ಸೊಲ್ಲಾಪುರ(ಮಹಾರಾಷ್ಟ್ರ): ಮದುವೆಯಾಗಲು ತನಗೆ ಹುಡುಗಿ ಸಿಗುತ್ತಿಲ್ಲ ಎಂದು ನೊಂದಿದ್ದ ಯುವಕನೊಬ್ಬ, 'ಬಾಲ್ಯ ವಿವಾಹ ಯಾಕೆ ಮಾಡಲಿಲ್ಲ' ಎಂದು ಕೋಪಗೊಂಡು ತನ್ನ ಅಜ್ಜಿಯನ್ನೇ ಹೊಡೆದು ಕೊಂದ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ.
ಮಲಂಬಿ ಹಸನ್ ಸಾಹಬ್ ನದಾಫ್ (70) ಕೊಲೆಯಾದ ಅಜ್ಜಿ. ಸಲೀಂ ಜಹಾಂಗೀರ್ ನದಾಫ್ ಕೊಲೆ ಮಾಡಿದ ಆರೋಪಿ. ಕರ್ನಾಟಕದ ಕಲಬುರಗಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸಲೀಂನನ್ನು ಸೊಲ್ಲಾಪುದಲ್ಲಿರುವ ಅಜ್ಜಿ ಮಲಂಬಿ ಈಚೆಗಷ್ಟೇ ಕರೆಸಿಕೊಂಡಿದ್ದಳು. ಈ ವೇಳೆ ನದಾಫ್ ವಿವಾಹದ ವಿಚಾರವಾಗಿ ಚರ್ಚೆ ನಡೆದಿದೆ. ಹುಡುಗಿ ಸಿಗದೇ ಬೇಸತ್ತಿದ್ದ ಸಲೀಂ ಜಹಾಂಗೀರ್ ಅಜ್ಜಿಯ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾನೆ. ಸ್ಥಳದಲ್ಲೇ ಮೂರ್ಛೆ ಹೋದ ಅಜ್ಜಿ ಮಲಂಬಿ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಹುಡುಗಿ ಹುಡುಕಿ ಸುಸ್ತಾಗಿದ್ದ ಸಲೀಂ: ಕಲಬುರಗಿಯಲ್ಲಿ ಕೆಲಸ ಮಾಡಿಕೊಂಡಿರುವ ಸಲೀಂ ಜಹಾಂಗೀರ್ ವಿವಾಹವಾಗಲು ಕೆಲ ದಿನಗಳಿಂದ ಹುಡುಗಿ ಹುಡುಕಾಡುತ್ತಿದ್ದ. ಆದರೆ, ಎಲ್ಲಿಯೂ ನಿಶ್ಚಯವಾಗದ ಕಾರಣ ಬೇಸತ್ತಿದ್ದ. ಸಲೀಂಗೆ ಇದು ಅವನ ಕುಟುಂಬದವರ ಮೇಲೆಯೇ ಸಿಟ್ಟು ತರಿಸಿತ್ತು.
ಅಜ್ಜಿಯ ಆಹ್ವಾನದ ಮೇರೆಗೆ ಸೊಲ್ಲಾಪುರಕ್ಕೆ ಹೋದಾಗ ತನಗೆ ಯಾಕೆ ಬಾಲ್ಯ ವಿವಾಹ ಮಾಡಲಿಲ್ಲ ಎಂದು ವರಾತೆ ತೆಗೆದಿದ್ದಾನೆ. ಅಜ್ಜಿ ಮತ್ತು ಮೊಮ್ಮಗನ ಮಧ್ಯೆ ವಿವಾಹದ ವಿಚಾರಕ್ಕೆ ಜೋರು ಗಲಾಟೆ ನಡೆದಿದೆ. ಈ ವೇಳೆ ಅಲ್ಲಿಯೇ ಇದ್ದ ದೊಣ್ಣೆಯಿಂದ ಅಜ್ಜಿ ಮಲಂಬಿ ತಲೆಗೆ ಬಾರಿಸಿದ್ದಾನೆ. ಇದರಿಂದ ಅಜ್ಜಿ ರಕ್ತಸ್ರಾವವಾಗಿ ಕುಸಿದು ಬಿದ್ದಿದ್ದಾಳೆ.
ಆಸ್ಪತ್ರೆಗೆ ದಾಖಲಿಸಿದರೂ ಅಜ್ಜಿ ಮಲಂಬಿ ಬದುಕುಳಿಯಲಿಲ್ಲ. ಅಜ್ಜಿಯನ್ನು ಕೊಂದ ಆರೋಪದ ಮೇಲೆ ಸಲೀಂ ಜಹಾಂಗೀರ್ ವಿರುದ್ಧ ಫಿರೋಜ್ ಶುಕೂರ್ ನದಾಫ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಲೀಂನನ್ನು ಬಂಧಿಸಲಾಗಿದೆ.
ಓದಿ: ಯುವತಿಗೆ ಸಂದೇಶ ಕಳುಹಿಸಿದ ಆರೋಪ: ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ