ಭುವನೇಶ್ವರ್ (ಒಡಿಶಾ): ಭುವನೇಶ್ವರದಲ್ಲಿ ಆಟೋ ಚಾಲಕರೊಬ್ಬರು ತಮ್ಮ ಎಲೆಕ್ಟ್ರಿಕ್ ಆಟೋವನ್ನು ಸೌರಶಕ್ತಿ ಚಾಲಿತ ವಾಹನವನ್ನಾಗಿ ಪರಿವರ್ತಿಸಿದ್ದಾರೆ. ಆಟೋದ ಮೇಲ್ಛಾವಣಿಯ ಮೇಲೆ ಸೌರ ಫಲಕವನ್ನು ಇರಿಸಲಾಗಿದೆ. ವಿಶೇಷವೆಂದರೆ ಈ ಸೋಲಾರ್ ರಿಕ್ಷಾ ಕಾರ್ಯ ನಿರ್ವಹಿಸುತ್ತಿದ್ದು, ಅದರ ಮೂಲಕವೇ ಜೀವನ ಸಾಗಿಸುತ್ತಿದ್ದಾರೆ. ಈ ಹೊಸ ಪರಿಕಲ್ಪನೆಯನ್ನು ಪರಿಚಯಿಸಿರುವ ರೀತಿ ಜನರ ಗಮನ ಸೆಳೆಯುತ್ತಿದೆ. ಆಟೋ ಚಾಲಕ ಶ್ರೀಕಾಂತ್ ಪಾತ್ರಾ (35) ಎಂಬುವರು ಯುಟ್ಯೂಬ್ ಸಹಾಯದಿಂದ ಈ ಆವಿಷ್ಕಾರ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು "ನಾನು ಕಳೆದ 15 ವರ್ಷಗಳಿಂದ ಆಟೋ ರಿಕ್ಷಾ ಓಡಿಸುತ್ತಿದ್ದೇನೆ. ದಿನಕ್ಕೆ 300-400 ರೂಪಾಯಿ ಗಳಿಸುತ್ತಿದ್ದೆ. ಈ ಆದಾಯ ಕುಟುಂಬ ನಿರ್ವಹಣೆಯ ಜತೆಗೆ ಇಂಧನ ವೆಚ್ಚವನ್ನೂ ಭರಿಸಲು ಸಾಕಾಗುತ್ತಿರಲಿಲ್ಲ. ಇದರಿಂದ ನಾವು ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದೆವು. ಜತೆಗೆ ನನ್ನ ಮಕ್ಕಳ ಶಿಕ್ಷಣ ಶುಲ್ಕವನ್ನು ಭರಿಸಲಾಗದ ಪರಿಸ್ಥಿತಿಯಲ್ಲಿದ್ದೆವು.
ಸುಮಾರು ಒಂದೂವರೆ ವರ್ಷಗಳ ಹಿಂದೆ, ನಾನು ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಖರೀದಿಸಿ ನಗರದಲ್ಲಿ ಓಡಿಸುತ್ತಿದ್ದೆ. ಆದರೆ ಕಡಿಮೆ ಬ್ಯಾಟರಿ ಮತ್ತು ಚಾರ್ಜಿಂಗ್ ಸಮಸ್ಯೆ ಪ್ರತಿ ದಿನ ಕಿರಿಕಿರಿಯನ್ನುಂಟು ಮಾಡಿತು. ಇದು ಕೆಲಸ ಮತ್ತು ಜೀವನೋಪಾಯದ ಮೇಲೆ ಕೆಟ್ಟ ಪರಿಣಾಮ ಬೀರಿತು. ಕಡಿಮೆ ಬ್ಯಾಟರಿ ಮತ್ತು ಚಾರ್ಜಿಂಗ್ ಸಮಸ್ಯೆಗಳಿಂದ ನಾನು ತೊಂದರೆಗೊಳಗಾಗಿದ್ದೆ ಎಂದರು.
ಯುಟ್ಯೂಬ್ ಸಹಾಯದಿಂದ ಆವಿಷ್ಕಾರ: "ಈ ವೇಳೆ ನನ್ನ 6ನೇ ತರಗತಿಯ ಮಗಳು ಒಮ್ಮೆ ಯೂಟ್ಯೂಬ್ ವೀಕ್ಷಿಸಿ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಸೌರಶಕ್ತಿಯ ವಾಹನವನ್ನಾಗಿ ಪರಿವರ್ತಿಸಲು ನನಗೆ ಸಲಹೆ ನೀಡಿದ್ದಳು. ಆಗ ನಾನು ಸಹ ಯೋಚಿಸಿದೆ. ಇ-ರಿಕ್ಷಾವನ್ನು ಸೋಲಾರ್ ರಿಕ್ಷಾವನ್ನಾಗಿ ಪರಿವರ್ತಿಸುವುದು ಹೇಗೆ? ಎಂದು ನೋಡಿ ಕಾರ್ಯಪ್ರವೃತ್ತನಾದೆ. ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಸೌರ ಚಾಲಿತ ವಾಹನವನ್ನಾಗಿ ಪರಿವರ್ತಿಸುವ ನನ್ನ ಮಗಳ ಆಲೋಚನೆಗಳನ್ನು ನಾನು ಪ್ರಶಂಸಿಸುತ್ತೇನೆ. ಈಗ ನಾನು ಇಂಧನ ತುಂಬುವಿಕೆ, ಬ್ಯಾಟರಿ ಚಾರ್ಜಿಂಗ್ ಸಮಸ್ಯೆಗಳಿಂದ ಮುಕ್ತನಾಗಿದ್ದೇನೆ. ಈ ಆಟೋ ರಿಕ್ಷಾ ಮಾಲಿನ್ಯ ಮುಕ್ತವಾಗಿದೆ ಮತ್ತು ನಮ್ಮ ಪರಿಸರವನ್ನು ಹಸಿರು ಮತ್ತು ಸ್ವಚ್ಛವಾಗಿಡುತ್ತದೆ" ಎಂದು ಪಾತ್ರಾ ಹೇಳಿದರು.
ಇಂಧನ ಶುಲ್ಕವಿಲ್ಲ: ಸದ್ಯ ನನ್ನ ಬಳಿ ಇರುವ ರಿಕ್ಷಾ ಸಂಪೂರ್ಣ ಸೌರಶಕ್ತಿ ಚಾಲಿತವಾಗಿದೆ. ಇದಕ್ಕೆ ಯಾವುದೇ ರೀತಿಯ ಇಂಧನ ತುಂಬುವ ಅಗತ್ಯವಿಲ್ಲ. ಬ್ಯಾಟರಿಯನ್ನು ಚಾರ್ಜ್ ಮಾಡುವ ಬಗ್ಗೆ ಚಿಂತಿಸಬೇಕಾಗಿಲ್ಲ. ಅಷ್ಟೇ ಅಲ್ಲ, ಇದು ಯಾವುದೇ ರೀತಿಯ ಮಾಲಿನ್ಯವನ್ನು ಹರಡುವುದಿಲ್ಲ. ಈ ರೀತಿಯಾಗಿ ಪರಿಸರವನ್ನು ಸಂರಕ್ಷಿಸುವಲ್ಲಿ ನಾನು ಸಹ ಸಹಾಯ ಮಾಡಬಹುದು ಎಂದರು.
ಹೆಚ್ಚಿದ ಗಳಿಕೆ: "ಹೊಸ ಸೌರಶಕ್ತಿ ಚಾಲಿತ ಆಟೋ ರಿಕ್ಷಾ ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದ ನಂತರ 140 ಕಿ.ಮೀ ವರೆಗೆ ಆರಾಮವಾಗಿ ಚಲಿಸುತ್ತದೆ. ಈ ಸೋಲಾರ್ ಆಟೋ-ರಿಕ್ಷಾ ಪ್ರಯಾಣಿಕರಿಗೆ ಅತ್ಯಂತ ಸುಗಮ ಪ್ರಯಾಣವನ್ನು ಒದಗಿಸುತ್ತದೆ. ನಾನು ದಿನಕ್ಕೆ 1300-1500 ರೂ.ಗಳಿಸುತ್ತೇನೆ. ಇದರಿಂದ ರಾಜ್ಯ ರಾಜಧಾನಿಯಲ್ಲಿ ಸಂತೋಷದ ಜೀವನ ನಡೆಸುತ್ತಿದ್ದೇನೆ" ಎಂದು ಹರ್ಷ ವ್ಯಕ್ತಪಡಿಸಿದರು.
ಹಣಕಾಸಿನ ಸಮಸ್ಯೆಗಳಿಂದಾಗಿ ಪಾತ್ರಾ 8ನೇ ತರಗತಿಗೆ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿದ್ದರಂತೆ. ಮೂಲತಃ ನಯಾಗರ್ ಜಿಲ್ಲೆಯವರಾಗಿದ್ದ ಇವರು ಕೆಲವು ವರ್ಷಗಳಿಂದ ಭುವನೇಶ್ವರದಲ್ಲಿ ನೆಲೆಸಿದ್ದಾರೆ.
ಇದನ್ನೂ ಓದಿ: ಕೇವಲ ₹1.50 ವೆಚ್ಚದಲ್ಲಿ 50 ಕಿಮೀ ಚಲಿಸುವ ಸೈಕಲ್; ರಿಚಾರ್ಜೇಬಲ್ ಇ-ಬೈಕ್ ತಯಾರಿಸಿದ ವಿದ್ಯಾರ್ಥಿ