ನೆಲ್ಲೂರು(ಆಂದ್ರಪ್ರದೇಶ): ಈ ಊರಿನಲ್ಲೊಂದು ವಿಶೇಷ ದೇವಸ್ಥಾನವಿದೆ. ಆದರೆ ಇದು ಯಾವುದೇ ದೇವರ ದೇವಸ್ಥಾನವಲ್ಲ. ಬದಲಾಗಿ ತಂದೆಯೊಬ್ಬರು ತಮ್ಮ ಮಗಳಿಗಾಗಿ ಪ್ರೀತಿಯಿಂದ ಕಟ್ಟಿಸಿದ ದೇವಸ್ಥಾನವಿದು. ಅಗಲಿದ ಮಗಳನ್ನು ಮರೆಯಲಿಕ್ಕಾಗದ ತಂದೆ ಆಕೆಯ ನೆನಪಲ್ಲಿ ದೇವಸ್ಥಾನ ಕಟ್ಟಿಸಿದ್ದಾರೆ. ಪ್ರತಿವರ್ಷ ಇಲ್ಲಿ ಹಬ್ಬವನ್ನೂ ಆಚರಿಸಲಾಗುತ್ತದೆ. ಇಂಥದೊಂದು ವಿಶೇಷ ದೇವಾಲಯ ಇರುವುದು ನೆಲ್ಲೂರಿನ ವೆಂಕಟಾಚಲಂ ಮಂಡಲದ ಕಾಕುತೂರಿನಲ್ಲಿ.
ದೇವಸ್ಥಾನ ಕಟ್ಟಿಸಿದ ಹಿಂದಿನ ಕಥೆ: ಗ್ರಾಮದ ಚೆಂಚಯ್ಯ ಮತ್ತು ಲಕ್ಷ್ಮಮ್ಮ ದಂಪತಿಗೆ ಐವರು ಮಕ್ಕಳು. ನಾಲ್ಕನೆಯ ಮಗಳು ಸುಬ್ಬಲಕ್ಷ್ಮಮ್ಮ. ಆಕೆಯ ಜನನದ ನಂತರ ಕುಟುಂಬವು ಆರ್ಥಿಕವಾಗಿ ಸದೃಢವಾಯಿತು. ಕುಟುಂಬಕ್ಕೆ ಸಮಾಜದಲ್ಲಿ ಉತ್ತಮ ಗೌರವಾದರಗಳು ದೊರೆತವು.
ಸುಬ್ಬಲಕ್ಷ್ಮಮ್ಮ ಪದವಿ ಮುಗಿಸಿ ಅರಣ್ಯ ಇಲಾಖೆಯಲ್ಲಿ ನೌಕರಿ ಸೇರಿದಾಗ ತಂದೆ ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ 2011ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಬ್ಬಲಕ್ಷ್ಮಮ್ಮ ವಿಧಿವಶರಾದರು. ಈ ದುರ್ಘಟನೆಯಿಂದ ತಂದೆ-ತಾಯಿ ಇಬ್ಬರೂ ಮಗಳ ಅಗಲಿಕೆಯ ಶೋಕದಲ್ಲಿ ಮುಳುಗಿ ಹೋದರು.
ಆದರೆ ಮಗಳು ಸುಬ್ಬಲಕ್ಷ್ಮಮ್ಮ ತಂದೆಯ ಕನಸಿನಲ್ಲಿ ಬಂದು ತನಗಾಗಿ ದೇವಸ್ಥಾನ ಕಟ್ಟಿಸುವಂತೆ ಹೇಳಿದಳಂತೆ. ಅದರಂತೆ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎಂದು ಚೆಂಚಯ್ಯ 'ಈಟಿವಿ ಭಾರತ'ಕ್ಕೆ ತಿಳಿಸಿದರು. ಅಂದಿನಿಂದ ಈ ದೇವಸ್ಥಾನದಲ್ಲಿ ಮಗಳ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ.
ಇದನ್ನೂ ಓದಿ: 'ಸ್ವಾಮಿಯೇ ಶರಣಂ ಅಯ್ಯಪ್ಪ..': ಶಬರಿಮಲೆಯಲ್ಲಿ ಭಕ್ತಸಾಗರ