ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ರೌಡಿಗಳ ನಡುವಿನ ದ್ವೇಷಕ್ಕೆ ಮತ್ತೆ ನೆತ್ತರು ಹರಿದಿದೆ. ತಡರಾತ್ರಿ ರೌಡಿಶೀಟರ್ನನ್ನು ನಾಲ್ವರು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ.
ರೌಡಿಶೀಟರ್ ಪ್ರಕಾಶ್ ಅಲಿಯಾಸ್ ಒಂಡ್ರೆ (28) ಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈತ ನಗರದ ಹಲಸೂರು ಬಳಿಯ ಮರ್ಫಿಟೌನ್ ನಲ್ಲಿ ವಾಸವಾಗಿದ್ದ. ಈ ಹಿಂದೆ ಗೂಂಡಾ ಕಾಯ್ದೆ ಅಡಿಯಲ್ಲಿ ಪೊಲೀಸರ ಅತಿಥಿಯಾಗಿದ್ದ. 2013ರಲ್ಲಿ ಕೊಲೆ ಪ್ರಕರಣದಲ್ಲಿ ಜೈಲಿ ಸೇರಿದ್ದ ಒಂಡ್ರೆ, ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಿರೋಧಿಗಳ ಬಗ್ಗೆ ಎಚ್ಚರಿಕೆಯಿಂದ ಇರುತ್ತಿದ್ದ ಒಂಡ್ರೆ, ನಿನ್ನೆ ಸ್ನೇಹಿತನೊಂದಿಗೆ ಹೊರಹೋಗಿದ್ದನಂತೆ. ಈ ವೇಳೆ ನಾಲ್ವರು ದುಷ್ಕರ್ಮಿಗಳು ಆಟೋದಲ್ಲಿ ಒಂಡ್ರೆಯನ್ನು ಫಾಲೋ ಮಾಡಿದ್ದಾರೆ. ಕೊನೆಗೆ ಮದ್ರಾಸ್ ರಸ್ತೆಯ ತಾಮರೈ ಕಣನ್ ಸಿಗ್ನಲ್ ಬಳಿ ಅಡ್ಡಗಟ್ಟಿದ್ದಾರೆ. ನಂತರ ಮಾರಕಾಸ್ತ್ರಗಳಿಂದ ಒಂಡ್ರೆ ತಲೆ, ಎದೆ ಮತ್ತು ಕುತ್ತಿಗೆಯ ಹಲ್ಲೆ ನಡೆಸಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಳೆದ್ವೇಷ ಹಾಗೂ ಅಕ್ರಮ ಸಂಬಂಧ ಕೊಲೆಗೆ ಕಾರಣ ಎಂದು ಅನುಮಾನಿಸಲಾಗಿದೆ. ಮತ್ತೊಬ್ಬ ರೌಡಿಶೀಟರ್ ಲಾಲ್ ಅಂಡ್ ಗ್ಯಾಂಗ್ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಆರೋಪಿಗಳ ಪತ್ತೆಗಾಗಿ ಹಲಸೂರು ಖಾಕಿ ಪಡೆ ಬಲೆ ಬೀಸಿದ್ದಾರೆ.