರ ಕುರಿತಾಗಿದೆ.
ಬಿಹಾರದ ನ್ಯಾಯಾಲಯವು ಕಳೆದ ವಾರ ನೆಟ್ಫ್ಲಿಕ್ಸ್ ವೆಬ್ ಸರಣಿಯಲ್ಲಿ ಸುಬ್ರತಾ ರಾಯ್ ಹೆಸರು ಬಳಸದಂತೆ ನಿರ್ಬಂಧಿಸಿತ್ತು.
2009ರ ಜನವರಿ 7ರಂದು 7,000 ಕೋಟಿ ರೂ.ಗೂ ಅಧಿಕ ಮೌಲ್ಯದ ಸತ್ಯಂ ಕಂಪ್ಯೂಟರ್ಸ್ ಹಗರಣ ಬೆಳಕಿಗೆ ಬಂದಿತ್ತು. ಕಂಪನಿಯ ಖಾತೆ ಪುಸ್ತಕಗಳಲ್ಲಿ ಲಾಭ ಗಳಿಕೆಯನ್ನು ಉದ್ದೇಶಪೂರ್ವಕವಾಗಿ ಹಲವು ವರ್ಷಗಳಿಂದ ಹೆಚ್ಚಿಸಲಾಗಿದೆ ಎಂದು ರಾಮಲಿಂಗ ರಾಜು ಒಪ್ಪಿಕೊಂಡಿದ್ದರು. ಕೆಲವು ಷೇರುದಾರರ ದೂರಿನ ಮೇರೆಗೆ ಎರಡು ದಿನಗಳ ನಂತರ ಪೊಲೀಸರು ಆತನನ್ನು ಬಂಧಿಸಿದ್ದರು.
ರಾಜು ಮತ್ತು ಇತರ ಆರೋಪಿಗಳ ವಿರುದ್ಧ ಸಿಬಿಐ ಮೂರು ಚಾರ್ಜ್ಶೀಟ್ ಸಲ್ಲಿಸಿದ್ದು, ಮೋಸ, ಕ್ರಿಮಿನಲ್ ಪಿತೂರಿ, ಖೋಟಾ, ಖಾತೆಗಳಲ್ಲಿ ಸುಳ್ಳು ದಾಖಲು ಮತ್ತು ನಂಬಿಕೆ ಉಲ್ಲಂಘನೆ ಆರೋಪ ಹೊರಿಸಲಾಗಿತ್ತು. ಪ್ರಕರಣದಲ್ಲಿ 2015ರ ಏಪ್ರಿಲ್ನಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ರಾಜು, ಇಬ್ಬರು ಸಹೋದರರು ಮತ್ತು ಇತರ ಏಳು ಮಂದಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದು ಭಾರತದ ಅತಿದೊಡ್ಡ ಕಾರ್ಪೊರೇಟ್ ವಂಚನೆ ಎಂದು ದಾಖಲಾಗಿದೆ. ಆದರೆ, ಒಂದು ತಿಂಗಳ ನಂತರ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಲಯವು ಅವರ ಶಿಕ್ಷೆಯನ್ನು ಅಮಾನತುಗೊಳಿಸಿ ಅವರಿಗೆ ಜಾಮೀನು ನೀಡಿತ್ತು.