ಕೋಲ್ಕತ್ತಾ : ಮುಂದಿನ ವರ್ಷದ ನಿರ್ಣಾಯಕ ವಿಧಾನಸಭಾ ಚುನಾವಣೆಗೆ ಮುನ್ನವೇ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿಗೆ ಪ್ರಮುಖ ಕ್ಷೇತ್ರ ಡಾರ್ಜಿಲಿಂಗ್ನ ಚಹಾದ ಹಬೆ ತಟ್ಟಲು ಶುರುವಾಗಿದೆ.
ಮೂರು ವರ್ಷಗಳ ವಿರಾಮದ ಬಳಿಕ ಡಾರ್ಜಿಲಿಂಗ್ನ ಹಿಲ್ಸ್ ಮತ್ತು ತೆರೈ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಟಿಎಂಸಿ ಎರಡೂ ಪಕ್ಷಗಳಿಗೂ ದೊಡ್ಡದೊಂದು ಸವಾಲು ಎದುರಾಗಿದೆ. ಅದೇನೆಂದರೆ, 2017 ರಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸಿದ ಆರೋಪದ ಮೇಲೆ ಹಲವು ಪ್ರಕರಣಗಳನ್ನು ದಾಖಲಿಸಲ್ಪಟ್ಟು, ಬಳಿಕ ತಲೆ ಮರೆಸಿಕೊಂಡಿದ್ದ ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಮಾಜಿ ಮುಖ್ಯಸ್ಥ ಬಿಮಲ್ ಗುರುಂಗ್ ಮತ್ತೆ ಕಣಿವೆ ನಾಡು ಡಾರ್ಜಿಲಿಂಗ್ಗೆ ಪ್ರವೇಶ ಮಾಡಿದ್ದಾರೆ.
2017ರಲ್ಲಿ ಡಾರ್ಜಿಲಿಂಗ್ನ ಬೆಟ್ಟ ಪ್ರದೇಶಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆದಿತ್ತು. ಈ ವೇಳೆ ಘರ್ಷಣೆ ನಡೆದು ಪೊಲೀಸ್ ಗುಂಡಿಗೆ 11 ಪ್ರತಿಭಟನಾಕಾರರು ಬಲಿಯಾಗಿದ್ದರು. ಒಬ್ಬ ಸಹಾಯಕ ಸಬ್ ಇನ್ಸ್ಪೆಕ್ಟರ್ ಕೂಡ ಮೃತಪಟ್ಟಿದ್ದರು.
ಬಳಿಕ ಬೆಟ್ಟ ಪ್ರದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿದ ಆರೋಪದ ಮೇಲೆ ಗುರುಂಗ್ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇದಾದ ಬಳಿಕ, ಗುರುಂಗ್ ನವದೆಹಲಿ, ಸಿಕ್ಕಿಂ, ನೇಪಾಳ ಮತ್ತು ಜಾರ್ಖಂಡ್ನಲ್ಲಿ ತಲೆಮರೆಸಿಕೊಂಡಿದ್ದರು ಎಂದು ಹೇಳಲಾಗ್ತಿದೆ.
ಹೀಗೆ, ಮೂರು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಬಿಮಲ್ ಗುರುಂಗ್, ಕಳೆದ ಅಕ್ಟೋಬರ್ 21ರಂದು ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಗುರುಂಗ್ ಮತ್ತೆ ಡಾರ್ಜಿಲಿಂಗ್ ಪ್ರವೇಶ ಮಾಡಿರುವುದು, ಟಿಎಂಸಿ ಮತ್ತು ಬಿಜೆಪಿ ಪಕ್ಷಗಳ ತಲೆ ಬಿಸಿ ಮಾಡಿದೆ. ಕಾರಣ ಗುರುಂಗ್ ಡಾರ್ಜಿಲಿಂಗ್ನ ಬಹು ಸಂಖ್ಯಾಂತ ಪಂಗಡ ಪ್ರತಿನಿಧಿಸುವ ಗೂರ್ಖಾ ಜನಮುಕ್ತಿ ಮೋರ್ಚಾದ ಪ್ರಬಲ ನಾಯಕ. 2007ರಿಂದ ಗೂರ್ಖಾ ಜನಮುಕ್ತಿ ಮೋರ್ಚಾ ಬಿಜೆಪಿಯನ್ನು ಬೆಂಬಲಿಸುತ್ತಿತ್ತು.
ಇದರಿಂದಾಗಿಯೇ, ಬಿಜೆಪಿ ಡಾರ್ಜಿಲಿಂಗ್ ಲೋಕಸಭಾ ಕ್ಷೇತ್ರವನ್ನು ಸತತ ಮೂರು ಬಾರಿ ಗೆದ್ದಿತ್ತು. ಆದರೆ, ಮೂರು ವರ್ಷಗಳ ನಂತರ ಮತ್ತೆ ಪ್ರತ್ಯಕ್ಷವಾದ ಗುರುಂಗ್, ಬಿಜೆಪಿ ನಮ್ಮ ಪತ್ಯೇಕ ರಾಜ್ಯ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಿಲ್ಲ, ನಾವು ಇನ್ನು ಮುಂದೆ ಬಿಜೆಪಿಗೆ ಬೆಂಬಲಿಸಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿಯನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ.
ಜಿಜೆಎಂ ಪಕ್ಷ, ಟಿಎಂಸಿಯನ್ನು ಬೆಂಬಲಿಸುವುದಾಗಿ ಘೋಷಿಸುರುವುದು ದೀದಿ ಪಡೆಗೆ ಒಂದು ರೀತಿ ನೆರವಾದ್ರೆ, ಮತ್ತೊಂದೆಡೆ, ಅವರ ಪತ್ಯೇಕ ರಾಜ್ಯದ ಸವಾಲು ಎದುರಿಸಬೇಕಾದ ಸಂದಿಗ್ಥತೆಯಿದೆ. ಪ್ರತ್ಯೇಕ ರಾಜ್ಯದ ಬೇಡಿಕೆ, ಉತ್ತರ ಬಂಗಾಳದ ಗೂರ್ಖಾಗಳಿಗೆ ಒಂದು ಶತಮಾನಕ್ಕಿಂತಲೂ ಹಳೆಯದು.
1907ರಲ್ಲಿ ಡಾರ್ಜಿಲಿಂಗ್ ಹಿಲ್ಸ್ನಲ್ಲಿ ಹಿಲ್ಮೆನ್ಸ್ ಅಸೋಸಿಯೇಶನ್ ಆಫ್ ಡಾರ್ಜಿಲಿಂಗ್ (ಹೆಚ್ಎಡಿ) ಮೊಟ್ಟ ಮೊದಲನೆಯದಾಗಿ ಪತ್ಯೇಕ ರಾಜ್ಯದ ಕಹಳೆ ಮೊಳಗಿಸಿತ್ತು. ಡಾರ್ಜಿಲಿಂಗ್ ಮತ್ತು ಜಲ್ಪೈಗುರಿಗಳನ್ನು ಒಳಗೊಂಡ ಪ್ರತ್ಯೇಕ ರಾಜ್ಯಕ್ಕಾಗಿ ಹೆಚ್ಎಡಿ ಬಂಗಾಳ ಸರ್ಕಾರ, ಕೇಂದ್ರ ಸರ್ಕಾರದ ಕಾರ್ಯದರ್ಶಿ ಮತ್ತು ವೈಸ್ರಾಯ್ಗೆ ಮನವಿ ಸಲ್ಲಿಸುವುದರೊಂದಿಗೆ 1917ರಲ್ಲಿ ಹೋರಾಟ ಇನ್ನಷ್ಟು ಹೆಚ್ಚಾಯಿತು.
ಬ್ರಿಟಿಷರು ಗೂರ್ಖಾ ಸಮುದಾಯದ ಈ ಹೋರಾಟವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಗೂರ್ಖಾಗಳು ಮಾತ್ರ ತಮ್ಮ ಬೇಡಿಕೆಯನ್ನು ಕೈಬಿಟ್ಟಿರಲಿಲ್ಲ. 1929ರ ಸೈಮನ್ ಆಯೋಗಕ್ಕಿಂತ ಮುಂಚೆ, 1930 ಮತ್ತು 1941ರಲ್ಲಿ ಡಾರ್ಜಿಲಿಂಗ್ನ ಬಂಗಾಳ ಪ್ರಾಂತ್ಯದಿಂದ ಬೇರ್ಪಡಿಸುವ ಬೇಡಿಕೆ ಮುಂದುವರೆಯಿತು. 1952ರಲ್ಲಿ ಹೋರಾಟದ ಕಾವು ಹೆಚ್ಚಾಯಿತು.
ಅಖಿಲ ಭಾರತೀಯ ಗೂರ್ಖಾ ಲೀಗ್, ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಕಾಲಿಂಪಾಂಗ್ನಲ್ಲಿ ಭೇಟಿಯಾಗಿ, ಗೂರ್ಖಾಗಳನ್ನು ಬಂಗಾಳದಿಂದ ಬೇರ್ಪಡಿಸುವಂತೆ ಮತ್ತು ಆರ್ಥಿಕ ಸ್ವಾತಂತ್ರ್ಯ ನೀಡುವಂತೆ ಒತ್ತಾಯಿಸಿತ್ತು.
ಅಂದಿನಿಂದ ಇಂದಿನವರೆಗೂ, ಗೂರ್ಖಾಗಳ ಪ್ರತ್ಯೇಕ ರಾಜ್ಯದ ಹೋರಾಟ ಮಾತ್ರ ನಿಂತಿಲ್ಲ. ಇದೀಗ, ಬಿಜೆಎಂ ಟಿಎಸಿಂಯನ್ನು ಬೆಂಬಲಿಸುರುವುದರಿಂದ ಡಾರ್ಜಿಲಿಂಗ್ ಗೆಲ್ಲುವ ಕನಸಿನಲ್ಲಿ ಮಮತಾ ಬ್ಯಾನರ್ಜಿ ಇದ್ದಾರೆ. ಆದರೆ, ಅವರಿಗೆ ಗೂರ್ಖಾಗಳ ಪ್ರತ್ಯೇಕ ರಾಜ್ಯದ ಬೇಡಿಕೆ ಸವಾಲಾಗಲಿದೆ.
ಇನ್ನೊಂಡೆ ಬಿಜೆಪಿಗೆ ಗೂರ್ಖಾಗಳ ಅಸಮಾಧಾನಕ್ಕೆ ಗುರಿಯಾಗಿ ಡಾರ್ಜಿಲಿಂಗ್ ಅಸ್ತಿತ್ವ ಉಳಿಸಿಕೊಳ್ಳುವ ಸಾಹಸದಲ್ಲಿದೆ. ಹೀಗಾಗಿ, ಈ ಬಾರಿಯ ಚುನಾವಣೆಯಲ್ಲಿ ಡಾರ್ಜಿಲಿಂಗ್ ಚಹಾದ ಹಬೆಯು ಎರಡೂ ಪಕ್ಷಗಳಿಗೂ ಸರಿಯಾಗೆ ತಟ್ಟುವ ಸಾಧ್ಯತೆಯಿದೆ.