ಲಕ್ನೋ (ಉತ್ತರ ಪ್ರದೇಶ): ಮಾಡೆಲಿಂಗ್ ಮತ್ತು ಸಿನಿಮಾ ಜಗತ್ತಿನಲ್ಲಿ ಹೆಸರು ಗಳಿಸುವ ಉದ್ದೇಶದಿಂದ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅಭಿಷೇಕ್ ಸಿಂಗ್ ಅವರು ವಿವಿಧ ಕಾರಣಗಳಿಗಾಗಿ ಉತ್ತರ ಪ್ರದೇಶದ ಅಧಿಕಾರಶಾಹಿ ವರ್ಗದಲ್ಲಿ ಬಹುಚರ್ಚಿತ ವ್ಯಕ್ತಿಯೂ ಹೌದು. ಗುಜರಾತ್ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ವೀಕ್ಷಕರಾಗಿದ್ದ ಇವರು ಸರ್ಕಾರಿ ಕಾರಿನೆದುರು ನಿಂತು ಕ್ಲಿಕ್ಕಿಸಿದ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು. ಇದಾದ ಬಳಿಕ ಚುನಾವಣಾ ಆಯೋಗ ಕರ್ತವ್ಯದಿಂದ ವಜಾಗೊಳಿಸಿತ್ತು. ಈ ವರ್ಷವೂ ಇವರನ್ನು ಕೆಲಸದಲ್ಲಿ ನಿರ್ಲಕ್ಷ್ಯ ಮತ್ತು ಇತರ ಕೆಲವು ಕಾರ್ಯಗಳಿಗಾಗಿ ಅಮಾನತುಗೊಳಿಸಲಾಗಿದೆ.
ಅಭಿಷೇಕ್ ಸಿಂಗ್ ಅವರು ಐಎಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗ್ಪಾಲ್ ಅವರ ಪತಿ. ಅಖಿಲೇಶ್ ಸರ್ಕಾರದಲ್ಲಿ ಬಂಡಾಯ ಧೋರಣೆಯನ್ನು ಇವರು ಅನುಸರಿಸಿ ಸುದ್ದಿಯಾಗಿದ್ದರು.
ಸಿನಿಮಾದಲ್ಲಿ ನಟಿಸುವ ಬಯಕೆ: ಅಭಿಷೇಕ್ ಸಿಂಗ್ ಯುಪಿ ಕೇಡರ್ನ 2011ರ ಬ್ಯಾಚ್ ಅಧಿಕಾರಿ. 2015ರಲ್ಲಿ ಮೂರು ವರ್ಷಗಳ ಕಾಲ ದೆಹಲಿ ಸರ್ಕಾರದಲ್ಲಿ ಡೆಪ್ಯುಟೇಶನ್ ನೀಡಲಾಗಿತ್ತು. 2018ರಲ್ಲಿ, ಡೆಪ್ಯುಟೇಶನ್ ಅವಧಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಲಾಯಿತು. ಈ ಸಮಯದಲ್ಲಿ ಅವರು ವೈದ್ಯಕೀಯ ರಜೆ ಮೇಲೆ ತೆರಳಿದ್ದರು. ಆದ್ದರಿಂದ, ದೆಹಲಿ ಸರ್ಕಾರವು 19 ಮಾರ್ಚ್ 2020 ರಂದು, ಪೇರೆಂಟ್ ಕೇಡರ್ ಯುಪಿಗೆ ಕಳುಹಿಸಿತ್ತು. ಇದಾದ ನಂತರ ಯುಪಿಯಲ್ಲಿ ಇವರು ದೀರ್ಘಕಾಲ ಕಾಲ ಸೇವೆಯಲ್ಲಿ ಕಳೆಯಲಿಲ್ಲ. ನೇಮಕಾತಿ ಇಲಾಖೆ ಅಭಿಪ್ರಾಯ ಕೇಳಿದಾಗಲೂ ಗೈರುಹಾಜರಾತಿಗೆ ಯಾವುದೇ ಸಮರ್ಪಕ ಉತ್ತರ ನೀಡಿರಲಿಲ್ಲ.
![IAS officer Abhishek Singh Resigned](https://etvbharatimages.akamaized.net/etvbharat/prod-images/04-10-2023/up-luc-01-ias-abhishek-7210474_04102023071953_0410f_1696384193_643.jpg)
ಗುಜರಾತ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅಭಿಷೇಕ್ ಸಿಂಗ್ ಭಾರಿ ಚರ್ಚೆಗೆ ಗ್ರಾಸವಾಗಿದ್ದರು. ಚುನಾವಣಾ ಆಯೋಗಕ್ಕೆ ಕಳುಹಿಸಲಾದ ವೀಕ್ಷಕರ ಪಟ್ಟಿಯಲ್ಲಿ ಇವರ ಹೆಸರನ್ನು ಸೇರಿಸಲಾಗಿತ್ತು. ಅಂತೆಯೇ ವೀಕ್ಷಕರ ಕರ್ತವ್ಯವನ್ನು ವಹಿಸಿಕೊಂಡಿದ್ದರು. ವೀಕ್ಷಕರಾಗಿ ನಿಯೋಜಿಸಲ್ಪಟ್ಟಾಗ, ತಮ್ಮ ಫೋಟೋವನ್ನು Instagramನಲ್ಲಿ ಪೋಸ್ಟ್ ಮಾಡಿದ್ದರು. ಚುನಾವಣಾ ಆಯೋಗವು 18 ನವೆಂಬರ್ 2022 ರಂದು ಅಧಿಕಾರಿಯ ನಡವಳಿಕೆ ಸೂಕ್ತವಲ್ಲದ ಕಾರಣ ಹುದ್ದೆಯಿಂದ ತೆಗೆದುಹಾಕಿತು. ಕರ್ತವ್ಯದಿಂದ ತೆಗೆದುಹಾಕಲ್ಪಟ್ಟ ನಂತರ, ಅಭಿಷೇಕ್ ಪುನಃ ಕರ್ತವ್ಯಕ್ಕೆ ಸೇರಿರಲಿಲ್ಲ. ತಮ್ಮ ಗೈರು ಹಾಜರಾತಿ ಬಗ್ಗೆ ನೇಮಕಾತಿ ಇಲಾಖೆ ಮಾಹಿತಿಯನ್ನೂ ಕೊಟ್ಟಿರಲಿಲ್ಲ.
ಇದನ್ನೂ ಓದಿ: ಲಂಡನ್ನಿಂದ ಶಿವಾಜಿಯ ವಾಘ್ನಖ್ ಮರಳಿ ತರುವ ಒಪ್ಪಂದಕ್ಕೆ ಸಹಿ ಹಾಕಿದ ಮಹಾ ಸಚಿವರು