ನವದೆಹಲಿ: ಹದಿನೇಳನೇ ಲೋಕಸಭಾ ಚುನಾವಣೆಯ ಫಲಿತಾಂಶ ಬಹಿರಂಗವಾಗಿದ್ದು, ಬಿಜೆಪಿಯೇತರ ಸರ್ಕಾರ ರಚನೆಯ ಯೋಜನೆಯಲ್ಲಿದ್ದ ಎಲ್ಲ ಪಕ್ಷಗಳಿಗೂ ಭಾರಿ ಮುಖಭಂಗವಾಗಿದೆ.
ಈ ಭಾರಿ ಫಲಿತಾಂಶದಲ್ಲಿ ಸಾಕಷ್ಟು ಅಚ್ಚರಿಗಳಿಂದ ಕೂಡಿದ್ದು ಘಟಾನುಘಟಿ ನಾಯಕರುಗಳಿಗೆ ಮತದಾರ ಮನೆಯ ದಾರಿ ತೋರಿಸಿದ್ದಾನೆ. ಬಿಜೆಪಿಯ ಅಭೂತಪೂರ್ವ ಸಾಧನೆಯಲ್ಲಿ ಹನ್ನೆರಡು ಮಾಜಿ ಮುಖ್ಯಮಂತ್ರಿಗಳು ಸೋಲನುಭವಿಸಿದ್ದಾರೆ. ವಿಶೇಷವೆಂದರೆ ಈ ಹನ್ನೆರಡರಲ್ಲಿ ಎಂಟು ಮಂದಿ ಕಾಂಗ್ರೆಸ್ನವರಾಗಿದ್ದಾರೆ.
ಶೀಲಾ ದೀಕ್ಷಿತ್
ಮೂರು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದ್ದ ಶೀಲಾ ದೀಕ್ಷಿತ್ ಈಶಾನ್ಯ ದೆಹಲಿಯಲ್ಲಿ ಮೂರೂವರೆ ಲಕ್ಷಕ್ಕೂ ಅಧಿಕ ಮತಗಳಿಂದ ಪರಾಭವಗೊಂಡಿದ್ದಾರೆ. ಇಲ್ಲಿ ಬಿಜೆಪಿಯ ಮನೋಜ್ ತಿವಾರಿ ಗೆಲುವಿನ ನಗೆ ಬೀರಿದ್ದಾರೆ. ಸೋಲು ಅತ್ಯಂತ ನಿರಾಸೆ ಮೂಡಿಸಿದೆ ಎಂದು ಶೀಲಾ ದೀಕ್ಷಿತ್ ಹೇಳಿದ್ದಾರೆ.
ನಮೋ ನಮಃ ಎಂದ ಮತದಾರ...! ಕ್ರಿಕೆಟಿಗರಿಂದ ಶುಭಾಶಯಗಳ ಮಹಾಪೂರ
ಹೆಚ್.ಡಿ.ದೇವೇಗೌಡ
ಕರ್ನಾಟಕದ ವಿಚಾರದಲ್ಲಿ ಅತ್ಯಂತ ಹಿರಿಯ ರಾಜಕಾರಣಿ ಹಾಗೂ ಪ್ರಧಾನಿ ಹುದ್ದೆಯನ್ನು ನಿಭಾಯಿಸಿದ ಕನ್ನಡಿಗ ದೇವೇಗೌಡರ ಸೋಲು ರಾಷ್ಟ್ರಮಟ್ಟದಲ್ಲಿ ಅಚ್ಚರಿಗೆ ಕಾರಣವಾಗಿದೆ.
ಮೊಮ್ಮಗ ಪ್ರಜ್ವಲ್ ರೇವಣ್ಣನಿಗಾಗಿ ಹಾಸನ ಕ್ಷೇತ್ರವನ್ನು ತ್ಯಜಿಸಿ ತುಮಕೂರಿನಿಂದ ಸ್ಪರ್ಧಿಸಿದ್ದ ಹೆಚ್.ಡಿ.ಡಿ ಹದಿಮೂರು ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದಾರೆ. ಈ ಸೋಲು ಮೈತ್ರಿ ಸರ್ಕಾರದ ಮೇಲೂ ಪರಿಣಾಮ ಬೀರಿದೆ.
ಮಹಾ ಫಲಿತಾಂಶ: ಇಷ್ಟೊಂದು ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳು ಖಾತೆಯೇ ತೆರೆದಿಲ್ಲ..!
ದಿಗ್ವಿಜಯ್ ಸಿಂಗ್
ಮಧ್ಯ ಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಭೋಪಾಲ್ ಕ್ಷೇತ್ರದಲ್ಲಿ ಚೊಚ್ಚಲ ಲೋಕಸಭಾ ಚುನಾವಣೆ ಎದುರಿಸಿದ ಬಿಜೆಪಿ ಅಭ್ಯರ್ಥಿ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧ ಪರಾಭವ ಅನುಭವಿಸಿದ್ದಾರೆ.
ಈ ಕ್ಷೇತ್ರದಲ್ಲಿ ಪ್ರಗ್ಯಾ ಎಂಟೂವರೆ ಲಕ್ಷ ಮತ ಗಳಿಸಿದ್ದರೆ ದಿಗ್ವಿಜಯ್ ಸಿಂಗ್ ಐದು ಲಕ್ಷ ವೋಟ್ ಪಡೆದಿದ್ದಾರೆ. ಯಾವುದೇ ಪೈಪೋಟಿ ಇಲ್ಲದೆ ಪ್ರಗ್ಯಾ ನಿರಾಯಾಸ ಜಯ ಗಳಿಸಿದ್ದಾರೆ.
ಅಶೋಕ್ ಚವ್ಹಾಣ್
ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಸೋಲುಭವಿಸಿದ್ದು, ಪಕ್ಷಕ್ಕೆ ಅಚ್ಚರಿ ತಂದಿದೆ. ನಲ್ವತ್ತು ಸಾವಿರ ಮತಗಳ ಅಂತರದಿಂದ ಅಶೋಕ್ ಮುಖಭಂಗ ಅನುಭವಿಸಿದ್ದಾರೆ.
ಕಾಂಗ್ರೆಸ್ ಹಿಡಿತ ಹೊಂದಿದ್ದ ನಾಂದೇಡ್ ಕ್ಷೇತ್ರದಲ್ಲಿ ಬಿಜೆಪಿಯ ಪ್ರತಾಪ್ ಪಾಟೀಲ್ ಚಿಖಾಲ್ಕರ್ ಮಾಜಿ ಮುಖ್ಯಮಂತ್ರಿಗೆ ಸೋಲುಣಿಸಿದ್ದಾರೆ.
ಕುಟುಂಬದಲ್ಲಿದ್ದವರು ಒಂಭತ್ತು ಮತದಾರರು.. ಆತ ಗಳಿಸಿದ್ದು ಜಸ್ಟ್ ಐದೇ ವೋಟ್...!!
ಸುಶೀಲ್ ಕುಮಾರ್ ಶಿಂಧೆ
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸುಶೀಲ್ ಕುಮಾರ್ ಶಿಂಧೆ ಮಹಾರಾಷ್ಟ್ರದ ಸೋಲಾಪುರ ಕ್ಷೇತ್ರದಲ್ಲಿ ಬಿಜೆಪಿಯ ಸಿದ್ಧೇಶ್ವರ್ ಶಿವಾಚಾರ್ಯರಿಗೆ ಮಂಡಿಯೂರಿದ್ದಾರೆ. ಒಂದೂವರೆ ಲಕ್ಷಕ್ಕೂ ಅಧಿಕ ಮತಗಳಿಂದ ಬಿಜೆಪಿ ಸೋಲಾಪುರ ಕ್ಷೇತ್ರವನ್ನು ತನ್ನದಾಗಿಸಿಕೊಂಡಿದೆ.
ಹರೀಶ್ ರಾವತ್
ಉತ್ತರಾಖಂಡ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಬಿಜೆಪಿ ರಾಜ್ಯಾಧ್ಯಕ್ಷ ಅಜಯ್ ಭಟ್ ವಿರುದ್ಧ ಸೋಲನುಭವಿಸಿದ್ದಾರೆ. ನೈನಿತಾಲ್ ಕ್ಷೇತ್ರದಲ್ಲಿ ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ಉತ್ತರಾಖಂಡ ಮಾಜಿ ಸಿಎಂ ಪರಾಭವಗೊಂಡಿದ್ದಾರೆ.
ಮುಕುಲ್ ಸಂಗ್ಮಾ
ಮೇಘಾಲಯದ ಮಾಜಿ ಸಿಎಂ ಮುಕುಲ್ ಸಂಗ್ಮಾ ತುರಾ ಕ್ಷೇತ್ರದಲ್ಲಿ ಎನ್ಪಿಪಿಯ ಅಗಾತ ಸಂಗ್ಮಾ ವಿರುದ್ಧ ಸೋತಿದ್ದಾರೆ. ಮುಕುಲ್ ಸಂಗ್ಮಾ ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ಇಲ್ಲಿ ಸೋಲನುಭವಿಸಿದ್ದಾರೆ.
ಭೂಪಿಂದರ್ ಸಿಂಗ್ ಹೂಡಾ
ಹರಿಯಾಣದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಸೋನಿಪತ್ ಕ್ಷೇತ್ರದಲ್ಲಿ ಬಿಜೆಪಿಯ ರಮೇಶ್ ಚಂದೇರ್ ಕೌಶಿಕ್ ವಿರುದ್ಧ ಒಂದೂವರೆ ಲಕ್ಷ ವೋಟ್ಗಳಿಂದ ಸೋಲುಂಡಿದ್ದಾರೆ. ವಿಶೇಷವೆಂದರೆ ಹೂಡಾ ಹರಿಯಾಣದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು.
ವೀರಪ್ಪ ಮೊಯ್ಲಿ
ಕರ್ನಾಟಕದಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್ ಪರಾಮರ್ಶೆಯಲ್ಲಿ ತೊಡಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ವೀರಪ್ಪ ಮೊಯ್ಲಿ ಬಿಜೆಪಿಯ ಬಚ್ಚೇಗೌಡರ ವಿರುದ್ಧ ಮುಗ್ಗರಿಸಿದ್ದಾರೆ.
ಎರಡು ಬಾರಿ ಇದೇ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಮೊಯ್ಲಿಯನ್ನು ಈ ಬಾರಿ ಜನ ತಿರಸ್ಕರಿದ್ದಾರೆ.
ಸನ್ನಿ ಡಿಯೋಲ್ ಬದಲಿಗೆ ತನ್ನ ಹೆಸರು ಹೇಳಿದ ಅರ್ನಾಬ್ ಗೋಸ್ವಾಮಿಗೆ ಸನ್ನಿ ಪ್ರತಿಕ್ರಿಯೆ ಹೀಗಿತ್ತು..!
ಮೆಹಬೂಬಾ ಮುಫ್ತಿ
ಪಿಡಿಪಿ ಅಧ್ಯಕ್ಷೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅನಂತ್ನಾಗ್ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.
ಅನಂತ್ನಾಗ್ ಲೋಕಸಭಾ ಕ್ಷೇತ್ರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿಯ ಹಸ್ನೈನ್ ಮಸೂದಿ ಹತ್ತು ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಬಾಬುಲಾಲ್ ಮರಂಡಿ
ಜಾರ್ಖಂಡ್ ರಾಜ್ಯ ಮಾಜಿ ಸಿಎಂ ಬಾಬುಲಾಲ್ ಮರಂಡಿ ಕೊಡೆರ್ಮಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅನ್ನಪೂರ್ಣ ದೇವಿ ಮುಂದೆ ಸೋಲುಂಡಿದ್ದಾರೆ. ನಾಲ್ಕು ಲಕ್ಷ ಮತಗಳ ದೊಡ್ಡ ಅಂತರದಿಂದ ಜಾರ್ಖಂಡ್ ರಾಜ್ಯ ಮೊದಲ ಮುಖ್ಯಮಂತ್ರಿ ಪರಾಭವಗೊಂಡಿದ್ದಾರೆ.
ಶಿಬು ಸೊರೆನ್
ಜಾರ್ಖಂಡ್ ಮುಕ್ತಿ ಮೋರ್ಚಾದ ಅಧ್ಯಕ್ಷ ಹಾಗೂ ಜಾರ್ಖಂಡ್ನ ಮಾಜಿ ಸಿಎಂ ದುಮ್ಕಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಸೊರೆನ್ಗೆ ಮಣಿದಿದ್ದಾರೆ. 47,590 ಮತಗಳಿಂದ ಬಿಜೆಪಿ ದುಮ್ಕಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.