ತಿರುವನಂತಪುರಂ : ವಿದೇಶದಿಂದ ಕೇರಳಕ್ಕೆ ಬರುವ ಎಲ್ಲರೂ ಕೋವಿಡ್-19 ನೆಗೆಟಿವ್ ವರದಿ ತೆಗೆದುಕೊಂಡು ಬರಬೇಕು ಎಂದು ಹೇಳಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿರ್ಧಾರವನ್ನು ವಿರೋಧಿಸಿ ಯುಡಿಎಫ್ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗಿದೆ.
ಪ್ರತಿಭಟನೆ ನಡೆಸಿದ ಪ್ರತಿಪಕ್ಷ ಬಿಜೆಪಿ ನಾಯಕ ರಮೇಶ್ ಚೆನ್ನಿಥಾಲಾ, ಸಿಎಂ ಪಿಣರಾಯಿ ವಿಜಯನ್ ಹೇಳುವುದು ಅವರ ಮಾಡುವು ಕೆಲಸದ ವಿರುದ್ಧವಾಗಿರುತ್ತೆ ಎಂದು ಗುಡುಗಿದ್ರು. ಕೊರೊನಾ ಬಿಕ್ಕಟ್ಟು ಉಲ್ಬಣಿಸಿದ್ದ ವೇಳೆ ವಲಸೆ ಕಾರ್ಮಿಕರೆದುರು ಮೊಸಳೆ ಕಣ್ಣೀರು ಸುರಿಸುತ್ತಿದ್ದರು. ಈಗ ಅವರಿಗೆ ಮೋಸ ಮಾಡುತ್ತಿದ್ದಾರೆಂದು ಎಲ್ಲರಿಗೂ ತಿಳಿದಿದೆ. ಶನಿವಾರದಿಂದಲೇ ರಾಜ್ಯಕ್ಕೆ ಪ್ರಯಾಣಿಸುವರೆಲ್ಲರೂ COVID ಪರೀಕ್ಷೆ ನೆಗೆಟಿವ್ ಬಂದಿರುವ ವರದಿ ತರಬೇಕೆಂಬ ನಿರ್ಧಾರವನ್ನು ಜೂನ್ 25ಕ್ಕೆ ಮುಂದೂಡಲಾಗಿದೆ. ಇದು ಅವರ ಮೂರ್ಖತನದ ನಿರ್ಧಾರ. ಇದನ್ನು ನಾವು ಒಪ್ಪುವುದಿಲ್ಲ ಎಂದು ಕಿಡಿಕಾರಿದ್ದಾರೆ.
ದೇಶದಲ್ಲಿ ಯಾರೂ ಈ ರೀತಿಯ ರೂಲ್ಸ್ ಮಾಡದೇ ಇದ್ದಾಗ ವಿಜಯನ್ ಮಾತ್ರ ಇದನ್ನು ಮಾಡುತ್ತಿದ್ದಾರೆ. ಯಾಕೆಂದ್ರೆ, ಅವರಿಗೆ ವಲಸೆಗಾರರು ತಮ್ಮ ರಾಜ್ಯಕ್ಕೆ ಬರುವುದು ಇಷ್ಟವಿಲ್ಲ ಎಂದು ಆರೋಪಿಸಿದ್ರು. ಅಲ್ಲದೇ ಸಿಎಂ ವಿಜಯನ್ ತಮ್ಮ ಈ ನಿರ್ಧಾರವನ್ನು ಬದಲಾಯಿಸುವವರೆಗೆ ನಾವು ನಮ್ಮ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಚೆನ್ನಿಥಾಲಾ ಹೇಳಿದರು.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರನ್ ಮಾತನಾಡಿ, ರಾಜ್ಯದಲ್ಲಿ ನಿಫಾ ವೈರಸ್ ಬಿಕ್ಕಟ್ಟು ಎದುರಾದಾಗ ಅದನ್ನು ನಿಭಾಯಿಸಲು ಕೇವಲ' ಅತಿಥಿ ಪಾತ್ರ' ನಿರ್ವಹಿಸಿದ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಮೊದಲು 'ನಿಫಾ ರಾಜಕುಮಾರಿ' ಅಂತಾ ಬಿರುದು ಗಳಿಸಿದ್ದರು. ಈಗ ವಲಸೆಗಾರರು ತಮ್ಮ ತವರಿಗೆ ವಾಪಸ್ಸಾಗಲು ಹೆಣಗಾಡುತ್ತಿರುವ ಈ ಹೊತ್ತಿನಲ್ಲಿ ಆಕೆ 'ಕೋವಿಡ್ ಕ್ವೀನ್' ಎಂಬ ಬಿರುದು ಗಳಿಸಲು ಪ್ರಯತ್ನಿಸುತ್ತಿದ್ದಾಳೆ ಎಂದು ಏಕ ವಚನದಲ್ಲಿ ರಾಮಚಂದ್ರನ್ ಹರಿಹಾಯ್ದಿದ್ದಾರೆ.
ಕೇರಳ ವಲಸೆಗಾರರಿಗೆ ವಿಶೇಷವಾಗಿ ವಿವಿಧ ಮಧ್ಯಪ್ರಾಚ್ಯ ದೇಶಗಳಿಂದ ಹಿಂದಿರುಗಿದವರಿಗೆ ಕಷ್ಟವಾಗುತ್ತಿರುವುದರಿಂದ ಈ ಕೋವಿಡ್-19ನೆಗೆಟಿವ್ ವರದಿ ತರುವ ನಿರ್ಧಾರವನ್ನು ಹಿಂಪಡೆಯುವಂತೆ ಪ್ರತಿಪಕ್ಷ ಬಿಜೆಪಿ ಒತ್ತಾಯಿಸುತ್ತಿದೆ. ಈ ಹಿನ್ನೆಲೆ ಸಿಎಂ ಪಿಣರಾಯಿ ವಿಜಯನ್ ನಿವಾಸದೆದುರು ಬಿಜೆಪಿ ಯುವಮೋರ್ಚಾ ಪ್ರತಿಭಟನಾ ಮೆರವಣಿಗೆ ನಡೆಸಿದೆ. ಅತ್ತ ವಿದೇಶದಲ್ಲಿರುವ ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ 'ವಂದೇ ಭಾರತ್ ಮಿಷನ್' ಅಡಿ ವಿಮಾನಗಳನ್ನು ಕಳಿಸುವ ಅತ್ಯುತ್ತಮ ಪ್ರಯತ್ನ ಮಾಡುತ್ತಿರುವಾಗ, ಇತ್ತ ಸಿಎಂ ಪಿಣರಾಯಿ ವಿಜಯನ್ ಅದನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ನಾಯಕ ಪಿ.ಸುಧೀರ್ ಗುಡುಗಿದ್ದಾರೆ.