ಪುಣೆ (ಮಹಾರಾಷ್ಟ್ರ): ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ದಂಪತಿ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ. ಬಟ್ಟೆ ತೊಳೆಯುವಾಗ ಕಾಲು ಜಾರಿ ಬಾವಿಗೆ ಬಿದ್ದ ಪತ್ನಿಯನ್ನು ರಕ್ಷಿಸಲು ಹೋದ ಪತಿ ಸಹ ಮೃತಪಟ್ಟಿದ್ದಾರೆ.
ಜಿಲ್ಲೆಯ ಜುನ್ನಾರ್ ತಾಲೂಕಿನ ಬುಡಕಟ್ಟು ಪ್ರದೇಶದ ಕುಕಡೇಶ್ವರ ಗ್ರಾಮದಲ್ಲಿ ದುರಂತ ಜರುಗಿದೆ. ಸಾಗರ್ ಬಾಲು ದಿವ್ಟೆ ಮತ್ತು ಪ್ರಿಲಿಕ್ ಸಾಗರ್ ದಿವ್ಟೆ ಮೃತ ದುರ್ದೈವಿಗಳು. ಇಬ್ಬರಿಗೂ ಆರು ತಿಂಗಳ ಹಿಂದೆ ವಿವಾಹವಾಗಿತ್ತು.
ಪ್ರಿಲಿಕ್ ಮನೆಯ ಸಮೀಪದ ಬಾವಿ ಬಳಿ ಬಟ್ಟೆ ತೊಳೆಯಲು ಹೋದಾಗ ಕಾಲು ಜಾರಿ ಬಾವಿಯೊಳಗೆ ಬಿದ್ದು, ಜೋರಾಗಿ ಕಿರುಚಲು ಪ್ರಾರಂಭಿಸಿದ್ದಾರೆ. ಇದನ್ನು ಕೇಳಿಸಿಕೊಂಡ ಪತಿ ಸಾಗರ್ ಪತ್ನಿಯನ್ನು ರಕ್ಷಿಸಲೆಂದು ತಾನು ಕೂಡ ಬಾವಿಗೆ ಹಾರಿದ್ದಾರೆ. ಆದರೆ, ಸಾಗರ್ಗೂ ಈಜಲು ಬರುತ್ತಿರಲಿಲ್ಲ. ಅಲ್ಲದೇ, ಈ ಸಮಯದಲ್ಲಿ ಸುತ್ತ ಮುತ್ತ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ.
ಸ್ವಲ್ಪ ಸಮಯದ ನಂತರ ಬಾವಿಯ ಬಳಿ ಮೊಬೈಲ್ ಪತ್ತೆಯಾಗಿದೆ. ಜೊತೆಗೆ ಬಾವಿಯಲ್ಲಿ ಬಕೆಟ್ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಆಗ ಸಾಗರ್ ಹಾಗೂ ಪ್ರಿಲಿಕ್ ಇಬ್ಬರೂ ಬಾವಿಯಲ್ಲಿ ಮುಳುಗಿರುವುದು ಗೊತ್ತಾಗಿದೆ.
ಇದನ್ನೂ ಓದಿ: ಬೈಕ್ನಲ್ಲಿ ಅಪಾಯಕಾರಿ ಸ್ಟಂಟ್: 15 ದಿನ ಜೀವನ್ಮರಣದ ಹೋರಾಟ, ಬದುಕಲಿಲ್ಲ ಯುವಕ