ಜೈಪುರ: ಕಳೆದ ವರ್ಷ ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದ ಸಚಿನ್ ಪೈಲಟ್ ಹಾಗೂ ಅವರ 18 ಕಾಂಗ್ರೆಸ್ ಶಾಸಕರ ವಿರುದ್ಧ ಹಾಕಿದ್ದ ಕೇಸ್ ವಾಪಸ್ ಪಡೆಯಲು ಪಕ್ಷದ ಮುಖ್ಯ ವಿಪ್ ಮುಂದಾಗಿದ್ದಾರೆ.
ಕಳೆದ ವರ್ಷ ಮಹೇಶ್ ಜೋಶಿ ಅವರು ಸುಪ್ರೀಂಕೋರ್ಟ್ನಲ್ಲಿ ಎಸ್ಎಲ್ಪಿ (ವಿಶೇಷ ರಜೆ ಅರ್ಜಿಗಳು) ಸಲ್ಲಿಸಿದ್ದರು. ಮೂಲಗಳ ಪ್ರಕಾರ, ಎಸ್ಎಲ್ಪಿ ಹಿಂಪಡೆಯುವ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ಗೆ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.
ಕೆಲವು ದಿನಗಳ ಹಿಂದೆ ಮುಖ್ಯ ವಿಪ್ನ ಎಸ್ಎಲ್ಪಿ ವಿಚಾರಣೆ ನಡೆಸುತ್ತಿದ್ದಾಗ, ಸುಪ್ರೀಂಕೋರ್ಟ್ ಮಾಜಿ ಡಿಸಿಎಂ ಸಚಿನ್ ಪೈಲಟ್, ಇತರ ಶಾಸಕರು ಮತ್ತು ಕೇಂದ್ರ ಸರ್ಕಾರಕ್ಕೆ ಈ ಕುರಿತು ಉತ್ತರಿಸುವಂತೆ ನೋಟಿಸ್ ಜಾರಿಗೊಳಿಸಿತ್ತು.
ಇದನ್ನೂ ಓದಿ: ಕೆಂಪು ಕೋಟೆ ಹಿಂಸಾಚಾರ: ರೈತ ಮುಖಂಡ ಸೇರಿ ಇಬ್ಬರು 'ಸಂಚುಕೋರರು' ಅರೆಸ್ಟ್
ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಬಣ ಹಾಗೂ ಸಚಿನ್ ಪೈಲಟ್ ಬಣದ ನಡುವೆ ತೀವ್ರ ಸಂಘರ್ಷ ನಡೆದಿತ್ತು. ಈ ಹಿನ್ನೆಲೆಯಲ್ಲಿ ಬಂಡಾಯ ಎದ್ದಿದ್ದ ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ವಿಪ್ ಮಹೇಶ್ ಜೋಶಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಆ ಬಳಿಕ ಎರಡೂ ಬಣಗಳ ನಡುವೆ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಸಂಧಾನ ನಡೆದಿತ್ತು. ಹೀಗಾಗಿ ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನ ಅಲ್ಲಿನ ಸರ್ಕಾರ ಹಿಂಪಡೆಯಲು ನಿರ್ಧರಿಸಿದೆ.