ನವದೆಹಲಿ: ಕೇಂದ್ರ ಕಲ್ಲಿದ್ದಲು ಸಚಿವಾಲಯ ಶುಕ್ರವಾರ ಖಾಸಗಿ ವಲಯದ ಹೂಡಿಕೆದಾರರ ಉನ್ನತ ಮಟ್ಟದ ಸಭೆಯನ್ನ ಕರೆದಿದೆ. ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಮುಂಬೈನಲ್ಲಿ ಈ ಸಭೆಯನ್ನು ಆಯೋಜಿಸಲಾಗಿದೆ. ಕೋಲ್ ಇಂಡಿಯಾ ಲಿಮಿಟೆಡ್ನ (ಸಿಐಎಲ್) ಮುಚ್ಚಿದ ಕಲ್ಲಿದ್ದಲು ಗಣಿಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಈ ಗಣಿಗಳನ್ನು ತೆರೆಯಲು ಬಂಡವಾಳ ಹೂಡಿಕೆ ಉತ್ತೇಜಿಸಲು ಸಚಿವರು ಹೂಡಿಕೆದಾರರ ಜೊತೆ ಚರ್ಚಿಸಲಿದ್ದಾರೆ ಎಂದು ಕಲ್ಲಿದ್ದಲು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
CIL ಮತ್ತು FICCI ಸಹಯೋಗದಲ್ಲಿ ಕಲ್ಲಿದ್ದಲು ಸಚಿವಾಲಯ ಈ ಹೂಡಿಕೆದಾರರ ಸಮಾವೇಶ ಆಯೋಜಿಸಿದೆ. ಕಲ್ಲಿದ್ದಲು, ಗಣಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ರಾವ್ಸಾಹೇಬ್ ಪಾಟೀಲ್ ದಾನ್ವೆ ಅವರು ಉನ್ನತ ಮಟ್ಟದ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಕಲ್ಲಿದ್ದಲು ಕಾರ್ಯದರ್ಶಿ ಅನಿಲ್ ಕುಮಾರ್ ಜೈನ್ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು, ಸಿಐಎಲ್ ಮತ್ತು ವಲಯದ ತಜ್ಞರು ದಿನದ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಪೂರ್ವಾಹ್ನ ನಡೆಯುವ ಅಧಿವೇಶನದಲ್ಲಿ, ಮುಚ್ಚಿದ ಅಥವಾ ಸ್ಥಗಿತಗೊಂಡ ಕಲ್ಲಿದ್ದಲು ಗಣಿಗಳ ಮರು ಪ್ರಾರಂಭ, ಅದರಲ್ಲಿನ ಅವಕಾಶಗಳು ಮತ್ತು ಆದಾಯ ಹಂಚಿಕೆ ಮಾದರಿಗೆ ಸಂಬಂಧಿಸಿದ ಅಂಶಗಳ ಕುರಿತು ಹೂಡಿಕೆದಾರರೊಂದಿಗೆ ಮಾತುಕತೆಗಳು ನಡೆಯಲಿವೆ. ಭಾರತದಲ್ಲಿ ಕಲ್ಲಿದ್ದಲು ಅನಿಲೀಕರಣ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ.