ಮುಂಬೈ: ಟೂಲ್ಕಿಟ್ ಪ್ರಕರಣದ ಸಂಬಂಧ ಬಂಧನ ಭೀತಿ ಎದುರಿಸುತ್ತಿರುವ ವಕೀಲೆ ನಿಕಿತಾ ಜಾಕೋಬ್ಗೆ 3 ವಾರಗಳ ನಿರೀಕ್ಷಣಾ ಜಾಮೀನು ನೀಡಿ ಬಾಂಬೆ ಹೈಕೋರ್ಟ್ ಆದೇಶ ಹೊರಡಿಸಿದೆ.
ದೆಹಲಿಯಲ್ಲಿ ಗಣರಾಜ್ಯೋತ್ಸವ ಗಲಭೆಗೆ ಟೂಲ್ಕಿಟ್ ಬಳಸಿದ ಆರೋಪದ ಮೇಲೆ ವಕೀಲೆ ನಿಕಿತಾ ಜಾಕೋಬ್ ಮತ್ತು ಸಾಮಾಜಿಕ ಹೋರಾಟಗಾರ ಶಾಂತನು ಮುಲುಕ್ ವಿರುದ್ಧ ದೆಹಲಿ ಪೊಲೀಸರು ಅರೆಸ್ಟ್ ವಾರೆಂಟ್ ಹೊರಡಿಸಿದ್ದರು. ಈ ಹಿನ್ನೆಲೆ ಇಬ್ಬರೂ ನಿರೀಕ್ಷಣಾ ಜಾಮೀನು ಕೋರಿ ಬಾಂಬೆ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು.
ನಿನ್ನೆ ಈ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಸಾಮಾಜಿಕ ಹೋರಾಟಗಾರ ಶಾಂತನುಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ನಿಕಿತಾ ಜಾಕೋಬ್ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಮುಂದೂಡಿತ್ತು.
ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ನಿಕಿತಾ ಜಾಕೋಬ್ಗೆ 3 ವಾರಗಳ ನಿರೀಕ್ಷಣಾ ಜಾಮೀನು ನೀಡಿದೆ.
ಇದನ್ನೂ ಓದಿ: ದೆಹಲಿ ಹಿಂಸಾಚಾರ ಪ್ರಕರಣದ ಮೋಸ್ಟ್ ವಾಂಟೆಡ್ ಆರೋಪಿ ಅರೆಸ್ಟ್: ಈತನಿಗೆ ಪ್ರಚೋದಿಸಿತ್ತು ‘ಆ’ ವಿಡಿಯೋ!
ರೈತರ ಪ್ರತಿಭಟನೆಗೆ ಸಂಬಂಧಿಸಿದ 'ಟೂಲ್ಕಿಟ್' ಹರಡಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ವಕೀಲೆ ನಿಕಿತಾ ಜಾಕೋಬ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದ ನಂತರ, ಅವರು ಸೋಮವಾರ ಪೊಲೀಸ್ ಕ್ರಮದ ವಿರುದ್ಧ ರಕ್ಷಣೆಗಾಗಿ ಬಾಂಬೆ ಹೈಕೋರ್ಟ್ ಮೊರೆಹೋಗಿದ್ದರು.