ತುಮಕೂರು: ನಗರದಲ್ಲಿ ಮೊಹಮದ್ ಅಸ್ಲಾಂ ಎಂಬಾತ ಈಜಿಮೈಂಡ್ ಇಂಡಿಯಾ ಪ್ರೈ. ಲಿ ಸಂಸ್ಥೆಯ ಹೆಸರಿನಲ್ಲಿ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಹೂಡಿಕೆದಾರರು ಆರೋಪಿಸಿದ್ದಾರೆ.
2017 ರಿಂದ 2018ರ ಡಿಸೆಂಬರ್ವರೆಗೆ ಸಾರ್ವಜನಿಕರಿಗೆ ಹೂಡಿಕೆಗೆ ತಕ್ಕಂತೆ ಬಡ್ಡಿ ಹಣ ನೀಡಿ ಗ್ರಾಹಕರ ವಿಶ್ವಾಸ ಗಳಿಸಿದ್ದನು. ಅಲ್ಲದೆ ಏಕಾಏಕಿ 1 ಲಕ್ಷ ರೂ ಹೂಡಿಕೆ ಮಾಡಿದರೆ 4 ತಿಂಗಳು ಹತ್ತು ದಿನದ ಅವಧಿಗೆ 10 ಲಕ್ಷ ರೂ. ನೀಡುವುದಾಗಿ ಹೇಳಿ ಗ್ರಾಹಕರಿಂದ ಅಪಾರ ಪ್ರಮಾಣದ ಹಣ ಸಂಗ್ರಹಿಸಿದ್ದ. ಸಂಸ್ಥೆ ಪ್ರಾರಂಭವಾದಾಗಿನಿಂದ 2018ರ ಡಿಸೆಂಬರ್ ತಿಂಗಳವರೆಗೆ ತನ್ನ ಗ್ರಾಹಕರಿಗೆ ಹೆಚ್ಚಿನ ಬಡ್ಡಿ ನೀಡಿ ನಂಬಿಕೆ ಉಳಿಸಿಕೊಂಡಿದೆ. ಅದೇ ರೀತಿ ಅಪಾರ ಪ್ರಮಾಣದ ಡೆಪಾಸಿಟ್ ಹಣವನ್ನು ಕೂಡ ಸಂಗ್ರಹಿಸಲಾಗಿತ್ತು ಎಂಬ ಮಾಹಿತಿ ಹೂಡಿಕೆದಾರರಿಂದ ತಿಳಿದು ಬಂದಿದೆ.
ಈ ಸಂಸ್ಥೆಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಅಲ್ಪಸಂಖ್ಯಾತ ಸಮುದಾಯದವರಿಂದಲೇ ಕೋಟ್ಯಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿಸಿಕೊಳ್ಳಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮೊದಲ ಯೋಜನೆ ಜನರಲ್ ಪ್ಲಾನ್ ತಿಂಗಳ ಯೋಜನೆಯಲ್ಲಿ ಗ್ರಾಹಕ ಒಮ್ಮೆ 50 ಸಾವಿರ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಮೂರು ಸಾವಿರ ಮತ್ತು 1 ಲಕ್ಷ ಹೂಡಿಕೆ ಮಾಡಿದರೆ 6000, 2 ಲಕ್ಷಕ್ಕೆ ಹತ್ತರಿಂದ ಹನ್ನೆರಡು ಸಾವಿರ ರೂಪಾಯಿ, 5 ಲಕ್ಷಕ್ಕೆ 25ರಿಂದ 30 ಸಾವಿರ ರೂಪಾಯಿ ಬಡ್ಡಿ ನೀಡುವುದಾಗಿ ಒಡಂಬಡಿಕೆ ಮಾಡಿಕೊಂಡಿದ್ದ.
ಈ ನಾಲ್ಕು ತಿಂಗಳ ಅಂತರದಲ್ಲಿ ಒಂದು ಲಕ್ಷದಿಂದ ಐವತ್ತು ಲಕ್ಷದವರೆಗೂ ಹಣವನ್ನು ನೂರಾರು ಗ್ರಾಹಕರು ಹೂಡಿಕೆ ಮಾಡಿದ್ದರು. ನಂತರ ಅಸ್ಲಾಂ ತಾನು ನೀಡಿದ ಭರವಸೆಯಂತೆ 2019 ರ ಮಾರ್ಚ್ನಲ್ಲಿ ಗ್ರಾಹಕರಿಗೆ ಹಣವನ್ನು ಹಿಂತಿರುಗಿಸದೆ ಕೋಟ್ಯಂತರ ರೂಪಾಯಿ ಹಣದೊಂದಿಗೆ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಹೂಡಿಕೆದಾರರು ಆರೋಪಿಸುತ್ತಿದ್ದಾರೆ.
2019 ರ ಜನವರಿ ತಿಂಗಳಿನಿಂದ ಅಸ್ಲಂ ಕಚೇರಿಯ ಬಾಗಿಲನ್ನು ಹಾಕಿಕೊಂಡು ಕಣ್ಮರೆಯಾಗಿದ್ದಾನೆ. ಈತನಿಂದ ಮೋಸ ಹೋಗಿರುವುದಾಗಿ ಅರಿತ ಗ್ರಾಹಕರು ನಿತ್ಯ ಕಚೇರಿ ಬಳಿ ಬಂದು ಹಿಡಿಶಾಪ ಹಾಕಿ ಹೋಗುತ್ತಿದ್ದಾರೆ. ಅಲ್ಲದೆ ಆತನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಹೂಡಿಕೆದಾರರಿಂದ ಮಾಹಿತಿ ಪಡೆದರು.
ವಾಟ್ಸಪ್ ನಲ್ಲಿ ಸ್ಪಷ್ಟನೆ ನೀಡಿರುವ ಅಸ್ಲಂ
ಇನ್ನೊಂದೆಡೆ ಗೌಪ್ಯ ಸ್ಥಳದಲ್ಲಿ ಕುಳಿತು ವಾಟ್ಸಪ್ನಲ್ಲಿ ವಿಡಿಯೋ ಕಳಿಸಿರುವ ಅಸ್ಲಾಂ, ತುಮಕೂರಿನಿಂದ ಓಡಿಹೋಗಲು ಬೆಂಗಳೂರಿನ ಏರ್ಪೋರ್ಟ್ ಹೊರಗೆ ಅಸದ್ ಎಂಬಾತ ಸಹಾಯ ಮಾಡಿದ್ದಾನೆ ಎಂದು ಸ್ಪಷ್ಟೀಕರಣ ನೀಡಿರುವ ವಿಡಿಯೋ ವಾಟ್ಸಪ್ನಲ್ಲಿ ಹರಿದಾಡುತ್ತಿದೆ.