ಮಹಾಸಮುಂಡ್ (ಛತ್ತೀಸ್ಗಢ): ಛತ್ತೀಸ್ಗಢದಲ್ಲಿ ಕೋವಿಡ್-19 ಪ್ರಕರಣಗಳನ್ನು ನಿರ್ವಹಿಸುವ ಆಸ್ಪತ್ರೆಗಳ ಪರಿಸ್ಥಿತಿ ಕರುಣಾಜನಕವಾಗಿದೆ. ಮಹಾಸಮುಂಡ್ನ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತ ಯುವಕನೊಬ್ಬ ಆಸ್ಪತ್ರೆಯಲ್ಲಿ ಖಾಲಿ ಹಾಸಿಗೆಗಳಿಲ್ಲದ ಕಾರಣ ಮೂರು ಗಂಟೆಗಳ ಕಾಲ ಆಮ್ಲಜನಕ ಸಿಲಿಂಡರ್ನೊಂದಿಗೆ ಕುರ್ಚಿಯ ಮೇಲೆಯೇ ಕುಳಿತಿದ್ದ ಘಟನೆ ನಡೆದಿದೆ.
ಇತ್ತೀಚೆಗೆ ಸಂಸದೀಯ ಕಾರ್ಯದರ್ಶಿ ಆಸ್ಪತ್ರೆಗೆ ಭೇಟಿ ನೀಡಿದಾಗ ಈ ಅವ್ಯವಸ್ಥೆ ಗಮನಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಹಾಸಮುಂಡ್ನ ಯುವಕನೊಬ್ಬನಲ್ಲಿ ಕೊರೊನಾ ದೃಢಪಟ್ಟಿದ್ದು, ಉಸಿರಾಟದ ತೊಂದರೆಯಿಂದಾಗಿ ಆತ ಜಿಲ್ಲಾ ಆಸ್ಪತ್ರೆಗೆ ತಲುಪಿದ್ದ. ಹಾಸಿಗೆಗಳು ಖಾಲಿಯಾಗಿಲ್ಲದ ಕಾರಣ, ಆಸ್ಪತ್ರೆಯಲ್ಲಿ ಆತನಿಗೆ ಆಮ್ಲಜನಕದ ಸಿಲಿಂಡರ್ ನೀಡಿ ಆವರಣದಲ್ಲಿರುವ ಕುರ್ಚಿಯ ಮೇಲೆ ಕೂರಿಸಲಾಯಿತು.
ಘಟನೆಯ ಕುರಿತು ಭಾರೀ ಆಕ್ರೋಶದ ನಂತರ, ಆಸ್ಪತ್ರೆಯು ಯುವಕನಿಗೆ ಹಾಸಿಗೆಯ ವ್ಯವಸ್ಥೆ ಮಾಡಿ, ಚಿಕಿತ್ಸೆ ಮುಂದುವರಿಸಿದೆ.