ಸೂರತ್(ಗುಜರಾತ್): ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಬಣ್ಣ ಬಯಲಾಗಿದೆ. ಈಗ ಈ ಸಂಸ್ಥೆಯು ಭಾರತೀಯ ಸೇನೆಯ ಮಾಹಿತಿಯನ್ನು ಡಾರ್ಕ್ನೆಟ್ ಮೂಲಕ ಪಡೆಯುತ್ತಿದೆ. ಐಎಸ್ಐ ಏಜೆಂಟ್ಗೆ ಸೇನೆಯ ಮಾಹಿತಿ ನೀಡಿದ ದೀಪಕ್ ಸಾಳುಂಕೆ ಎಂಬ ಆರೋಪಿಯನ್ನು ಸೂರತ್ ಕ್ರೈಂ ಬ್ರಾಂಚ್ ಬಂಧಿಸಿದೆ.
ಪಾಕಿಸ್ತಾನಿ ಬ್ಯಾಂಕ್ನೊಂದಿಗೆ ವಹಿವಾಟು ನಡೆಸಿದ್ದ ತನಿಖೆಯಲ್ಲಿ ಆರೋಪಿಯ ಬಣ್ಣ ಬಯಲಾಗಿದೆ. ಪಾಕಿಸ್ತಾನಿ ಏಜೆಂಟ್ಗೆ ನೀಡಿದ ಮಾಹಿತಿಗಾಗಿ ಕ್ರಿಪ್ಟೋಕರೆನ್ಸಿ ಮೂಲಕ ಹಣದ ವ್ಯವಹಾರ ನಡೆದಿರುವುದು ತಿಳಿದುಬಂದಿದೆ. ದೀಪಕ್ ಜತೆಗಿನ ವಹಿವಾಟು ಕೂಡ ಪಾಕಿಸ್ತಾನಿ ಬ್ಯಾಂಕ್ ಮೂಲಕ ನಡೆದಿದೆ. ಅಷ್ಟೇ ಅಲ್ಲ, ಪಾಕಿಸ್ತಾನದ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿರುವ ನೂರ್ ಫಾತಿಮಾ ಬಗ್ಗೆಯೂ ಪೊಲೀಸರಿಗೆ ಹಲವು ಮಾಹಿತಿ ಸಿಕ್ಕಿದೆ.
ಸೈಬರ್ ಭಯೋತ್ಪಾದನೆ: ಭಾರತೀಯ ಸೇನೆಯ ಬಗ್ಗೆ ಮಾಹಿತಿ ಪಡೆಯಲು ಪಾಕಿಸ್ತಾನ ಈಗ ಸೈಬರ್ ಭಯೋತ್ಪಾದನೆಯನ್ನು ಮಾಧ್ಯಮವಾಗಿ ಬಳಸುತ್ತಿದೆ. ಇದಕ್ಕಾಗಿ ಮಾಹಿತಿದಾರರು ಹಣ ಕಳುಹಿಸುತ್ತಿರುವುದು ಹವಾಲಾ ಮೂಲಕ ಅಲ್ಲ, ಕ್ರಿಪ್ಟೋಕರೆನ್ಸಿ ಮೂಲಕ. ಐಎಸ್ಐ ಏಜೆಂಟ್ ಹಮೀದ್ಗೆ ಮಾಹಿತಿ ರವಾನಿಸಿದ್ದಕ್ಕಾಗಿ ಸೂರತ್ ಕ್ರೈಂ ಬ್ರಾಂಚ್ ದೀಪಕ್ ಸಾಳುಂಕೆಯನ್ನು ಬಂಧಿಸಿದ ನಂತರ ಈ ಆಘಾತಕಾರಿ ವಿಷಯ ಬಹಿರಂಗವಾಗಿದೆ.
ಪಾಕಿಸ್ತಾನದ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ: ಆರೋಪಿ ದೀಪಕ್ ಸಾಳುಂಕೆ ತನ್ನ ಫೇಸ್ಬುಕ್ ಮೆಸೆಂಜರ್ ಮತ್ತು ವಾಟ್ಸಾಪ್ ಮೂಲಕ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್ಐನ ಹಮೀದ್ ಜೊತೆ ಸಂಪರ್ಕದಲ್ಲಿದ್ದನು. ಭಾರತೀಯ ಸೇನೆಯ ಇನ್ಫಾಂಟ್ರಿ ರೆಜಿಮೆಂಟ್ ಆರ್ಟಿಲರಿ ಮತ್ತು ಬ್ರಿಗೇಡ್ ಮಾಹಿತಿ ಹಾಗೂ ಭಾರತೀಯ ಸೇನೆಯ ವಾಹನಗಳ ಚಲನವಲನದ ಬಗ್ಗೆ ಪ್ರಮುಖ ರಹಸ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ವಾಟ್ಸಾಪ್ ಸಂದೇಶಗಳ ಮೂಲಕ, ಭಾರತೀಯ ಸಿಮ್ ಕಾರ್ಡ್ಗಳನ್ನು ಪಡೆದ ನಂತರ ಕರೆ ಮಾಡುವ ಮೂಲಕ ಹಂಚಿಕೊಂಡಿದ್ದಾನೆ. ಈ ಕೆಲಸಕ್ಕಾಗಿ ಆರೋಪಿ ದೀಪಕ್ಗೆ ಪಾಕಿಸ್ತಾನದ ಬ್ಯಾಂಕ್ ಖಾತೆಯಿಂದಲೂ ಹಣ ವರ್ಗಾವಣೆಯಾಗಿದೆ ಎಂದು ಸೂರತ್ ಪೊಲೀಸ್ ಮೂಲಗಳು ತಿಳಿಸಿವೆ.
ನೂರ್ ಫಾತಿಮಾ ಯಾರು?: ಸೂರತ್ನ ದೀಪಕ್ ಸಾಳುಂಕೆ ಎಂಬಾತ ಬಿಎಸ್ಎಫ್ ಯೋಧನಂತೆ ಐಡಿ ತಯಾರಿಸಿ ಸಿಕ್ಕಿಬಿದ್ದಿದ್ದಾನೆ. ನೂರ್ ಫಾತಿಮಾ ವಹಾಬ್ದಿಂದ ದೀಪಕ್ ಪಾಕಿಸ್ತಾನಿ ಏಜೆಂಟ್ ಜೊತೆ ಆನ್ಲೈನ್ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ. ಹನಿಟ್ರ್ಯಾಪ್ ಬಗ್ಗೆ ಪೊಲೀಸ್ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ನೂರ್ ಫಾತಿಮಾ ಮೂಲತಃ ಬಿಹಾರದವರು. ಇವರು ಬಹಳ ಹಿಂದಿನಿಂದಲೂ ರಾಜಸ್ಥಾನದಲ್ಲಿ ನೆಲೆಸಿದ್ದರು.
ನೂರ್ ಖಾತೆಯಿಂದ ಹಣ ವರ್ಗಾವಣೆ: ಈ ನೂರ್ ಪಾಕಿಸ್ತಾನಿ ಏಜೆನ್ಸಿ ಐಎಸ್ಐಗಾಗಿ ಕೆಲಸ ಮಾಡುವ ಏಜೆಂಟ್ ಹಮೀದ್ ಕೈಗೆ ತಗಲಾಕಿಕೊಂಡಿದ್ದಳು. ಆನ್ಲೈನ್ ಹನಿಟ್ರ್ಯಾಪ್ಗಳಲ್ಲಿ ಸೇನೆಯ ಮಾಹಿತಿ ಪಡೆಯಲು ಪಾಕಿಸ್ತಾನಿ ಏಜೆಂಟ್ ಹಮೀದ್ ಈಕೆಯನ್ನು ಉಪಯೋಗಿಸಿಕೊಂಡಿದ್ದನು. ನೂರ್ ಖಾತೆಯಿಂದ ದೀಪಕ್ ಖಾತೆಗೆ 6 ಬಾರಿ ಹಣ ವರ್ಗಾವಣೆಯಾಗಿದೆ. ಪಾಕಿಸ್ತಾನದ ಕರಾಚಿಯ ಬ್ಯಾಂಕ್ ಅಲ್ಫಲಾಹ್ ಇಸ್ಲಾಮಿಕ್ ಬ್ಯಾಂಕ್ನ ಖಾತೆದಾರ ಅಲಿಕುಮ್ ಖಾನ್ ನವೆಂಬರ್ನಲ್ಲಿ ಹಣವನ್ನು ವರ್ಗಾಯಿಸಿರುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ.
ಗುಜರಾತ್ನ ಸೈಬರ್ ತಜ್ಞ ಸ್ನೇಹಲ್ ವಕೆಲಿನಾ ಈ ಕುರಿತು ಮಾತನಾಡಿ, ಈ ಹಿಂದೆ ಹವಾಲಾ ಮೂಲಕ ಹಣ ನೀಡಲಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ ಮತ್ತು ಕ್ರಿಪ್ಟೋ ಕರೆನ್ಸಿ ಮೂಲಕ ವಹಿವಾಟು ನಡೆಸಲಾಗುತ್ತಿದೆ. ಇದು ಅತ್ಯಂತ ಗಂಭೀರ ಪರಿಸ್ಥಿತಿಯಾಗಿದೆ. ಭಾರತಕ್ಕೆ ಸಂಬಂಧಿಸಿದಂತೆ, ಕ್ರಿಪ್ಟೋಕರೆನ್ಸಿಗಳಿಗೆ ಯಾವುದೇ ಕಾನೂನು ಇಲ್ಲ ಎಂದರು.
ಡಾರ್ಕ್ನೆಟ್ ಎಂಬುದು ಇನ್ನೊಂದು ಪ್ರಪಂಚ. ಡಾರ್ಕ್ನೆಟ್ ಅನ್ನು ವಿಶೇಷ ಬ್ರೌಸರ್ ಮೂಲಕ ಪ್ರವೇಶಿಸಬಹುದು. ಅಲ್ಲಿ ನೀವು ವಿವಿಧ ಲಿಂಕ್ಗಳನ್ನು ಪಡೆಯುತ್ತೀರಿ. ಈ ಮೂಲಕ ವಿವಿಧ ವಹಿವಾಟುಗಳನ್ನು ಮಾಡಬಹುದು ಮತ್ತು ಈ ವ್ಯವಹಾರಗಳು ಅತ್ಯಂತ ಗೌಪ್ಯವಾಗಿರುತ್ತವೆ. ಐಪಿ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದಾಗ ಅಪರಾಧಿಗಳನ್ನು ಹಿಡಿಯುವುದು ತುಂಬಾ ಸವಾಲಿನ ಸಂಗತಿಯಾಗುತ್ತದೆ. ಡಾರ್ಕ್ ನೆಟ್ ಮೂಲಕ ವಹಿವಾಟು ನಡೆಸಿದಾಗ ಕ್ರಿಪ್ಟೋಕರೆನ್ಸಿಗಳನ್ನು ಸೈಬರ್ ಅಪರಾಧಿಗಳು ಹೆಚ್ಚಾಗಿ ಬಳಸುತ್ತಾರೆ.
ಸೈಬರ್ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ: ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಎಫ್ ಸೈಬರ್ ಭಯೋತ್ಪಾದನೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಲಾಗುತ್ತಿದೆ. ಆರೋಪಿಗಳ ವಿಚಾರಣೆ ವೇಳೆ ಶಾಕಿಂಗ್ ವಿವರ ಬೆಳಕಿಗೆ ಬಂದಿದ್ದು, ದೀಪಕ್ 2022ರ ಮೇ ತಿಂಗಳಿನಿಂದ ಕರಾಚಿಯ ಹಮೀದ್ ಜತೆ ಸಂಪರ್ಕದಲ್ಲಿದ್ದಾರೆ. ರಾಜಸ್ಥಾನದ ಪೋಖ್ರಾನ್ ಸೇನಾ ನೆಲೆಯ ಚಿತ್ರಗಳನ್ನು ಹಮೀದ್ಗೆ ಕಳುಹಿಸಲಾಗಿದೆ. ಪೋಖ್ರಾನ್ನಲ್ಲಿ ಸೇನೆಯ ಚಟುವಟಿಕೆಗಳ ಬಗ್ಗೆ ತಿಳಿಸಲು ಸಾಳುಂಕೆ ಹಣ ತೆಗೆದುಕೊಂಡಿದ್ದ.
ಇದುವರೆಗೆ ಸಾಳುಂಕೆ ಖಾತೆಗೆ ಒಟ್ಟು 75,856 ರೂ. ಜಮವಾಗಿದೆ. ಹಾಗಾಗಿ ಬಿಸಿನೆಸ್ ವಾಟ್ಸಾಪ್ನಲ್ಲಿ ಸಾಳುಂಕೆ ಬಿಎಸ್ಎಫ್ ಯೋಧನಂತೆ ಮಾತನಾಡುತ್ತಿದ್ದನು. ಪೊಲೀಸರ ಬಂಧನಕ್ಕೂ ಮುನ್ನ ಸಾಳುಂಕೆ ತನ್ನ ವಾಟ್ಸಾಪ್ ಚಾಟ್ಗಳನ್ನೆಲ್ಲ ಡಿಲೀಟ್ ಮಾಡಿದ್ದ. ದೀಪಕ್ ಸಾಳುಂಕೆ ಕ್ರಿಪ್ಟೋ ಕರೆನ್ಸಿ ಎಕ್ಸ್ಚೇಂಜರ್ 'ಬಿನಾನ್ಸ್' ನಲ್ಲಿಯೂ ಖಾತೆಯನ್ನು ಹೊಂದಿದ್ದನಂತೆ.
ಪಾಕಿಸ್ತಾನಿ ಹಮೀದ್ 226 USDT ಕ್ರಿಪ್ಟೋಕರೆನ್ಸಿಯನ್ನು ದೀಪಕ್ಗೆ ಕಳುಹಿಸಿದ್ದಾರೆ. ತನಿಖೆಯಲ್ಲಿ ಕ್ರಿಪ್ಟೋಕರೆನ್ಸಿ ಕಳುಹಿಸಿದ್ದ ಮೊಹಮ್ಮದ್ ಹೆಸರು ಬಯಲಿಗೆ ಬಂದಿದೆ. ಪ್ರದೀಪ್ ಎಂಬ ಹೆಸರನ್ನು ಅಳವಡಿಸಿಕೊಂಡು ಮಾತನಾಡುತ್ತಿದ್ದರು. ದೀಪಕ್ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಭರತ್ ರಜಪೂತ್ ಹೆಸರಿನಲ್ಲಿ ಖಾತೆಯನ್ನೂ ರಚಿಸಿದ್ದ. ನಂತರ ಹವಾಲಾ ಚಟುವಟಿಕೆಗಳನ್ನು ಮಾಡುತ್ತಿದ್ದ ಸಾಳುಂಕೆ ಒಟ್ಟು 13 ಫೇಸ ಬುಕ್ ಗ್ರೂಪ್ಗಳಿಗೂ ಸೇರಿಕೊಂಡಿರುವುದು ತನಿಖೆ ಮೂಲಕ ತಿಳಿದು ಬಂದಿದೆ.
ಓದಿ: ಪಾಕಿಸ್ತಾನದ ಐಎಸ್ಐಗೆ ದೇಶದ ಸೂಕ್ಷ್ಮ ಮಾಹಿತಿ ಸೋರಿಕೆ.. ಗುಜರಾತ್ನಲ್ಲಿ ಜವಳಿ ವ್ಯಾಪಾರಿ ಬಂಧನ