ಆಂಧ್ರಪ್ರದೇಶ: ಆಂಧ್ರ-ಒಡಿಶಾ ಗಡಿಯಲ್ಲಿರುವ ಅಲ್ಲುರಿ ಸೀತಾ ರಾಮರಾಜು ಜಿಲ್ಲೆಯ ಚಿತ್ರಕೊಂಡ ಪೊಲೀಸ್ ಠಾಣೆಯ ಮೇಲೆ ಆದಿವಾಸಿಗಳು ವಿವಿಧ ಅಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಎಒಬಿ ಕತಫ್ ಪ್ರದೇಶದಲ್ಲಿ ಗುರುಪ್ರಿಯಾ ಸೇತುವೆ ನಿರ್ಮಾಣವಾದ ಬಳಿಕ ಸರ್ಕಾರ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುತ್ತಿಲ್ಲವೆಂದು ಸಿಟ್ಟಿಗೆದ್ದು ಏಳು ಪಂಚಾತ್ ವ್ಯಾಪ್ತಿಯ ಆದಿವಾಸಿಗಳು ಚಿತ್ರಕೊಂಡ ಬ್ಲಾಕ್ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಬಳಿಕ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಪೊಲೀಸ್ ಠಾಣೆಯ ಗೇಟುಗಳನ್ನು ಧ್ವಂಸಗೊಳಿಸಿದ ಜನರು ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ನಂತರ ವಾಹನಗಳು, ಪೀಠೋಪಕರಣಗಳು ಮತ್ತು ಕಟ್ಟಡದ ಮೇಲೂ ದಾಳಿ ಮುಂದುವರೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಕ್ಷೇತ್ರದ ಶಾಸಕರು ಆದಿವಾಸಿಗಳನ್ನು ಸಮಾಧಾನಪಡಿಸಿ ಠಾಣೆಯಿಂದ ಕಳುಹಿಸಿದ್ದಾರೆ. ಠಾಣೆಯ ಮೇಲಿನ ದಾಳಿಯ ಹಿಂದೆ ಯಾವುದೋ ದುರುದ್ದೇಶವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇತ್ತೀಚೆಗೆ ಹಲವು ಗ್ರಾಮಗಳಲ್ಲಿ ಗಾಂಜಾ ಅಡ್ಡೆಗಳ ಮೇಲೆ ಚಿತ್ರಕೊಂಡ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಕೆಲವು ಯುವಕರನ್ನು ಬಂಧಿಸಲಾಗಿತ್ತು. ಈ ವೇಳೆ ಪೊಲೀಸರು ಹಾಗೂ ಬುಡಕಟ್ಟು ಜನಾಂಗದವರ ನಡುವೆ ಮಾತಿನ ಚಕಮಕಿ, ಘರ್ಷಣೆಯೂ ನಡೆದಿತ್ತು. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದು, ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿದ್ದವು. ಘಟನೆಯ ಕುರಿತಾಗಿ ಒಡಿಶಾದ ಮಾಲ್ಕನ್ಗಿರಿ ಜಿಲ್ಲೆಯ ಎಸ್ಪಿಗೆ ಆದಿವಾಸಿಗಳು ದೂರು ನೀಡಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲವಂತೆ. ಇದೀಗ ಆದಿವಾಸಿಗಳು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.