ಆಗ್ರಾ (ಉತ್ತರಪ್ರದೇಶ) : ಯಮುನಾಪರ್ ಎತ್ಮದ್ ಉದ್ ದೌಲಾ ಪೊಲೀಸ್ ಠಾಣೆ ವ್ಯಾಪ್ತಿಯ ದುರ್ಗಾ ಪಂಡಾಲ್ನಲ್ಲಿ ಭಾನುವಾರ ತಡರಾತ್ರಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಜನ ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ. ಈ ವೇಳೆ ನೂಕು ನುಗ್ಗಲು ಸಂಭವಿಸಿದ್ದು, ಕಾಲ್ತುಳಿತಕ್ಕೆ ಸಿಲುಕಿ ಗರ್ಭಿಣಿಯೊಬ್ಬರು ರಸ್ತೆ ಬದಿಯ ಹೊಂಡಕ್ಕೆ ಬಿದ್ದಿದ್ದರಿಂದ ಮಹಿಳೆಯೊಂದಿಗೆ ಗರ್ಭದಲ್ಲಿದ್ದ ಮಗುವೂ ಮೃತಪಟ್ಟಿರುವ ಘಟನೆ ನಡೆದಿದೆ.
ಬೆಂಕಿಯ ಭೀತಿಯಿಂದ ಕಾಲ್ತುಳಿತ: ಎತ್ಮದ್ ಉದ್ ದೌಲಾ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕಾಶ್ ನಗರದಲ್ಲಿ ನವರಾತ್ರಿಯ ಕಾರಣದಿಂದ ದುರ್ಗಾ ಪಂಡಾಲ್ ಅನ್ನು ಅಲಂಕರಿಸಲಾಗಿತ್ತು. ಭಾನುವಾರ ರಾತ್ರಿ ಎಂದಿನಂತೆ ಇಲ್ಲಿ ಭಜನೆ ಕೀರ್ತನೆ ನಡೆಯುತ್ತಿತ್ತು. ಮಕ್ಕಳು ಸೇರಿದಂತೆ ನೂರಾರು ಮಹಿಳೆಯರು, ಪುರುಷರು ಪಾಲ್ಗೊಂಡಿದ್ದರು. ಆಗ ಏಕಾಏಕಿ ದುರ್ಗಾ ಪಂಡಾಲ್ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಇದರಿಂದ ಪಂಡಾಲ್ನ ಬೆಳಕು ಆರಿಹೋಗಿ ಕತ್ತಲು ಆವರಿಸಿದೆ. ಪಂಡಾಲ್ನಲ್ಲಿ ಬೆಂಕಿಯ ಭೀತಿಯಿಂದ ಕಾಲ್ತುಳಿತ ಉಂಟಾಗಿದೆ. ಈ ವೇಳೆ 7 ತಿಂಗಳ ಗರ್ಭಿಣಿ ಪಾಯಲ್ ಕತ್ತಲಲ್ಲಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದಿದ್ದಾರೆ. ಈ ವೇಳೆ ಆಕೆ ಮೂರ್ಛೆ ಹೋಗಿದ್ದಾರೆ.
ಗರ್ಭದಲ್ಲಿರುವ ಮಗು ಮೃತ: ಮಾಹಿತಿ ಸಿಕ್ಕ ತಕ್ಷಣ ನೆರೆಹೊರೆಯವರು, ಸಂಬಂಧಿಕರು ಪಾಯಲ್ ಎಂಬಾಕೆಯನ್ನು ಗುಂಡಿಯಿಂದ ಹೊರತರಲು ಯತ್ನಿಸಿದ್ದಾರೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕೂಡಾ ದಾಖಲಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಅವರನ್ನು ಎಸ್ಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾರೆ. ತಡರಾತ್ರಿ ಎಸ್ಎನ್ ಮೆಡಿಕಲ್ ಕಾಲೇಜಿನಲ್ಲಿ ಮಹಿಳೆ ಮತ್ತು ಆಕೆಯ ಗರ್ಭದಲ್ಲಿರುವ ಮಗು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಪಾಯಲ್ಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ ಎಂದು ಹೇಳಲಾಗುತ್ತಿದೆ. ಪಾಯಲ್ ಸಾವಿನ ನಂತರ ಕುಟುಂಬದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪಾಯಲ್ ಅವರ ಪತಿ ಕುಟುಂಬವನ್ನು ಪೋಷಿಸಲು ಕೂಲಿ ಕೆಲಸ ಮಾಡುತ್ತಾರೆ. ಈಗ ಅವರು ದುಃಖಿತರಾಗಿದ್ದಾರೆ.
ಓದಿ: ಅಪಘಾತದಲ್ಲಿ ಪಂಜಾಬಿ ಗಾಯಕ ಅಲ್ಫಾಜ್ಗೆ ಗಾಯ: ಆಸ್ಪತ್ರೆಗೆ ದಾಖಲು